ಪಶ್ಚಿಮ ಬಂಗಾಳದ ಕೃಷ್ಣಾನಗರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಆ ಗೆಲುವು ತಮ್ಮನ್ನು ಸಂಸತ್ನಿಂದ ಉದ್ಘಾಟನೆ ಮಾಡಿ, ಸಮನ್ಸ್ ಮೂಲಕ ತನ್ನ ತೇಜೋವಧೆ ಮಾಡಿದವರ ಪಿತೂರಿಗೆ ಸೂಕ್ತ ಉತ್ತರ ನೀಡುತ್ತದೆ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
2023ರಲ್ಲಿ ಸಂಸತ್ನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಅಲ್ಲದೆ, ಜಾರಿ ನಿರ್ದೇಶನಾಲಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ಗಳನ್ನು ನೀಡಿದೆ. ಇದೀಗ, ಮತ್ತೆ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದಾರೆ.
“ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಬಿಜಪೆಇ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಭಾರತವು ಫ್ಯಾಸಿಸ್ಟ್ಗಳಿಂದ ನಾಶವಾಗದಷ್ಟು ದೊಡ್ಡ ದೇಶವಾಗಿದೆ” ಎಂದು ಮೊಯಿತ್ರಾ ಹೇಳಿದ್ದಾರೆ.
“ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಕೇಂದ್ರವು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿದೆ. ಈ ಸಮಿತಿಯಿಂದ ಆಯುಕ್ತರನ್ನು ಆಯ್ಕೆ ಮಾಡುವುದರಿಂದ ಚುನಾವಣಾ ಆಯೋಗವು ತನ್ನ ‘ಸ್ವಾತಂತ್ರ್ಯ’ವನ್ನು ಕಳೆದುಕೊಂಡಿದೆ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಕೇಸರಿ ಪಾಳೆಯದ ರಾಜಕೀಯ ಏಜೆಂಟ್ಗಳಂತೆ ಕಾರ್ಯನಿರ್ವಹಿಸುತ್ತಿವೆ” ಎಂದು ಅವರು ಆರೋಪಿಸಿದ್ದಾರೆ.
“ನನ್ನ ಗೆಲುವಿನ ಬಗ್ಗೆ ಯಾವುದೇ ಸಂದೇಹವಿಲ್ಲ. ಗೆಲುವಿನ ಮತಗಳ ಅಂತರ ಎಷ್ಟು ಎಂಬುದು ಜೂನ್ 4 ರಂದು ನಿರ್ಧರವಾಗುತ್ತದೆ. ನಾನು ಕಳೆದ ಐದು ವರ್ಷಗಳಿಂದ ಸಂಸದೆಯಾಗಿ, ಅದಕ್ಕೂ ಮುನ್ನ ಶಾಸಕಿಯಾಗಿ ನನ್ನ ಜನರ ನಡುವೆ ಇದ್ದೇನೆ. ನನ್ನನ್ನು ಹೊರಹಾಕಲು ಮತ್ತು ನನ್ನ ಖ್ಯಾತಿಗೆ ಕಳಂಕ ತರುವ ಪಿತೂರಿ ಮಾಡಿದವರಿಗೆ ನನ್ನ ಗೆಲುವು ಸೂಕ್ತ ಉತ್ತರ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.
ಕೃಷ್ಣಾನಗರದಲ್ಲಿ ಮೊಯಿತ್ರಾ ವಿರುದ್ಧ ಬಿಜೆಪಿ ರಾಜಮನೆತನದ ಅಮೃತಾ ರಾಯ್ ಅವನ್ನು ಕಣಕ್ಕಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೊಯಿತ್ರಾ, “ನನ್ನ ಹೋರಾಟವು ಬಿಜೆಪಿ ಚಿಹ್ನೆಯ ವಿರುದ್ಧ. ಅವರು ಯಾರನ್ನು ಕಣಕ್ಕಿಳಿಸಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದಿದ್ದಾರೆ.