ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಡಿನೋಟಿಫಿಕೇಷನ್ ವಿಚಾರವಾಗಿ ಬೆಂಗಳೂರು ಜೆಡಿಎಸ್ ರಾಜ್ಯ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆದ ಮೇಲೆ ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಕುಮಾರಸ್ವಾಮಿ ಅವರ ಬಗ್ಗೆ ಭಯ ಇದೆ” ಎಂದು ವಾಗ್ದಾಳಿ ನಡೆಸಿದರು.
“ಕುಮಾರಸ್ವಾಮಿ ಅವರು ವಾಸ್ತವ ಮಾತಾಡ್ತಾರೆ. ಎಲ್ಲವನ್ನು ಜನರ ಮುಂದೆ ತೆರೆದಿಡುತ್ತಾರೆ.ಇದರಿಂದ ಪಾಪ ಅವರಿಗೆ ಭಯ ಶುರುವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರ ಮೇಲೆ ನಿತ್ಯ ದಾಖಲಾತಿ ಹುಡುಕುತ್ತಿದ್ದಾರೆ. ದಾಖಲಾತಿ ರೆಡಿ ಮಾಡಿ ಅಂತ ಸಿಎಂ, ಡಿಸಿಎಂ, ಸಚಿವ ಸಂಪುಟ ಕುಮಾರಸ್ವಾಮಿ ತೇಜೋವಧೆ ಮಾಡಬೇಕು ಪ್ರಯತ್ನ ಮಾಡ್ತಿದೆ” ಎಂದು ಕಿಡಿಕಾರಿದರು.
ಮುಡಾ ಕೇಸ್, ಗಂಗೇನಹಳ್ಳಿ ಕೇಸ್ಗೂ ಸಂಬಂಧ ಇಲ್ಲ
“ಕುಮಾರಸ್ವಾಮಿ ಅವರನ್ನ ತಪ್ಪಿತಸ್ಥರಾಗಿ ಮಾಡಬೇಕು ಅಂತ ಕಾಂಗ್ರೆಸ್ ಸರ್ಕಾರ ಹೊರಟಿದೆ. ಡಿನೋಟಿಫಿಕೇಷನ್ ವಿಚಾರವಾಗಿ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. 2015 ರಲ್ಲಿ ಈ ಪ್ರಕರಣ ಆಗಿದೆ. ಇದಕ್ಕೂ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ,ಮುಡಾ ಕೇಸ್ ಗೂ, ಗಂಗೇನಹಳ್ಳಿ ಕೇಸ್ಗೂ ಸಂಬಂಧವೇ ಇಲ್ಲ. ಸುಮ್ಮನೆ ಅವರ ತಪ್ಪು ಮುಚ್ಚಿಕೊಳ್ಳಲು ತಿರುಚೋ ಕೆಲಸ ಆಗ್ತಿದೆ” ಎಂದರು.
“ಡಿನೋಟಿಫಿಕೇಷನ್ ಆಗಿರೋದು ಯಡಿಯೂರಪ್ಪ ಅವರ ಕಾಲದಲ್ಲಿ. ಇದಕ್ಕೂ ಕುಮಾರಸ್ವಾಮಿ ಅವರಿಗೆ ಏನ್ ಸಂಬಂಧ? ಕುಮಾರಸ್ವಾಮಿ ಅವರ ಕಾಲದಲ್ಲಿ ಫೈಲ್ ರಿಜೆಕ್ಟ್ ಮಾಡಿದ್ರು. ಅವರು ಸಹಿ ಹಾಕಿದ್ರಾ? ಅವರು ಡಿನೋಟಿಫಿಕೇಶನ್ ಮಾಡಿದ್ರಾ” ಎಂದು ಪ್ರಶ್ನಿಸಿದರು.
ಶಾಸಕ ಮುನಿರತ್ನ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, “ಮುನಿರತ್ನ ಕೇಸ್ ತನಿಖೆ ಆಗ್ತಿದೆ. ತನಿಖೆ ನಡೆಯೋ ಸಮಯದಲ್ಲಿ ಮಾತಾಡೋದು ಸರಿಯಲ್ಲ. ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿ” ಎಂದರು.
ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ
ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂಬ ವಿಚಾರಕ್ಕೆ ಮಾತನಾಡಿ, “ಟಿಕೆಟ್ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಬಿಜೆಪಿ-ಜೆಡಿಎಸ್ ನಾಯಕರು ದೆಹಲಿಯಲ್ಲಿ ಮಾತಾಡಿದ್ದಾರೆ. ಇನ್ನು ಚುನಾವಣೆ ಘೋಷಣೆ ಆಗಿಲ್ಲ. ಉಪ ಚುನಾವಣೆ ದಿನಾಂಕ ಘೋಷಣೆ ಆಗಲಿ. ಚನ್ನಪಟ್ಟಣದ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ನಿಲ್ಲುತ್ತಾರೆ” ಎಂದು ತಿಳಿಸಿದರು.
ಅತಿ ಶೀಘ್ರದಲ್ಲೇ ಗುಡ್ ನ್ಯೂಸ್
ಚನ್ನಪಟ್ಟಣದಲ್ಲಿ ಜೆಡಿಎಸ್ ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಆಗಿರೋ ವಿಚಾರಕ್ಕೆ ಮಾತನಾಡಿದ ಅವರು, “ಶುಕ್ರವಾರ ನಾನು ನಗರಪಾಲಿಕೆ ಸದಸ್ಯರ ಜೊತೆ ಮಾತುಕತೆ ಮಾಡಿದ್ದೇನೆ. ಸಾಕಷ್ಟು ಜನ ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಆಮಿಷ ಒಡ್ಡಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇವೆಲ್ಲವನ್ನು ಸರಿ ಮಾಡೋಕೆ ನಿನ್ನೆ ತೋಟದ ಮನೆಯಲ್ಲಿ ಸಭೆ ಮಾಡಿದ್ದೇನೆ. ಅತಿ ಶೀಘ್ರದಲ್ಲೇ ಕೆಲವು ಗುಡ್ ನ್ಯೂಸ್ ಕೊಡ್ತೀನಿ” ಎಂದರು.