ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಸಚಿವರನ್ನ ಭೇಟಿ ಮಾಡುತ್ತಿದ್ದಾರೆ. ಅವರ ಭೇಟಿಗಳು ಕಾಂಗ್ರೆಸ್ನ ಸ್ಥಳೀಯ ನಿಷ್ಠಾವಂತ ಕಾರ್ಯಕರ್ತರಿಗೆ ಗೊಂದಲ ಉಂಟಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜು ಏ ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರೇಣುಕಾಚಾರ್ಯ ಪ್ರಚಾರ ಪ್ರಿಯರು. ಅಧಿಕಾರ ಇರಲಿ ಬಿಡಲಿ ಅವರಿಗೆ ಪ್ರಚಾರಬೇಕು. ಹೀಗಾಗಿ, ಸಚಿವರ ಭೇಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಸಮಸ್ಯೆಗಳ ನೆಪದಲ್ಲಿ ಸಚಿವರುಗಳನ್ನು ಭೇಟಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡದ ಬಿಜೆಪಿ ನಾವಿಕನಿಲ್ಲದ ದೋಣಿಯಾಗಿದೆ. ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ರೇಣುಕಾಚಾರ್ಯ ಮುಂದಾಗುತ್ತಿದ್ದಾರೆ. ಇಂಥವರಿಗೆ ಕಾಂಗ್ರೆಸ್ ಸಚಿವರು ಪ್ರಾಮುಖ್ಯತೆ ನೀಡಬಾರದು. ಕಾಂಗ್ರೆಸ್ ಶಾಸಕರಿಗೆ ಸಚಿವರನ್ನ ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ಕೊನೆ ಪಕ್ಷ ಸಚಿವರುಗಳಿಗೆ ಫೋನ್ ಕರೆ ಮಾಡಿದರೂ ರೆಸ್ಪಾನ್ಸ್ ಮಾಡುತ್ತಿಲ್ಲ. ಆದರೆ ವಿರೋಧ ಪಕ್ಷದ ಮಾಜಿ ಶಾಸಕರಿಗೆ ಸಚಿವರ ಭೇಟಿಗೆ ಅವಕಾಶ ಸಿಗುತ್ತಿದೆ” ಎಂದು ಕಿಡಿಕಾರಿದರು.
“ರೇಣುಕಾಚಾರ್ಯ ಸಚಿವರನ್ನ ಭೇಟಿ ಮಾಡಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಚಾರ ಪಡೆಯುತ್ತಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ. ಇಂಥವರಿಗೆ ಕಾಂಗ್ರೆಸ್ ನಾಯಕರು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ” ಎಂದು ಅವರು ಹೇಳಿದರು.