ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಭಾಷಣ ಮಾಡುವಾಗ ಬೈಕ್ನಲ್ಲಿ ಬಂದ ಯುವಕ ಅವರನ್ನು ಕೆಟ್ಟದಾಗಿ ಬೈಯ್ದು ಪರಾರಿಯಾಗಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದದಿಂದ ನಿಂಧಿಸಿ ಅಲ್ಲಿಂದ ಪರಾರಿ ಆಗಿದ್ದಾನೆ. ಹೀಗೆ ಕೆಟ್ಟ ಪದಗಳಿಂದ ಬೈದು ಹೋದ ವ್ಯಕ್ತಿಯನ್ನು ಸ್ಥಳೀಯ ರಂಜಿತ್ ಎಂದು ಗುರುತಿಸಲಾಗಿದೆ.
ಯತೀಂದ್ರ ಅವರು ಬಾಷಣ ಮಾಡುವಾಗ ಕೇಂದ್ರ ಸರ್ಕಾರ ಹಾಗೂ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿ ರಾಮಮಂದಿರ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದರು. ಈ ವೇಳೆ ರಂಜಿತ್ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ಹಾಗೂ ಕಾವಲಿದ್ದ ಪೊಲೀಸರು ಓಡಿ ಹೋದರೂ ಬೈಕ್ನಲ್ಲಿದ್ದರಿಂದ ಆತ ಅವರ ಕೈಗೆ ಸಿಗದೇ ಪರಾರಿ ಆಗಿದ್ದಾನೆ.
ಆ ವ್ಯಕ್ತಿ ಬೈದು ಹೋದ ನಂತರ ಜನರು ಕೂಡ ಕಾರ್ಯಕ್ರಮದಲ್ಲಿ ಎದ್ದು ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ಪೊಲೀಸರ ಮುಂದೆ ಪಟ್ಟು ಹಿಡಿದಿದರು. ಇನ್ನು ಯತೀಂದ್ರ ಅವರ ಭಾಷಣವನ್ನೂ ಕೇಳದೇ ಗಲಾಟೆ ಆರಂಭಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಜಕಾರಣ
“ನೀವು ಕುಳಿತುಕೊಳ್ಳಿ, ಶತ ಶತಮಾನಗಳಿಂದಲೂ ದಲಿತರು ಹಾಗೂ ಕೆಳವರ್ಗದವರಿಗೆ ಈ ರೀತಿಯ ಅವಮಾನ ಆಗುತ್ತಿವೆ. ಆದರೆ, ಈಗ ಸಂವಿಧಾನ ನಮ್ಮ ದೇಶದಲ್ಲಿದೆ. ಕೆಟ್ಟದಾಗಿ ಬೈದು ಹೋದವನನ್ನು ಪೊಲೀಸರು ಹಿಡಿದು ತಕ್ಕ ಶಿಕ್ಷೆ ನೀಡುತ್ತಾರೆ” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಯತೀಂದ್ರ ಅವರಿಗೆ ಬೈದು ಪರಾರಿ ಆಗಿದ್ದ ಯುವಕ ಕೆಲವೇ ಕ್ಷಣಗಳಲ್ಲಿ ಪುನಃ ವೇದಿಕೆ ಕಾರ್ಯಕ್ರಮದತ್ತ ಆಗಮಿಸಿದ್ದಾನೆ. ಆಗ ಪೊಲೀಸರು ಅಲರ್ಟ್ ಆಗಿದ್ದು, ಮೈದಾನಕ್ಕೆ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ. ಜನರು ಆತನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗ ಆತನನ್ನು ಜೀಪಿಗೆ ಹತ್ತಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.