- ‘ನಗರದ ಇತಿಹಾಸ, ಪರಂಪರೆ ಉಳಿಸಿ ಬೆಳೆಸಬೇಕು’
- ‘ನಗರದ ಜನರೆಲ್ಲ ಸಂಭ್ರಮದಿಂದ ಭಾಗವಹಿಸಬೇಕು’
‘ಬೆಂಗಳೂರು ಹಬ್ಬ’ದಂತಹ ಹಬ್ಬಗಳ ಮೂಲಕ ಬೆಂಗಳೂರಿನ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹಕಚೇರಿ ಕೃಷ್ಣಾದಲ್ಲಿ ಪ್ರಶಾಂತ್ ಪ್ರಕಾಶ್ ಹಾಗೂ ಮಾಲಿನಿ ಗೋಯಲ್ ಅವರು ಬರೆದಿರುವ ‘Unboxing Bengaluru, The City of New Beginnings’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಬೆಂಗಳೂರು ಹಬ್ಬಕ್ಕೆ ಎಲ್ಲ ಸಹಕಾರ
“Unboxing Bengaluru, The City of New Beginnings’ ಪುಸ್ತಕವನ್ನು ಇಂಗ್ಲಿಷ್ ಜೊತೆಗೆ ಕನ್ನಡದಲ್ಲಿಯೂ ಹೊರತಂದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಪ್ರಶಾಂತ್ ಪ್ರಕಾಶ್ ಹಾಗೂ ಮಾಲಿನಿ ಗೋಯಲ್ ಅವರು ಬೆಂಗಳೂರು ಹಬ್ಬ ಆಯೋಜಿಸುತ್ತಿರುವುದು ಸಂತೋಷದ ವಿಚಾರ. ಬೆಂಗಳೂರು ಹಬ್ಬಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಎಸಿಗೆ ಅದಾನಿ ಆಪ್ತನ ನೇಮಕ; ಪ್ರಧಾನಿ ಮೋದಿ ಯಾರ ಪ್ರಧಾನ ಸೇವಕ?
ಎಲ್ಲರೂ ಕನ್ನಡಿಗರಾಗಿ ಬಾಳಬೇಕು
“ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಐತಿಹಾಸಿಕ ಮಹತ್ವವಿರುವ ಬೆಂಗಳೂರು ನಗರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಜನಾಬದ್ಧವಾಗಿ ಬೆಳೆಸಬೇಕಾಗಿತ್ತು. ನಗರದಲ್ಲಿ ಸುಮಾರು ಒಂದೂವರೆ ಕೋಟಿ ಜನರಿದ್ದಾರೆ. ಬೆಂಗಳೂರು ನಗರದಲ್ಲಿ, ಇಲ್ಲಿನ ಸಂಸ್ಕೃತಿ, ಕಲೆ, ಜನಜೀವನ, ನಾಗರಿಕತೆಗಳನ್ನು ಉಳಿಸಿಕೊಂಡು ಬರಲಾಗಿದೆ. ದೇಶ ವಿದೇಶಗಳಿಂದ ಉದ್ಯೋಗವರಿಸಿ ಜನ ನಗರದಲ್ಲಿ ನೆಲೆಸಿದ್ದರೂ ಕೂಡ ಎಲ್ಲರೂ ಕನ್ನಡಿಗರಾಗಿ ಬಾಳಬೇಕು. ನಾವೆಲ್ಲಾ ಕನ್ನಡಿಗರಾಗಿ, ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಸೌಹಾರ್ದತೆಯಿಂದ ಬಾಳಬೇಕು” ಎಂದು ಕರೆ ನೀಡಿದರು.
ಜನರು ಸಂಭ್ರಮದಿಂದ ಭಾಗವಹಿಸಲಿ
“ಬೆಂಗಳೂರು ನಗರದಲ್ಲಿ ಬಹಳ ಹಿಂದಿನಿಂದಲೂ ಕಡ್ಲೆಕಾಯಿ ಪರಿಷೆಯಂತಹ ಸಾಂಪ್ರಾದಾಯಿಕ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಜಾತ್ರೆಯಲ್ಲಿ ಬೆಂಗಳೂರಿಗರು ಬಹಳ ಸಂಭ್ರಮದಿಂದ ಭಾಗವಹಿಸುತ್ತಾರೆ. ಅಂತೆಯೇ ತಾವು ಆಯೋಜಿಸುವ ಬೆಂಗಳೂರು ಹಬ್ಬದಲ್ಲಿ, ನಗರದ ಜನರೆಲ್ಲ ಸಂಭ್ರಮದಿಂದ ಭಾಗವಹಿಸಬೇಕು” ಎಂದರು.