- ಡಾ. ಮಂಜುನಾಥ ಜಿ ಹೆಗಡೆ ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರಾಗಿ ನೇಮಕ
- ಪಠ್ಯಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನೊಳಗೊಂಡಂತೆ 37 ಮಂದಿ ಸದಸ್ಯರ ನೇಮಿಸಿ ಆದೇಶ
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ (National Curriculum Framework- NCF 2005) ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಪರಿಷ್ಕರಣಾ ಕಾರ್ಯಕ್ಕೆ ತಜ್ಞರ ಸಮಿತಿ ಮತ್ತು ಸಂಯೋಜಕರನ್ನು ನೇಮಿಸಿ ಆದೇಶಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಅವರಿಂದ ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಪಠ್ಯ ಪರಿಶೀಲಿಸಿ ಮರು ಪರಿಷ್ಕರಿಸಿದ್ದ ಪಠ್ಯಪುಸ್ತಕಗಳ ಸಂಬಂಧ ಈಗಾಗಲೇ ತಿದ್ದುಪಡಿ ತಂದು ತಿದ್ದೋಲೆ ಪ್ರತಿಗಳನ್ನು ಶಿಕ್ಷಣ ಇಲಾಖೆ ಶಾಲೆಗಳಿಗೆ ರವಾನಿಸಿದೆ.
ಇದೀಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲು ಉತ್ತರ ಕನ್ನಡ ಜಿಲ್ಲೆಯ ಡಾ. ಮಂಜುನಾಥ ಜಿ ಹೆಗಡೆ ಅವರನ್ನು ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ನೇಮಿಸಿ ಸೆ.25ರಂದು ಆದೇಶ ಹೊರಡಿಸಿದ್ದು, ಆದೇಶ ಪ್ರತಿ ಈ ದಿನ.ಕಾಮ್ಗೆ ಲಭ್ಯವಾಗಿದೆ.
ಈಗಾಗಲೇ ರಾಜ್ಯದಲ್ಲಿ ಎನ್ಸಿಎಫ್ 2005 ಆಧಾರಿತವಾಗಿ ರಚನೆಗೊಂಡು ಜಾರಿಯಲ್ಲಿರುವ 1ರಿಂದ 10ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳು ಹಾಗೂ 06ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಈ ಸಮಿತಿಯದ್ದಾಗಿದೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಮುಂದಿನ ಮೂರು ತಿಂಗಳ ಅವಧಿಗೆ ನೇಮಿಸಿರುವುದು ಆದೇಶದಿಂದ ತಿಳಿದು ಬಂದಿದೆ. ಈ ಪಟ್ಟಿಗೆ ಸಚಿವ ಮಧು ಬಂಗಾರಪ್ಪ ಅವರು ಅನುಮೋದನೆ ನೀಡಿದ್ದಾರೆ. ಸಮಿತಿ ಸದಸ್ಯರಿಗೆ ಮಾಸಿಕ ಗೌರವ ಧನ ಸಂಭಾವನೆ ಮತ್ತು ಇತರೆ ಸೌಲಭ್ಯ ಒದಗಿಸಲು ಆದೇಶದಲ್ಲಿ ಸೂಚಿಸಲಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘ ಆಗ್ರಹ
2024-25ನೇ ಸಾಲಿನ ಶೈಕ್ಷಣಿಕ ಸಾಲು ಪ್ರಾರಂಭವಾಗುವ ಮೊದಲು ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಕಾರ್ಯವನ್ನು ತುರ್ತಾಗಿ ನಿರ್ವಹಿಸಿ ವರದಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಸಚಿವರನ್ನು ಕೋರಿತ್ತು. ಅದರಂತೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಸಲು ಸಮಿತಿ ರಚಿಸಿದೆ.
ಡಾ. ಮಂಜುನಾಥ ಜಿ ಹೆಗಡೆ ಅವರು ಮುಖ್ಯ ಸಂಯೋಜಕರಾಗಿರುವ ಪಠ್ಯಪರಿಷ್ಕರಣೆ ಸಮಿತಿಗೆ ಅಧ್ಯಕ್ಷರನ್ನೊಳಗೊಂಡಂತೆ 37 ಮಂದಿ ಸದಸ್ಯರನ್ನು ನೇಮಿಸಲಾಗಿದೆ.
2023-24ನೇ ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ, ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ ಎಚ್ ಎಸ್ ಸತ್ಯನಾರಾಯಣ್, ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ. ಮಂಜಣ್ಣ ಅವರನ್ನು ನೇಮಿಸಲಾಗಿದೆ.
6 ಮತ್ತು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ಪರಿಷ್ಕರಣೆಗೆ ಕಲಬುರಗಿಯ ಕೇಂದ್ರೀಯ ವಿದ್ಯಾಲಯ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಎಂ, 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಡಾ ಅಶ್ವತ್ಥನಾರಾಯಣ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ
ಡಾ ಬಿ ಸಿ ನಾಗೇಂದ್ರ ಕುಮಾರ್, ಚಿಕ್ಕದೇವೇಗೌಡ, ಅಜಮೀರ್ ನಂದಾಪುರ, ನರಸಿಂಹಮೂರ್ತಿ ಬಿ ಕೆ , ಸುಶೀಲಾ , ವಿಶ್ವನಾಥ್ ಜಿ ಎಸ್, ಅಕ್ಷತಾ, ನೇತ್ರಾವತಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರನ್ನಾಗಿ ಸಹ ಪ್ರಾಧ್ಯಾಪಕ ಡಾ ಬಿ ಪಾಪಣ್ಣ, ಡಾ ಗಣೇಶ್ ಜಿ ಎಂ, ಡಾ ಗಜಾನಂದ್ ಸೊಗಲನ್ನವರ, ಅನಿತಾ, ಈರಪ್ಪ ಮಹಾಲಿಂಗಪುರ, ರವೀಶ್ ಕುಮಾರ್, ರಶ್ಮಿ, ಪವಿತ್ರ ಅವರನ್ನು ನೇಮಿಸಲಾಗಿದೆ. ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಶಿವಣ್ಣ ಹೆಂದೋರೆ, ಮಮತಾ ಭಾಗವತ್ ಅವರು ಸದಸ್ಯರಾಗಿದ್ದಾರೆ.
ಸಮಾಜ ವಿಜ್ಞಾನ (6-7 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ
ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ ಕೃಷ್ಣ ಹೊಂಬಾಳೆ, ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಪ್ರದೀಪ್ ಕೆಂಚನೂರು, ನಿವೃತ್ತ ಪ್ರಾಂಶುಪಾಲ ಡಾ ಕೋಡಿ ರಂಗಪ್ಪ, ಉಪ ಪ್ರಾಂಶುಪಾಲರಾದ ದಾನಮ್ಮ ಜಳಕಿ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವಸೀಮ್ ಅನ್ವರ್ ಅವರನ್ನು ಸದಸ್ಯರನ್ನಾಗಿಸಲಾಗಿದೆ.
ಸಮಾಜ ವಿಜ್ಞಾನ (8-9 ನೇ ತರಗತಿ) ಪಠ್ಯ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ
ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಗಂಗಾಧರ ಪಿ ಎಸ್, ತುಮಕೂರು ವಿ ವಿಯ ಪ್ರೊ ಬಿ ಶೇಖರ್, ಬೆಳಗಾವಿಯ ಡಾ ಎ ಬಿ ವಗ್ಗರ, ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರದ ಸಹ ಪ್ರಾಧ್ಯಾಪಕ ಡಾ ಶ್ರೀನಿವಾಸ್ ಯಡವಾಣಿ, ಕನಕಪುರ ಪಟ್ಟಣದ ಉರ್ದು ಪ್ರೌಢಶಾಲೆಯ ಸಹ ಶಿಕ್ಷಕಿ ತಬಸ್ಸುಮ್ ಫಾತಿಮ, ಮಧುಗಿರಿ ಪಬ್ಲಿಕ್ ಶಾಲೆಯ ಪಿ ಎಂ ಕಾಗಿನಕರ, ನೆಲಮಂಗಲದ ಸರ್ಕಾರಿ ಶಾಲೆಯ ಸಹ ಶಿಕ್ಷಕಿ ಶಾಹಿನಾ ಅಲ್ಲಾಪುರ, ಬೆಂಗಳೂರು ದಕ್ಷಿಣ ವಲಯದ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮೋಹನಕುಮಾರಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆಯು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು. ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಆರ್ಎಸ್ಎಸ್ ಸಿದ್ಧಾಂತ ಆಧಾರಿತವಾಗಿ ಪಠ್ಯಗಳನ್ನು ಪರಿಷ್ಕರಣೆ ಮಾಡಿರುವ ಆರೋಪಗಳು ಶಿಕ್ಷಣ ತಜ್ಞರಿಂದ, ಸಾಹಿತಿಗಳಿಂದ ವ್ಯಕ್ತವಾಗಿತ್ತು. ಈ ಬಗ್ಗೆ ಸಾಕಷ್ಟು ಟೀಕೆಗಳನ್ನು ಬಿಜೆಪಿ ಸರ್ಕಾರ ಎದುರಿಸಿತ್ತು.