“ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) 152 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿಯಿಂದ ಭರ್ತಿ ಮಾಡಲಾಗುವುದು” ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
“ಮಂಡಳಿಗೆ ಮಂಜೂರಾಗಿರುವ 253 ಹುದ್ದೆಗಳ ಪೈಕಿ 152 ಹುದ್ದೆಗಳು ತಾಂತ್ರಿಕ, ಪ್ರಯೋಗಶಾಲೆ ಹಾಗೂ ಆಡಳಿತ ವಿಭಾಗಗಳಲ್ಲಿ ಖಾಲಿ ಇವೆ. 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ” ಎಂದು ಹೇಳಿದ್ದಾರೆ.
“ಈ ಹಿಂದೆ ಮಂಡಳಿಯಲ್ಲಿ 153 ಖಾಲಿ ಹುದ್ದೆಗಳ ಭರ್ತಿಗೆ 2010ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಕಾರಣಾಂತರದಿಂದ ಹಲವು ಹುದ್ದೆಗಳು ಭರ್ತಿ ಆಗಿಲ್ಲ. ಈ ಹುದ್ದೆಗಳೂ ಸೇರಿದಂತೆ ಪ್ರಸ್ತುತ ಮಂಡಳಿಯಲ್ಲಿ ರಾಜ್ಯ ವ್ಯಾಪಿ ಉಳಿಕೆ ವೃಂದ ಹಾಗೂ ರಾಜ್ಯ ವ್ಯಾಪಿ ಸ್ಥಳೀಯ ವೃಂದದಡಿಯಲ್ಲಿ ಖಾಲಿಯಿರುವ ಹುದ್ದೆಗಳ ಪೈಕಿ ಬಹುತೇಕ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ರಾಜ್ಯವ್ಯಾಪಿ ಉಳಿಕೆ ವೃಂದದ 146 ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿಸಿದೆ” ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 625 ಅಂಗಡಿಗಳಲ್ಲಿ ಇನ್ನು ಕನ್ನಡ ನಾಮಫಲಕ ಅಳವಡಿಕೆ ಬಾಕಿ
“23 ಹುದ್ದೆಗಳನ್ನು ಬ್ಯಾಕ್ಲಾಗ್ ಎಂದು ಪರಿಗಣಿಸಿದಲ್ಲಿ, 152 ಹುದ್ದೆಗಳೊಂದಿಗೆ 23 ಹುದ್ದೆಗಳನ್ನೂ ಸೇರಿಸಿ ಒಟ್ಟು 175 ಹುದ್ದೆಗಳನ್ನು ಭರ್ತಿ ಮಾಡಿದರೆ ಶೇಕಡ 69ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ” ಎಂದು ಸಚಿವರು ಹೇಳಿದ್ದಾರೆ.