ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರಿಗೆ ರಾಮ ಮಂದಿರ ಉದ್ಘಾಟನೆ ಕಾರ್ಯಾಕ್ರಮಕ್ಕೆ ಆಹ್ವಾನಿಸಿದರೂ ಏಕೆ ಬರಲಿಲ್ಲ? ಎಂದು ಪ್ರಧಾನಿ ಮೋದಿಯವರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಆದರೆ ನಾನು ರಾಮ ಮಂದಿರ ಉದ್ಘಾಟನೆಗೆ ಹೋಗಿ ಹೊರಬರುತ್ತಿದ್ದಂತೆ ಪೂರ್ತಿ ಮಂದಿರವನ್ನು ಗಂಗಾ ಜಲದಿಂದ ಶುದ್ಧಿಗೊಳಿಸುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ರಾಮ ಮಂದಿರ ಉದ್ಘಾಟನೆಗೆ ಏಕೆ ಕರೆಯಲಿಲ್ಲ. ಸಾಂವಿಧಾನಿಕವಾಗಿ ನಿಮಗಿಂತ ದೊಡ್ಡ ಸ್ಥಾನದಲ್ಲಿರುವ ಅವರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂಬ ತಾರತಮ್ಯದಿಂದ ಕರೆಯಲಿಲ್ಲವೇ ಎಂಬ ಪ್ರಶ್ನೆಗೆ ಮೊದಲು ಮೋದಿ ಉತ್ತರಿಸಲಿ” ಎಂದರು.
ಮೋದಿ ದೇಶ ಸತ್ಯನಾಶ ಮಾಡಿಬಿಡ್ತಾರೆ :
ದೇಶದ ಮುಂದಿನ ಪೀಳಿಗೆಗಾಗಿ, ಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಯೋಚಿಸಿ ಮತ ಚಲಾಯಿಸಿದರೆ ದೇಶ ಕಲ್ಯಾಣವಾಗುತ್ತದೆ. ಹುಕುಂ ಆಡಳಿತ ನಡೆಸುವ ಮೂಲಕ ಪ್ರಧಾನಿ ಮೋದಿ ದೇಶ ಸತ್ಯನಾಶ ಮಾಡಿಬಿಡ್ತಾರೆ ಎಂದರು.
“ಶ್ರೀಮಂತರ ಸಂಪತ್ತನ್ನು ಕಸಿದುಕೊಂಡು ಅದನ್ನು ಕಾಂಗ್ರೆಸ್ ಪಕ್ಷ ಬಡವರಿಗೆ ಹಾಗೂ ಮುಸ್ಲಿಮರಿಗೆ ಹಂಚಲಿದೆ ಎಂದು ಮೋದಿಯವರು ಆರೋಪಿಸಿದ್ದಾರೆ. ಆದರೆ ವಾಸ್ತವದಲ್ಲಿ ಸಾರ್ವಜನಿಕರ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಪ್ರಬಲ ಜನರು ಮೋದಿ ಅವರ ಜೊತೆಯಲ್ಲೇ ಇದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಕುಟುಕಿದರು.
“ಬಂದರು, ವಿಮಾನ ನಿಲ್ದಾಣ, ಹೆದ್ದಾರಿ ಎಲ್ಲವನ್ನೂ ಅವರಿಗೆ ಮೋದಿ ಮಾರಿ ಬಿಟ್ಟಿದ್ದಾರೆ. ಈ ದೇಶದಲ್ಲಿರುವ 22 ಜನ ಶ್ರೀಮಂತರ ಬಳಿ ಸಂಗ್ರಹವಾಗಿರುವ ಸಂಪತ್ತು ಈ ದೇಶದ 70 ಕೋಟಿ ಜನರಲ್ಲಿರುವ ಸಂಪತ್ತಿಗೆ ಸರಿಸಮಾನವಾಗಿದೆ. ಇಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ” ಎಂದರು.
“ಕಾಂಗ್ರೆಸ್ಸಿನವರು ನಿಮ್ಮ ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತಾರೆ ಎಂದು ಆರೋಪಿಸುತ್ತಾ ಬೂಟಾಟಿಕೆಯ ಮಾತಿನ ಮೂಲಕ ಜನರನ್ನು ಮರಳು ಮಾಡುವ ಕೆಲಸಕ್ಕೆ ಮಾತ್ರ ಮೋದಿ ಸೀಮಿತರಾಗಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿಓದಿದ್ದೀರಾ? ಪೆನ್ಡ್ರೈವ್ ಕೇಸು| ಮಹತ್ವದ ತಿರುವು: ಬಿಜೆಪಿ ನಾಯಕನ ವಿರುದ್ಧ ಎಚ್ಡಿಕೆ ಆರೋಪ
“ಹಿಂದೆ ಕೋವಿಡ್ ಸಂದರ್ಭದಲ್ಲಿ ಹಾಗೂ ಈಗ ಬರಗಾಲದ ಸಂದರ್ಭದಲ್ಲಿ ನರೇಗಾ ದಿನಗಳನ್ನ 100ರಿಂದ 150 ದಿನಗಳಿಗೆ ಏರಿಸುವಂತೆ ನಾನು ಮೋದಿಯವರಿಗೆ ನಾನು ಮನವಿ ಮಾಡಿದೆ. ಆದರೆ ಜನರಿಗೆ ಸಹಾಯ ಆಗುವಂತಹ ಕೆಲಸವನ್ನು ಅವರು ಮಾಡಲೇ ಇಲ್ಲಾ. ಈ ಮೂಲಕ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರ ಶ್ರಮಕ್ಕೆ ಅವರು ದ್ರೋಹ ಮಾಡಿದರು. ಆ ದ್ರೋಹಕ್ಕೆ ಈ ಬಾರಿ ತಕ್ಕ ಉತ್ತರ ನೀಡಲು ಜನ ತೀರ್ಮಾನಿಸಿದ್ದಾರೆ” ಎಂದರು.