“ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲವೆಂದು ಈಗಾಗಲೇ ಸರ್ಕಾರ ನಿರ್ಧಾರ ಮಾಡಿದೆ” ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಇಂದು ಸಂಜೆ ಸದಾಶಿವ ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಚುನಾವಣೆಗೂ ಮೊದಲು ಈ ರೀತಿಯ ಬಹಳಷ್ಟು ಪ್ರಶ್ನೆಗಳು ಕೇಳಿ ಬಂದವು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿದರು. ಇದಕ್ಕೆ ಚುನಾವಣೆ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಸೇರಿದಂತೆ ನಾವೆಲ್ಲ ಸ್ಪಷ್ಟಪಡಿಸಿದ್ದೇವೆ” ಎಂದರು.
“ನಾವು ಗ್ಯಾರಂಟಿ ಯೋಜನೆಗಳನ್ನು ಕೊಡುವುದಕ್ಕು ಮೊದಲು ಬಹಳಷ್ಟು ಚರ್ಚೆ ಮಾಡಿದ್ದೇವೆ. ನಮ್ಮ ಉದ್ದೇಶ ಇರುವುದು ಬಡತನ ನಿರ್ಮೂಲನೆ. ಈ ಉದ್ದೇಶದಲ್ಲಿ ಹೊಂದಾಣಿಕೆಯಾಗಲು ಆಗುವುದಿಲ್ಲ. ಹಳ್ಳಿಗಳಲ್ಲಿ ಕೃಷಿ ಕೂಲಿ ಕಾರ್ಮಿಕರು ಬಹಳ ತೊಂದರೆಯಲ್ಲಿದ್ದಾರೆ. ನೋಟು ಬದಲಾವಣೆ, ಜಿಎಸ್ಟಿ ಜಾರಿಯಾದ ನಂತರ ಬಡತನದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ” ಎಂದು ಪರಮೇಶ್ವರ್ ಹೇಳಿದರು.
“ಬಡ ಜನರಿಗೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಪ್ರಣಾಳಿಕೆಯ ಅಧ್ಯಕ್ಷನಾಗಿ ಚರ್ಚೆ ಮಾಡಿ, ಗ್ಯಾರಂಟಿ ಯೋಜನೆಗಳ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದು ಸೂಕ್ತವಲ್ಲ ಎಂದು ತೀರ್ಮಾನ ಮಾಡಿಕೊಂಡಿದ್ದೇವೆ. ಯಾರು ಏನೆ ಹೇಳಿದರು ಸಹ ಈಗಾಗಲೇ ಮುಖ್ಯಮಂತ್ರಿಯವರು, ಪಕ್ಷದ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
“ಗ್ಯಾರಂಟಿ ಯೋಜನೆಗಳ ಜಾರಿಯಿಂದ ಒಂದಷ್ಟು ಹಣಕಾಸಿನ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುವಾಗ ಮರು ಹೊಂದಿಕೆ ಮಾಡಬೇಕಾಗುತ್ತದೆ. ಇದನ್ನು ನಾವು ಮಾಡುತ್ತೇವೆ. ಅದು ನಮಗೆ ಗೊತ್ತಿದೆ. ಜನ ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿದ್ದು, ಯಾವ ಬೇರೆ ಯೋಜನೆಗಳನ್ನು ಜಾರಿಗೆ ತಂದರು ಪ್ರಯೋಜನ ಆಗುವುದಿಲ್ಲ” ಎಂದು ಸಚಿವ ಪರಮೇಶ್ವರ್ ಹೇಳಿದರು.
ಖಾಲಿಯಾಗಿರುವ ಸಚಿವ ಸ್ಥಾನದ ಭರ್ತಿಯ ಕುರಿತು ಪ್ರತಿಕ್ರಿಯಿಸಿದ ಅವರು, “ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡುವ ವಿಚಾರ ಮುಖ್ಯಮಂತ್ರಿಯವರಿಗೆ ಬಿಟ್ಟಿರುವುದು. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳಲಿ. ಅದರ ಬಗ್ಗೆ ನಾನು ಉತ್ತರಿಸಲು ಆಗುವುದಿಲ್ಲ” ಎಂದರು.
ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟದಿಂದ ನಿತೀಶ್ ಕುಮಾರ್ಗೆ ಪ್ರಧಾನಿ ಸ್ಥಾನದ ಆಫರ್ ಬಂದಿತ್ತು: ಜೆಡಿಯು ಮುಖಂಡ ಆರೋಪ
ಸಂಪುಟ ಪುನರ್ ರಚನೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಸಚಿವ ಸಂಪುಟ ಸಭೆ ಇದ್ದೆ ಇರುತ್ತದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣಕ್ಕಾಗಿ ಸಚಿವ ಸಂಪುಟ ಸಭೆ ನಡೆಸಲು ಆಗಿಲ್ಲ. ಅನೇಕ ತೀರ್ಮಾನಗಳನ್ನು ಕೈಗೊಳ್ಳಲು ಆಗಿಲ್ಲ. ಸಭೆಗೂ ಸಚಿವರ ಬದಲಾವಣೆಗೂ ಸಂಬಂಧವಿಲ್ಲ. ಪುನರ್ ರಚನೆ ಹೈಕಮಾಂಡ್ನವರ ತೀರ್ಮಾನ. ನಾವ್ಯಾರೂ ಅದರ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ” ಎಂದು ಹೇಳಿದರು.
