ಕಾಂಗ್ರೆಸ್ ಪಕ್ಷ ಅಧಿಕಾರ ಹೊಂದಲು ಅಥವಾ ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತಿ ಹೊಂದಿಲ್ಲ. ನಮ್ಮ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಿಪಕ್ಷಗಳ ಮಹಾ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ರಾಜ್ಯ ಮಟ್ಟದಲ್ಲಿ ನಮ್ಮಲ್ಲಿ ಕೆಲವರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬುದು ನಮಗೆ ತಿಳಿದಿದೆ, ಈ ಭಿನ್ನಾಭಿಪ್ರಾಯಗಳು ಸೈದ್ಧಾಂತಿಕವಲ್ಲ, ಈ ಭಿನ್ನಾಭಿಪ್ರಾಯಗಳು ಅಷ್ಟು ದೊಡ್ಡದಲ್ಲ. ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ತೆರೆಮರೆಯಲ್ಲಿ ಮೌನವಾಗಿ ಹತ್ತಿಕ್ಕಲಾಗುತ್ತಿದೆ. ನಾವು ಇವರೆಲ್ಲರ ಪರ ಹೋರಾಟ ನಡೆಸುವುದು ಮುಖ್ಯವಾಗಿದೆ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ನಾವು 26 ಪಕ್ಷಗಳಿದ್ದು, 11 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಬಿಜೆಪಿ ಸ್ವತಃ 303 ಸ್ಥಾನಗಳನ್ನು ಪಡೆಯಲು ಸಾಧ್ಯವಾಗದೆ ಮಿತ್ರಪಕ್ಷಗಳ ಮತಗಳನ್ನು ಬಳಸಿತು. ಕೆಲಸವಾದ ನಂತರ ತಿರಸ್ಕರಿಸಿತು” ಸರ್ಕಾರದ ನೀತಿಯನ್ನು ಟೀಕಿಸಿದರು.
ಎರಡು ದಿನಗಳ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಎಂ ಕೆ ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೆನ್, ಮಮತಾ ಬ್ಯಾನರ್ಜಿ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದಾರೆ. ಜುಲೈ 17ರ ಮೊದಲ ದಿನದಂದು ಔತಣಕೂಟದಲ್ಲಿ ಭಾಗವಹಿಸದ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಕೂಡ ಇಂದಿನ ಚರ್ಚೆಯ ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಕಿಯಾ ಬೆಂಗಳೂರು: ಊಟ ಮಾಡುತ್ತಿರುವಾಗ ದಿಢೀರನೆ ತಟ್ಟೆ ಮೇಲೆ ಬಿದ್ದ ಸತ್ತ ಇಲಿ!
ವಿಪಕ್ಷಗಳ ಮೈತ್ರಿಕೂಟದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರನ್ನು ಅವರನ್ನು ನೇಮಿಸುವ ಸಾಧ್ಯತೆಯಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಮೈತ್ರಿಕೂಟಕ್ಕೆ ಹೆಸರು, ರಚನೆ ಮತ್ತು ಸಾಮಾನ್ಯ ಕಾರ್ಯಸೂಚಿಯನ್ನು ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ. ಸೋಮವಾರ ರಾತ್ರಿ ಔತಣಕೂಟದ ಸಭೆಯಲ್ಲಿ ಗುಂಪಿನ ಹೆಸರನ್ನು ಸೂಚಿಸಲು ಭಾಗವಹಿಸದ ಎಲ್ಲ ಪಕ್ಷಗಳನ್ನು ಕೇಳಲಾಯಿತು ಮತ್ತು ಸದ್ಯ ನಾಲ್ಕೈದು ಹೆಸರುಗಳು ಈಗ ಪರಿಗಣನೆಯಲ್ಲಿವೆ.
ಈ ಹಿಂದೆ ಸಂಯುಕ್ತ ಪ್ರಜಾಸತ್ತಾತ್ಮಕ ಒಕ್ಕೂಟದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು “ಭಾರತ” ಎಂಬ ಪದವನ್ನು ಹೆಸರಿಸುವುದು ಬೇಡ ಎಂದು ಪ್ರಸ್ತಾಪಿಸಿದರು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು “ಫ್ರಂಟ್” ಪದವನ್ನು ಕೈಬಿಡಲು ಶಿಫಾರಸು ಮಾಡಿದ್ದಾರೆ. ಸದ್ಯ “ಯುನೈಟೆಡ್ ವಿ ಸ್ಟ್ಯಾಂಡ್” ಎಂಬ ಅಡಿಬರಹ ಇರುತ್ತದೆ. ವಿರೋಧ ಪಕ್ಷಗಳು ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಒಳಗೊಂಡ ಎರಡು ಉಪಸಮಿತಿಗಳನ್ನು ಘೋಷಿಸುವ ಸಾಧ್ಯತೆಯಿದೆ.