ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು (ಸೆ.19) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಸಂಸದರು ಮತ್ತು ಶಾಸಕರ ಮೇಲೆ ನಿರಂತರವಾಗಿ ಎಫ್ಐಆರ್ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೇಂದ್ರದ ಸಚಿವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ” ಎಂದು ಟೀಕಿಸಿದರು.
“ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಶಾಸಕರಾದ ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ- ಹೀಗೆ ನಿರಂತರವಾಗಿ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಹತ್ತಿಕ್ಕುವ, ಅವರ ಧ್ವನಿ ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ” ಎಂದು ಆರೋಪಿಸಿದರು.
“ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಐವನ್ ಡಿಸೋಜ ಅವರು ಹೇಳಿಕೆ ಕೊಟ್ಟಿದ್ದರು. ನಮ್ಮ ಮಂಗಳೂರಿನ ಜನರು, ಕಾರ್ಯಕರ್ತರು ದಿನವೂ ಪೊಲೀಸ್ ಸ್ಟೇಶನ್ಗೆ ಹೋಗುತ್ತಿದ್ದಾರೆ. ದೂರನ್ನೂ ನೀಡುತ್ತಿದ್ದಾರೆ. ಆದರೆ, ಇವತ್ತಿನ ತನಕ ದೂರನ್ನು ತೆಗೆದುಕೊಂಡಿಲ್ಲ” ಎಂದರು.
“ಕರ್ನಾಟಕವನ್ನು ನೀವೇನು ಮಾಡಲು ಹೊರಟಿದ್ದೀರಿ? ನಾಗಮಂಗಲದಲ್ಲಿ ಕೋಮು ಘಟನೆ ನಡೆಯಿತು. ನಾಗಮಂಗಲದ ಗಣಪತಿಗೆ ನೀವು ಚಪ್ಪಲಿ ಎಸೆಯಲು ಅವಕಾಶ ಕೊಟ್ಟಿದ್ದೀರಿ. ಕಲ್ಲುಗಳನ್ನೂ ಎಸೆದರು. ಮೂರ್ತಿ ಭಗ್ನ ಆಯಿತು. ಮೂರ್ತಿಯನ್ನು ಅಲ್ಲೇ ಬಿಟ್ಟು ಓಡಿದರು. 25 ಅಂಗಡಿಗಳನ್ನು ಸುಟ್ಟು ಹಾಕಿದರು. ಆ ಜನರು ಯಾರು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು
“ನಾಗಮಂಗಲದ ಜನರಿಗೆ ಆ ಧೈರ್ಯ ಹೇಗೆ ಬಂತು? ನಮಗಿರುವ ಮಾಹಿತಿ ಪ್ರಕಾರ ಕೇರಳದಿಂದ ಬಂದಿದ್ದಾರೆ. ಅವರು ಯಾರು? ಹೇಗೆ ಮತ್ತು ಯಾಕೆ ಬಂದರು? ಇವತ್ತು ನಾಗಮಂಗಲದ ಕೇಸನ್ನೂ ನೀವು ಮುಚ್ಚಿ ಹಾಕಿದ್ದೀರಿ. ನಿಮ್ಮ ಪೊಲೀಸರು ಇದೊಂದು ಘಟನೆಯೇ ಅಲ್ಲ ಎಂಬಂತೆ ಆ ಕೇಸನ್ನು ಕ್ಲೋಸ್ ಮಾಡಿದ್ದಾರೆ” ಎಂದು ದೂರಿದರು.
“ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಮತ್ತು ಶಾಸಕರ ಪುತ್ರ ಸೇರಿ ತಮಗೆ ಹಣ ಕೇಳಿದ್ದು, ಅದನ್ನು ಕೊಡಲು ನನಗೆ ಶಕ್ತಿ ಇಲ್ಲ; ನನಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿ ಸತ್ತರು. ಅವರ ಮೇಲೆ ಎಫ್ಐಆರ್ ದಾಖಲಿಸಲು ಹಿಂದೆ ಮುಂದೆ ನೋಡಿದ್ದೀರಿ” ಎಂದು ಟೀಕಿಸಿದರು.
“ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ಮಾಡಿ ಸಿಕ್ಕಿ ಹಾಕಿಕೊಂಡ ಬಳಿಕ ನೀವು ಎಸ್ಐಟಿ ರಚಿಸಿದ್ದೀರಿ. ಎಸ್ಐಟಿ ವರದಿಯನ್ನು ಓದಿದ್ದೀರಾ ಸಿದ್ದರಾಮಯ್ಯನವರೇ? ಆ ವರದಿಯಲ್ಲಿ ನಾಗೇಂದ್ರ ಅವರ ಹೆಸರು ಯಾಕೆ ಇಲ್ಲ” ಎಂದು ಪ್ರಶ್ನೆ ಮಾಡಿದರು.
“ರಾಷ್ಟ್ರಧ್ವಜದ ಅಶೋಕ್ ಚಕ್ರದ ಜಾಗದಲ್ಲಿ ಉರ್ದು ಬರಹ ಬಳಸಲಾಗಿದೆ. ಬೆಳಗಾವಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ 3 ಜನ ಹಿಂದೂ ಯುವಕರಿಗೆ ಚಾಕುವಿನಿಂದ ಇರಿದಿದ್ದಾರೆ. ಕೋಲಾರದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪ್ಯಾಲೆಸ್ಟೀನ್ ಧ್ವಜ ನೋಡುವಂತಾಗಿದೆ” ಎಂದು ಹರಿಹಾಯ್ದರು.
“ಸಮಾಜಘಾತುಕರು, ದೇಶದ್ರೋಹಿಗಳು, ಅಪರಾಧಿಗಳಿಗೆ ಈ ಧೈರ್ಯ ಹೇಗೆ ಬಂದಿದೆ? ನೀವು ಮುಖ್ಯಮಂತ್ರಿ ಆದ ತಕ್ಷಣ ರಾಜ್ಯಸಭೆ ಚುನಾವಣೆ ನಡೆದಿತ್ತು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ವಿಧಾನಸೌಧದಲ್ಲಿ ಮೊದಲ ಬಾರಿಗೆ ನಾವು ಪಾಕಿಸ್ತಾನ್ ಜಿಂದಾಬಾದ್ ಕೇಳಿದೆವು” ಎಂದರು.
ಇವತ್ತು ಅಶೋಕ್ ಮತ್ತು ನಾವು ಮಾಡಿದ ತಪ್ಪೇನು?
“ಇವತ್ತು ಅಶೋಕ್ ಮತ್ತು ನಾವು ಮಾಡಿದ ತಪ್ಪೇನು? ಯಾವ ಅಪರಾಧಕ್ಕಾಗಿ ನೀವು ಎಫ್ಐಆರ್ ಹಾಕಿದ್ದೀರಿ? ನಾವು ನಿಮ್ಮನ್ನು ಕೇಳಿದ್ದೇ ನಮ್ಮ ಅಪರಾಧವೇ? ಇವತ್ತು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಕೆ.ಸಿ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.