ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಅವರನ್ನು ಹೈಕೋರ್ಟ್ ಬಿಡುಗಡೆಗೊಳಿಸಿರುವ ವಿಚಾರ ಕಾಂಗ್ರೆಸ್ಗೆ ಮುಖಭಂಗ ಪ್ರಶ್ನೆಯೇ ಬರಲ್ಲ. ಅದು ಜಾಮೀನು ಸಹಿತ ಪ್ರಕರಣವಾಗಿದೆ. ಎಫ್ ಎಸ್ ಎಲ್ ವರದಿ ಬರಲಿ ಆಮೇಲೆ ನೋಡೋಣ. ಕಾನೂನು ಕೇವಲ ಬಿಜೆಪಿಯವರಿಗೆ ಮಾತ್ರ ಗೊತ್ತಿಲ್ಲ ನಮಗೂ ಗೊತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, “ಪರಿಷತ್ನಲ್ಲಿ ಒಬ್ಬ ಮಹಿಳೆಗೆ ಅವಮಾನಕರವಾಗಿ ಮಾತನಾಡಿದ್ದಾರೆ. ಅವರ ಬೆನ್ನಿಗೆ ಹಲವಾರು ಶಾಸಕರು ನಿಂತಿದ್ದಾರೆ. ಹಾಗೆ ಮಾತನಾಡಿದ್ದು ತಪ್ಪು ಅಂತ ಕೂಡಾ ಹೇಳುತ್ತಿಲ್ಲ ಅಂದರೆ ಎಷ್ಟು ದುರಹಂಕಾರ ಇರಬೇಕು” ಎಂದರು.
“ಘಟನೆಯನ್ನು ಬಿಜೆಪಿಯ ಯಾರಾದರೂ ಒಬ್ಬರು ಖಂಡಿಸಿದ್ದಾರೆಯೇ? ಈ ಪ್ರಕರಣದಿಂದ ಎಲ್ಲರೂ ಒಗ್ಗಾಟ್ಟಾಗಿದ್ದೇವೆ ಎನ್ನುತ್ತಾರೆ. ಅಂದರೆ ಎಲ್ಲರೂ ಹಾಳು ಬುದ್ದಿಯವರೇ, ಒಬ್ಬರೂ ಖಂಡಿಸಿಲ್ಲ ಎಂದರೆ ಎಲ್ಲರೂ ದುಶ್ಯಾಸನರು ಅಲ್ವಾ? ಜನರ ಮನೆ ಬೆಳಗುವ ಒಂದಾದರೂ ಕೆಲಸ ಅವರು ಮಾಡಿದ್ದಾರೆಯೇ? ಬರೀ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡಾ ಘಟನೆ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ರವಿ ಹಾಗೇ ಹೇಳಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎನ್ನಲಿಲ್ಲ. ಬದಲಿಗೆ ಬಿಜೆಪಿಯವರು ಬಳೆ ತೊಟ್ಟಿಲ್ಲ ಎಂದಿದ್ದಾರೆ. ಬಳೆ ತೊಟ್ಟವರಿಗೆ ಬಿಜೆಪಿಯವರು ಅವಮಾನ ಮಾಡಿದ್ದಾರಲ್ಲ? ಅದಕ್ಕೆ ವಿಜಯೇಂದ್ರ ಏನು ಹೇಳುತ್ತಾರೆ. ಪೂಜ್ಯ ಅಪ್ಪಾಜಿಯವರ ಮೇಲೆಯೇ ಪೋಕ್ಸೋ ಅಡಿಯಲ್ಲಿ ಕೇಸು ದಾಖಲಾಗಿರುವಾಗ ಅವರು ಏನು ಹೇಳುತ್ತಾರೆ? ಮುನಿರತ್ನ ವಿಚಾರದಲ್ಲಿ ಒಂದು ನೋಟಿಸು ಕೂಡಾ ನೀಡಲಿಲ್ಲವಲ್ಲ” ಎಂದು ವ್ಯಂಗ್ಯವಾಡಿದರು.
ರಾತ್ರಿ ಇಡೀ ರವಿ ಅವರನ್ನು ಸುತ್ತಿಸಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಆರೋಪಿ ಅರೆಸ್ಟ್ ಆಗಿದ್ದಾನೆ. ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ನಾಯಕರಿಗೇನು ಕೆಲಸ ? ಅವರು ಅಲ್ಲೇಕೆ ಹೋಗಿದ್ದಾರೆ ? ಆರೋಪಿ ಅರೆಸ್ಟ್ ಆದ ಕೂಡಲೇ ಅವರ ಬಾಡಿ ಸರ್ಜ್ ಮಾಡುವುದು ಒಂದು ಪ್ರಕ್ರಿಯೆ ಅದರ ಪ್ರಕಾರ ಪೊಲೀಸರು ಮಾಡಿದ್ದಾರೆ” ಎಂದರು.