ಪಿಎಂಜಿಎಸ್ವೈ ಮಾನದಂಡಗಳು ಸರಳೀಕರಣವಾಗದ ಹಿನ್ನೆಲೆಯಲ್ಲಿ ಪ್ರಗತಿಪಥ ಮತ್ತು ಕಲ್ಯಾಣ ಪಥ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಧಾನಸಭೆಯಲ್ಲಿ ಸದಸ್ಯ ಎನ್.ಎಚ್.ಕೋನರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪ್ರಗತಿಪಥ ಯೋಜನೆಯ ಅಡಿ 7110 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ರೂ.5190 ಕೋಟಿಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದ್ದು, ಪ್ರಗತಿಪಥ ಯೋಜನೆಗೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ಇತೀಚೆಗೆ ಅನುಮೋದನೆ ನೀಡಿದೆ” ಎಂದರು.
“ಪ್ರಗತಿಪಥ ಯೋಜನೆಯ ಶೀಘ್ರ ಅನುಷ್ಠಾನದ ದೃಷ್ಟಿಯಿಂದ ಗ್ರಾಮಪಥ ತಂತ್ರಾಂಶದಲ್ಲಿ ಅರ್ಹ ರಸ್ತೆಗಳ ಆಯ್ಕೆ ಪ್ರಕ್ರಿಯೆ ಹಂತದಲ್ಲಿರುತ್ತದೆ. ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಯಲ್ಲಿರುವುದಿಲ್ಲ. ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಗ್ರಾಪಂ ಒಟ್ಟು ವೆಚ್ಚದ ಶೇ.10ರ ಮಿತಿಯೊಳಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಆದೇಶವನ್ನು ಹೊರಡಿಸಲಾಗಿದೆ” ಎಂದು ಹೇಳಿದರು.