ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಒಂದು ತಿಂಗಳ ಕಾಲ ‘ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ’ ಮೆರವಣಿಗೆ ನಡೆಯಲಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ ಮಹದೇವಪ್ಪ ಹಾಗೂ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒಗಳೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲಾ ಕೇಂದ್ರಗಳಿಂದ ಹೊರಡಲಿರುವ ಈ ಜಾಥಾವು ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಮತ್ತು ಇತರೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಜಿಲ್ಲೆಯಲ್ಲಿ ಸಂಚರಿಸುವಂತೆ ಜಿಲ್ಲಾಡಳಿತವು ಮಾರ್ಗನಕ್ಷೆ ರೂಪಿಸಿಕೊಳ್ಳಬೆಕು” ಎಂದು ನಿರ್ದೇಶನ ನೀಡಿದರು.
“ಸಂವಿಧಾನ ರೂಪಿಸಿ 75 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಇಡೀ ರಾಜ್ಯದ ಬಹುತೇಕ ಗ್ರಾಮಗಳನ್ನು ಒಳಗೊಂಡಂತೆ ಕಾರ್ಯಕ್ರಮ ರೂಪಿಸಲಾಗಿದೆ. ಸಂವಿಧಾನದ ಮಹತ್ವ ಹಾಗೂ ಈ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ಮಹಿಳೆಯರು, ಯುವಜನರು ಹಾಗೂ ನಾಗರಿಕರಿಗೆ ಬಹು ಮಾಧ್ಯಮಗಳ ಮೂಲಕ ಅರಿವು ಮೂಡಿಸಲು ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಮುಂದಿನ ತಿಂಗಳಲ್ಲಿ 36 ಸಾವಿರ ಮನೆ ಹಂಚಿಕೆ: ಜಮೀರ್ ಅಹಮದ್ ಖಾನ್
“ಸಂವಿಧಾನ ಪೀಠಿಕೆಯ ಮುದ್ರಿತ ಪ್ರತಿಗಳ ವಿತರಣೆ, ಬಸವಣ್ಣನವರ ಸಂದೇಶ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ತಜ್ಞರಿಂದ ಭಾಷಣ, ಜಾನಪದ ನೃತ್ಯ ಪ್ರದರ್ಶನ ಹಾಗೂ ಜಾಥದಲ್ಲಿ ಸಂಚರಿಸಲಿರುವ ಎಲ್.ಇ.ಡಿ ವಾಹನದ ಮೂಲಕ ವಿಡಿಯೋ ಪ್ರದರ್ಶಿಸುವ ಮೂಲಕ ನಮ್ಮ ಪರಂಪರೆಯನ್ನು ಅನಾವರಣಗೊಳಿಸಲಾಗುತ್ತದೆ” ಎಂದು ತಿಳಿಸಿದರು.
“ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸ್ಥಬ್ಧಚಿತ್ರಗಳನ್ನು ಸೃಜನಶೀಲವಾಗಿಸಲು ಜಿಲ್ಲಾ ಸಮಿತಿಗಳು ಯೋಚಿಸಬೇಕೆಂದು ಸೂಚಿಸಲಾಗಿದೆ. ಇನ್ನು ರಾಜ್ಯದ ಏಳು ಜಿಲ್ಲೆಗಳ ಹತ್ತು ಸ್ಥಳಗಳಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದು, ಆ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.