ರಾಜಕೀಯ ವೈಷಮ್ಯಕ್ಕಾಗಿ ಅಲ್ಪಸಂಖ್ಯಾತ ಮುಸ್ಲಿಮರನ್ನು ದ್ವೇಷ ಮಾಡುವ ಬಡಾಯಿ ಜನತಾ ಪಾರ್ಟಿ (ಬಿಜೆಪಿ) ಸತ್ಯವನ್ನು ತಿರುಚಿ ಸುಳ್ಳು ಸುದ್ದಿಗಳ ಮೂಲಕ ಜನರನ್ನು ಧಾರ್ಮಿಕವಾಗಿ ಕೆರಳಿಸುವ ಸಂಚನ್ನು ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಅವರು, “ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ಪರಿಪಾಲನೆಯ ಹಿನ್ನೆಲೆಯಲ್ಲಿ ಕರ್ನಾಟಕದ 2025-26ರ ಆಯವ್ಯಯದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯಿದೆಗೆ ಅನುಗುಣವಾಗಿ ಸರ್ಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2A ಮತ್ತು ಪ್ರವರ್ಗ-2B ಗುತ್ತಿಗೆದಾರರಿಗೆ ಎರಡು ಕೋಟಿ ರೂಪಾಯಿಗಳ ವರೆಗಿನ ಕಾಮಗಾರಿಗಳನ್ನು ನೀಡಲು ಘೋಷಣೆಯನ್ನು ಮಾಡಿದೆ” ಎಂದಿದ್ದಾರೆ.
ಆರ್ಥಿಕವಾಗಿ ಈ ಸಮುದಾಯಗಳನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಆಯವ್ಯಯದಲ್ಲಿ ಘೋಷಣೆಯನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮಾಡಲಾಗಿರುತ್ತದೆ. ಶೋಷಿತ ಸಮುದಾಯಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಆಯಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಗಳು ಕರ್ನಾಟಕದಲ್ಲಿ ಹಲವು ಯೋಜನೆಗಳನ್ನು ನೀಡಿದೆ” ಎಂದು ತಿಳಿಸಿದ್ದಾರೆ.
2015ರಲ್ಲಿ 50 ಲಕ್ಷ ರೂ. ಮಿತಿಯೊಂದಿಗೆ ಗುತ್ತಿಗೆ ಕೆಲಸಗಳಲ್ಲಿ SC/ST ಗಾಗಿ ಶೇ.24 ಮೀಸಲಾತಿಗಾಗಿ ಮಸೂದೆಯನ್ನು ಪ್ರಸ್ತಾಪಿಸಲಾಯಿತು. ಈ ಮಸೂದೆಯನ್ನು ಕರ್ನಾಟಕದಲ್ಲಿ 2017 ರಲ್ಲಿ ಜಾರಿಗೆ ತರಲಾಯಿತು. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಜುಲೈ, 2023 ರಲ್ಲಿ, ಎಸ್ಸಿ/ಎಸ್ಟಿಗಳಿಗೆ 50 ಲಕ್ಷ ರೂ.ಗಳ ಮಿತಿಯನ್ನು ಒಂದು ಕೋಟಿ ರೂ.ಗೆ ಏರಿಸಿತು. ಜೂನ್ 2024 ರಲ್ಲಿ ಸಿವಿಲ್ ವರ್ಕ್ಸ್ ಗುತ್ತಿಗೆಗಳಲ್ಲಿ ಈ ಮೀಸಲಾತಿಯನ್ನು ವಿಸ್ತರಿಸಲಾಯಿತು. ವರ್ಗ-I ಗೆ ಸೇರಿದ OBC ಗುತ್ತಿಗೆದಾರರು ಅಂದರೆ ಅತ್ಯಂತ ಹಿಂದುಳಿದವರು (4%) ಮತ್ತು ವರ್ಗ- IIA ಅಂದರೆ ತುಲನಾತ್ಮಕವಾಗಿ ಅತ್ಯಂತ ಹಿಂದುಳಿದ (15%)” ಎಂಂದು ವಿವರಿಸಿದ್ದಾರೆ.
“ಮಾರ್ಚ್ 2025 ರಲ್ಲಿ, ಸಿವಿಲ್ ವರ್ಕ್ಸ್ ಗುತ್ತಿಗೆಗಳಲ್ಲಿ ಮೀಸಲಾತಿಯ ಮಿತಿಯನ್ನು ರಾಜ್ಯಾದ್ಯಂತ ಎರಡು ಕೋಟಿ ರೂ.ಗೆ ವಿಸ್ತರಿಸಲಾಗಿದೆ. SC/ST ಗಳಿಗೆ ಶೇ.24, OBC ಗುತ್ತಿಗೆದಾರರಿಗೆ ಶೇ.4 (ವರ್ಗ- Iಗೆ ಸೇರಿದೆ), IIA ವರ್ಗಕ್ಕೆ ಸೇರಿದ OBC ಗುತ್ತಿಗೆದಾರರಿಗೆ ಶೇ. 15 ಹಾಗೂ ವರ್ಗ IIB ಗೆ ಸೇರಿದ OBC ಗುತ್ತಿಗೆದಾರರಿಗೆ ಶೇ.4. ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ವರ್ಗೀಕರಣವನ್ನು ಸೆಪ್ಟೆಂಬರ್, 1994 ರಲ್ಲಿ ಜಾರಿ ಮಾಡಿತು. ಅದರ ಅಡಿಯಲ್ಲಿ ಮುಸ್ಲಿಂ ಸಮುದಾಯಗಳನ್ನು ವರ್ಗ- IIB ಅಡಿಯಲ್ಲಿ ಪಟ್ಟಿ ಮಾಡಲಾಗಿದೆ” ಎಂದಿದ್ದಾರೆ.
“ಡಿಸೆಂಬರ್ 20, 2019 ರಂದು, ಕರ್ನಾಟಕ ಹೈಕೋರ್ಟ್ ಸಿವಿಲ್ ವರ್ಕ್ ಗುತ್ತಿಗೆಗಳ ಮೀಸಲಾತಿಯನ್ನು ಎತ್ತಿಹಿಡಿದಿದೆ.
ಈ ಅಂಶಗಳು ವಾಸ್ತವವಾಗಿದ್ದು, ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ, ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಧರ್ಮಾಧಾರಿತವಾಗಿ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ನೀತಿ ಮತ್ತು ನಿಲುವುಗಳನ್ನು ಪ್ರಶ್ನಿಸುವುದರ ಮೂಲಕ ಬೆತ್ತಲಾಗುತ್ತಿವೆ. ಈ ದೇಶದ ಸಾಮಾಜಿಕ ವಾಹಿನಿಯಿಂದ ಮುಸಲ್ಮಾನರನ್ನು ಆಚೆ ಇಡಬೇಕೆಂಬ ಬಿಜೆಪಿಯ ರಾಜಕೀಯ ಹೇಳಿಕೆಯು ಅವರ ಹತಾಶೆಯ ಹೇಳಿಕೆಯಾಗಿದ್ದು, ದುರುದ್ದೇಶದಿಂದ ಕೂಡಿರುತ್ತದೆ” ಎಂದು ವಾಗ್ದಾಳಿ ನಡೆಸಿದೆ.