ಲೋಕಸಭೆ ಚುನಾವಣೆಗೆ ಇನ್ನು ಮೂರು ವಾರಗಳಷ್ಟೇ ಬಾಕಿ ಇರುವಾಗ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ಗೆ ಮತ್ತೊಂದು ನೋಟಿಸ್ ನೀಡಿದೆ. ಈಗಾಗಲೇ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದ್ದು, ಸುಮಾರು 135 ಕೋಟಿ ರೂಪಾಯಿಯನ್ನು ಐಟಿ ಇಲಾಖೆಯು ಕಾಂಗ್ರೆಸ್ ಖಾತೆಯಿಂದ ವಿತ್ಡ್ರಾ ಮಾಡಿಕೊಂಡಿದೆ. ಈಗ ಲೆಕ್ಕಪತ್ರವಿಲ್ಲದ 524 ಕೋಟಿ ರೂಪಾಯಿ ವಹಿವಾಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಮತ್ತೊಂದು ನೋಟಿಸ್ ನೀಡಿದೆ. ಅದು ಕೂಡಾ 2014-2021 ಸಾಲಿನ ಲೆಕ್ಕಾಚಾರ ಇದಾಗಿದೆ.
2019ರ ಲೋಕಸಭೆ ಚುನಾವಣೆಗೂ ಮುನ್ನ ಐಟಿ ದಾಳಿಗಳನ್ನು ಮಾಡಲಾಗಿದ್ದು, ಈಗ 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ಗೆ ಮತ್ತೆ ಭಾರೀ ದಂಡ ವಿಧಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ನಡುವೆ ವಿಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ವಿಪಕ್ಷಗಳನ್ನು ಆರ್ಥಿಕವಾಗಿ ದಿವಾಳಿ ಮಾಡಲೆಂದೇ 1994-95ರ ಐಟಿ ರಿಟರ್ನ್ ಸಲ್ಲಿಕೆಯ ಲೆಕ್ಕಾಚಾರ ಹಾಕಲಾಗುತ್ತಿದೆ” ಎಂದು ಆರೋಪಿಸಿದೆ.
ಇದನ್ನು ಓದಿದ್ದೀರಾ? ₹210 ಕೋಟಿ ದಂಡ ವಿಧಿಸಿ ಕಾಂಗ್ರೆಸ್ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲಾಗಿದೆ: ರಾಹುಲ್ ಗಾಂಧಿ
ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸುಪ್ರೀಂ ಕೋರ್ಟ್ ವಕೀಲ, ಕಾಂಗ್ರೆಸ್ ಮುಖಂಡ ವಿವೇಕ್ ಕೃಷ್ಣ ತನ್ಕಾ “ಈಗ ಆದಾಯ ತೆರಿಗೆಯು 523.87 ಕೋಟಿ ರೂಪಾಯಿ ವಹಿವಾಟಿನ ಮೇಲೆ ಭಾರೀ ಪ್ರಮಾಣದ ದಂಡ ಮತ್ತು ಬಡ್ಡಿ ವಿಧಿಸುವ ನಿರೀಕ್ಷೆಯಿದೆ” ಎಂದು ಹೇಳಿದರು.
“ಲೋಕಸಭೆ ಚುನಾವಣೆಗೂ ಮುನ್ನ ನಮ್ಮ ಖಾತೆಯಿಂದ 135 ಕೋಟಿ ರೂಪಾಯಿ ವಿತ್ಡ್ರಾ ಮಾಡಿ ನಮ್ಮ ಆರ್ಥಿಕ ಶಕ್ತಿ ಕುಂದಿಸಿದ್ದು ಸಾಕಾಗಿಲ್ಲ ಅನಿಸುತ್ತದೆ. ಈಗ ನಮ್ಮ ಆರ್ಥಿಕ ಶಕ್ತಿಯನ್ನು ಇನ್ನಷ್ಟು ಕುಗ್ಗಿಸಲು ನೋಡುತ್ತಿದೆ. ಆದರೆ ಇನ್ನೇನು ಬಾಕಿ ಉಳಿದಿದೆ” ಎಂದು ವಿವೇಕ್ ಕೃಷ್ಣ ತನ್ಕಾ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿ ವಜಾ
ಇತ್ತೀಚೆಗೆ ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧವಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. 2014-15, 2015-16 ಮತ್ತು 2016-17 ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮರು ಮೌಲ್ಯಮಾಪನ ಮಾಡುವ ಆದೇಶವನ್ನು ಕಾಂಗ್ರೆಸ್ ಪ್ರಶ್ನಿಸಿತ್ತು.
ನಿಯಮವನ್ನು ಉಲ್ಲಂಘಿಸಿ ಹೆಚ್ಚುವರಿ ವರ್ಷಗಳ ಆದಾಯ ತೆರಿಗೆ ಮರು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಪರ ವಕೀಲ ಹಿರಿಯ ವಕೀಲ ಅಭಿಷೇಕ್ ಸಿಂಗ್ವಿ ಆದಾಯ ತೆರಿಗೆ ಇಲಾಖೆಯು ಆರು ವರ್ಷಕ್ಕಿಂತ ಹಳೆಯ ಆದಾಯ ತೆರಿಗೆಗಳ ಮರು ಮೌಲ್ಯಮಾಪನ ಮಾಡುತ್ತಿದೆ ಎಂದು ದೂರಿದ್ದರು.