- ‘ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸಬೇಕು’
- ‘Lab to Land-Land to Lab ಪರಿಕಲ್ಪನೆಯಲ್ಲಿ ಕೃಷಿ ವಿವಿ ಕೆಲಸ ಮಾಡಲಿ’
ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ವಿವಿಗಳ ಪಾತ್ರ ಬಹಳ ಮುಖ್ಯ. ಆಹಾರ ಉತ್ಪಾದನೆ ಇನ್ನಷ್ಟು ಹೆಚ್ಚಲು, ಗುಣಾತ್ಮಕ ಆಗಲು ಕೃಷಿ ವಿವಿಗಳ ಅಧ್ಯಯನ ಮತ್ತು ಸಂಶೋಧನೆಗಳು ಮತ್ತಷ್ಟು ಹೆಚ್ಚಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನ ಮತ್ತು ಬೇಕಿಂಗ್ ಮೌಲ್ಯ ವರ್ಧನಾ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಸಿರು ಕ್ರಾಂತಿ ಬಳಿಕ ದೇಶ ಆಹಾರ ಸ್ವಾವಲಂಬನೆಯನ್ನು ಸಾಧಿಸಿತು. ಅದಕ್ಕೂ ಮೊದಲು ಅವಲಂಬನೆ ಇತ್ತು. ಇತ್ತೀಚಿಗೆ ನಿಧನರಾದ ಕೃಷಿತಜ್ಞ ಸ್ವಾಮಿನಾಥನ್ ಅವರು ಈ ಹಸಿರು ಕ್ರಾಂತಿಗೆ ಬಹಳಷ್ಟು ಕೊಡುಗೆ ನೀಡಿದ್ದರು” ಎಂದರು.
“ಖುಷ್ಕಿ ಭೂಮಿ ಅತಿ ಹೆಚ್ಚು ಇರುವ ರಾಜ್ಯ ನಮ್ಮದು. ವಾತಾವರಣ ಬದಲಾವಣೆಯಿಂದ ರಾಜ್ಯ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿದೆ. ಈ ಕಾರಣಕ್ಕೇ ನಮ್ಮ ರೈತರಿಗೆ ಕೃಷಿ ತಜ್ಞರು ಮತ್ತು ತಂತ್ರಜ್ಞರ ನೆರವು ಅತ್ಯಗತ್ಯ. ಇದಕ್ಕಾಗಿಯೇ ಕೃಷಿ ವಿವಿಗಳು ಹೆಚ್ಚು ಸಂಶೋಧನೆ ನಡೆಸಬೇಕು. ಸಂಶೋಧನೆಗಳು ರೈತರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಕಡಿಮೆ ಮಳೆಯಲ್ಲಿ, ಕಡಿಮೆ ನೀರಲ್ಲಿ ಎಂತಹ ಬೆಳೆ ಬೆಳೆಯಬಹುದು, ಹವಾಮಾನ ವೈಪರೀತ್ಯಕ್ಕೆ ಬೆಳೆ ಹಾಳಾಗದಂತೆ ಏನು ಮಾಡಬೇಕು? ಎನ್ನುವ ಕುರಿತಂತೆ ಹೆಚ್ಚೆಚ್ಚು ಅಧ್ಯಯನ, ಸಂಶೋಧನೆಗಳು ನಡೆದು ರೈತರಿಗೆ ತಲುಪುವಂತಾಗಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎರಡು ದೇಶಗಳ ಸ್ಥಾಪನೆ- ಇಸ್ರೇಲ್ ಪ್ಯಾಲೆಸ್ತೀನಿ ಕದನಕ್ಕೆ ಕಾಯಂ ಪರಿಹಾರ
ಲ್ಯಾಬ್ ಟೂ ಲ್ಯಾಂಡ್
“ಪ್ರಯೋಗಶಾಲೆಗಳಿಂದ ಕೃಷಿ ಭೂಮಿಗೆ ಏನು ತಲುಪಿದೆ, ಕೃಷಿ ಭೂಮಿಯ ಅನುಭವಗಳು ಮತ್ತು ಅಗತ್ಯಗಳು ಪ್ರಯೋಗ ಶಾಲೆಗಳಿಗೆ ಗೊತ್ತಾಗಬೇಕು. ಆಗ ಮಾತ್ರ ಸುಸ್ಥಿರ ಕೃಷಿ ಸಾಧ್ಯವಾಗುತ್ತದೆ. ಇದು ಸಾಧ್ಯವಾಗಬೇಕಾದರೆ Lab to Land-Land to Lab ಪರಿಕಲ್ಪನೆಯಲ್ಲಿ ವೈಜ್ಞಾನಿಕ ಕೆಲಸಗಳನ್ನು ಕೃಷಿ ವಿವಿಗಳು ಅಳವಡಿಸಿಕೊಳ್ಳಬೇಕು. ಸಂಶೋಧನೆ-ಅಧ್ಯಯನ ಮತ್ತು ವಿಸ್ತರಣಾ ಕಾರ್ಯಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಭರವಸೆ ನೀಡಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಶರತ್ ಬಚ್ಚೇಗೌಡ, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್ ಸೇರಿದಂತೆ ಇತರರು ಇದ್ದರು.