ಆಪಾದಿತ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ ಟಿ ದೇವೇಗೌಡ ಟಾಂಗ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುವ ಮೂಲಕ ಅಬ್ಬರಿಸಿದ್ದಾರೆ.
ಮೂಸೂರಿನಲ್ಲಿ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿ.ಡಿ ದೇವೇಗೌಡ, “ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೋಡೋದೆ ಆದರೆ, ಎಫ್ಐಆರ್ ಆಗಿರೋ ಎಲ್ಲ ನಾಯಕರು ಕೊಡಲಿ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯೂ ರಾಜೀನಾಮೆ ಕೊಡಲಿ” ಎಂದಿದ್ದಾರೆ. ತಮ್ಮದೇ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ವಿರುದ್ಧವೇ ಗುಡುಗಿದ್ದಾರೆ
“ಎಲ್ಲರು ಗಾಜಿನ ಮನೆಯಲ್ಲಿ ಕೂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನ್ಯಾಯಾಲಯ ಹೇಳಿದೆಯಾ? ಕೇಂದ್ರದಲ್ಲಿ ಮಂತ್ರಿ ಆದವರಿಗೆ ಜವಾಬ್ದಾರಿ ಬೇಡವಾ? ಕುಮಾರಸ್ವಾಮಿಗೆ ರಾಜೀನಾಮೆ ಕೊಡು ಅಂದರೆ ಕೊಡುತ್ತಾರಾ? 136 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ?” ಎಂದು ಅಬ್ಬರಿಸಿದ್ದಾರೆ.
“ಒಂದು ಅತ್ಯಾಚಾರ, ಕೊಲೆ ಪ್ರಕರಣವನ್ನು ಮೂರು ತಿಂಗಳು ಮಾಧ್ಯಮಗಳಲ್ಲಿ ತೋರಿಸಲಾಗುತ್ತದೆ. ಒಂದು ಎಫ್ಐಆರ್ನ ಎಷ್ಟು ದಿನ ತೋರಿಸುತ್ತಿರಾ? ಯಾರ ಯಾರ ಮೇಲೆ ಎಫ್ಐಆರ್ ಆಗಿದೆ. ಎಲ್ಲರೂ ರಾಜೀನಾಮೆ ಕೊಡಿ” ಎಂದು ಬಿಜೆಪಿ-ಜೆಡಿಎಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಜಿಟಿ ದೇವೇಗೌಡರ ಭಾಷಣ ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರೇ ಆಶ್ಚರ್ಯಚಕಿತರಾದರು. ಭಾಷಣ ಮುಗಿಸಿ ತಮ್ಮ ಸ್ಥಾನಕ್ಕೆ ತೆರಳಿದ ಜಿ.ಟಿ ದೇವೇಗೌಡರಿಗೆ ಶಾಸಕ ರಮೇಶ್ ಬಂಡೀಸಿದ್ದೇಗೌಡ, ತನ್ವೀರ್ ಸೇಠ್ ಎದ್ದು ನಿಂತು ಗೌರವ ಸಲ್ಲಿಸಿದರು. ಸಚಿವ ಹೆಚ್.ಕೆ ಪಾಟೀಲ್, ಕೆ ವೆಂಕಟೇಶ್ ಹಸ್ತಲಾಘವ ಮಾಡಿದರು.