- ಮೇ 4 ಮತ್ತು 11ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳು
- 2022ರಲ್ಲೂ ಎರಡು ಪಕ್ಷಗಳ ನಡುವೆ ಸೀಟು ಹಂಟಿಕೆಯಲ್ಲಿ ಭಿನ್ನಭಿಪ್ರಾಯ
ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಹೊರಟಿರುವ ವಿಪಕ್ಷಗಳ ಮೈತ್ರಿಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಶಮನಗೊಳ್ಳುತ್ತಿಲ್ಲ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಪಕ್ಷಗಳು ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದವು. ಆದರೆ ಕೆಲವು ಸೀಟು ಹಂಚಿಕೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಒಮ್ಮತಕ್ಕೆ ಬರುತ್ತಿಲ್ಲ.
ಮೀರತ್ನ ಮಾವನ ನಗರ ಪಾಲಿಕೆ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್ಪಿಯು ದೀಪಕ್ ಗಿರಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದರೆ, ಆರ್ಎಲ್ಡಿ ಅಯ್ಯುಬ್ ಕಾಲಿಯಾ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅದೇ ರೀತಿ, ಬಾಗ್ಪತ್ನ ಖೇಖ್ಡಾ ನಗರ ಪಾಲಿಕೆಯಲ್ಲಿ, ಎಸ್ಪಿ ಸಂಗೀತಾ ಧಾಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಾಮನಿರ್ದೇಶನ ಮಾಡಿದರೆ, ಆರ್ಎಲ್ಡಿ ರಜನಿ ಧಾಮಕ್ಕೆ ಅವರಿಗೆ ಟಿಕೆಟ್ ನೀಡಿತು.
ತನ್ನ ನಿಲುವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿರುವ ಎಸ್ಪಿ ಮಂಗಳವಾರ ಟ್ವೀಟ್ ಮಾಡಿ “ಬರೌತ್ ಮತ್ತು ಬಾಗ್ಪತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಪಿ ಸ್ಪರ್ಧಿಸುವುದಿಲ್ಲ ಮತ್ತು ಆರ್ಎಲ್ಡಿಯನ್ನು ಬೆಂಬಲಿಸುತ್ತೇವೆ” ಎಂದು ಹೇಳಿತ್ತು.
ಈ ಸುದ್ದಿ ಓದಿದ್ದೀರಾ? ಸಲಿಂಗ ವಿವಾಹ ಮಾನ್ಯತೆ; ಹತ್ತು ದಿನಗಳೊಳಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ಆದಾಗ್ಯೂ, ಮೀರತ್ ನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಹುದ್ದೆಯ ವಿಚಾರವಾಗಿ ಎಸ್ಪಿ – ಆರ್ಎಲ್ಡಿ ಮೈತ್ರಿಯಲ್ಲಿ ಪರಸ್ಪರ ಸಂಘರ್ಷ ಎದುರಾಗಿದೆ. ಸ್ಥಳೀಯ ಶಾಸಕ ಅತುಲ್ ಪ್ರಧಾನ್ ಅವರ ಪತ್ನಿ ಸೀಮಾ ಪ್ರಧಾನ್ ಮೀರತ್ನ ಮೇಯರ್ಗೆ ಸ್ಪರ್ಧಿಸಲಿದ್ದಾರೆ ಎಂದು ಎಸ್ಪಿ ಘೋಷಿಸಿದ್ದು, ಆರ್ಎಲ್ಡಿ ಕೂಡ ಈ ಸ್ಥಾನಕ್ಕೆ ಸ್ಪರ್ಧಿಸುವತ್ತಾ ಕಣ್ಣಿಟ್ಟಿದೆ. ಈ ಬಗ್ಗೆ ಪಕ್ಷದ ನಾಯಕತ್ವ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಆರ್ಎಲ್ಡಿ ಹಿರಿಯ ನಾಯಕರು ತಿಳಿಸಿದ್ದಾರೆ.
ಏತನ್ಮಧ್ಯೆ, ಮೀರತ್ ಮೇಯರ್ ಸ್ಥಾನವನ್ನು ಪಕ್ಷವು ಆರ್ಎಲ್ಡಿಗೆ ಬಿಟ್ಟುಕೊಡುವುದಿಲ್ಲ ಎಂದು ಎಸ್ಪಿಯ ಮೂಲಗಳು ತಿಳಿಸಿವೆ. “ನಾವು ಎರಡು ಸ್ಥಾನಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ, ಆದರೆ ಮೀರತ್ ಅನ್ನು ಈಗಾಗಲೇ ಶಾಸಕರ ಪತ್ನಿಗೆ ನೀಡಲಾಗಿದೆ. ಆದ್ದರಿಂದ, ನಾವು ಅದನ್ನು ಆರ್ಎಲ್ಡಿಗೆ ನೀಡುವ ಸಾಧ್ಯತೆಯಿಲ್ಲ”ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
“ಕೋಮುವಾದಿ ಬಿಜೆಪಿ ವಿರುದ್ಧ ಹೋರಾಡಲು ಎಸ್ಪಿ ತನ್ನ ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹೋರಾಟವು ಸೈದ್ಧಾಂತಿಕ ಮತ್ತು ಅದಕ್ಕಾಗಿ ಸಮಾಜವಾದಿ ಪಕ್ಷದ ನಾಯಕರು ರಾಜಿ ಮಾಡಿಕೊಳ್ಳಬೇಕು. ನಾವು ಸಹ ರಾಜಿ ಮಾಡಿಕೊಳ್ಳುತ್ತೇವೆ. ಏಕಪಕ್ಷೀಯ ನಿರ್ಧಾರದಿಂದ ಯಾವುದೇ ಪ್ರಯೋಜನವಾಗುವುದಿಲ್ಲ” ಎಂದು ಆರ್ಎಲ್ಡಿ ನಾಯಕರೊಬ್ಬರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ ಹಾಗೂ 2022ರ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವೆ ಬಿಕ್ಕಟ್ಟು ಉಂಟಾದ ಕಾರಣ ಹೆಚ್ಚು ಸ್ಥಾನ ಗಳಿಸಲು ವಿಫಲವಾಗಿದ್ದವು. 2022ರ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ 347 ಸ್ಥಾನಗಳಲ್ಲಿ ಸ್ಪರ್ಧಿಸಿ 111 ಸೀಟು ಜಯಗಳಿಸಿದರೆ, ಆರ್ಎಲ್ಡಿ 33 ಸ್ಥಾನಗಳಲ್ಲಿ ಕಣಕ್ಕಿಳಿದು ಕೇವಲ 8 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿತ್ತು. ಬಿಜೆಪಿ 255 ಸ್ಥಾನಗಳೊಂದಿಗೆ ಬಹುಮತ ಪಡೆದು ಸರ್ಕಾರ ರಚಿಸಿತ್ತು.
ಉತ್ತರ ಪ್ರದೇಶದ 17 ಪುರಸಭೆ, 199 ನಗರ ಪಾಲಿಕೆ ಮತ್ತು 544 ನಗರ ಪಂಚಾಯತ್ಗಳು ಸೇರಿ 760 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 4 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ.