ನಾನು ಪಕ್ಷಾಂತರ ಆಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿ ಮತ್ತು ಅವರ ಶಿಷ್ಯ. ಹಿಂದೆ ಅವರು ನೀಡಿದ್ದ ಅನುದಾನದಿಂದಲೇ ಬೆಳೆದು ನಾನು ಎರಡನೇ ಬಾರಿಗೆ ಆಯ್ಕೆಯಾದೆ ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರ ಕುರಿತು ಬಣ್ಣಿಸಿದ್ದಾರೆ.
ಬೆಂಗಳೂರಿನ ಕೇತೋಹಳ್ಳಿ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಂಡ ಶಾಸಕ ಎಸ್ ಟಿ ಸೋಮಶೇಖರ್ ಅವರು ತಮ್ಮ ಭಾಷಣದ ವೇಳೆ ರಾಜಕೀಯವನ್ನು ಮರೆತು ಸಿದ್ದರಾಮಯ್ಯ ಕುರಿತು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
“ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರೇ” ಎಂದು ಭಾಷಣ ಆರಂಭಿಸಿದ ಎಸ್ ಟಿ ಸೋಮಶೇಖರ್, “ಸಿದ್ದರಾಮಯ್ಯ ಅವರು 2013ರಿಂದ 2018ರ ಅವಧಿಯಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ನಾನು ಇಲ್ಲಿ ಶಾಸಕನಾಗಿದ್ದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಯಾವತ್ತೂ ಅನುದಾನ ಇಲ್ಲ ಎಂದು ಹೇಳಲಿಲ್ಲ” ಎಂದರು.
“ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೇ ಪ್ರತಿಯೊಂದು ಹಂತದಲ್ಲಿಯೂ ನಮಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅವರು ಕೊಟ್ಟ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಕಾರಣಕ್ಕಾಗಿಯೇ ನಾನು 2018ರ ಚುನಾವಣೆಯಲ್ಲಿ ಮತ್ತೆ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು” ಎಂದು ಸ್ಮರಿಸಿದ್ದಾರೆ.
“ರಾಜಕಾರಣ ಬೇರೆ, ಪಕ್ಷಾಂತರ ಆದರೂ ಸಿದ್ದರಾಮಯ್ಯ ಅವರನ್ನು ನಾನು ಯಾವತ್ತು ಮರೆತಿರಲಿಲ್ಲ. ಕರ್ನಾಟಕದಲ್ಲಿ ನುಡಿದಂತೆ ನಡೆಯುವ ಅಪರೂಪದ ರಾಜಕಾರಣಿ ಸಿದ್ದರಾಮಯ್ಯ. ದ್ವೇಷದ ರಾಜಕಾರಣ ಮಾಡದೆ ಯಾವತ್ತೂ ಬಡ ಜನರ ಸೇವೆ ಮಾಡುವವರು ಅವರು; ಅವರು ಬಾಯಲ್ಲಿ ಹೇಳಿದ್ದು ನೂರಕ್ಕೆ ನೂರು ಜಾರಿಯಾಗುತ್ತದೆ” ಎಂದು ಸಿದ್ದರಾಮಯ್ಯ ಅವರ ಕಾರ್ಯದಕ್ಷತೆಯ ಗುಣಗಾನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಜಾತಿಗಣತಿ ಪಡೆಯಬೇಡಿ ಎಂದು ಪುಟ್ಟರಂಗಶೆಟ್ಟಿಯವರಿಗೆ ಹೇಳಿದ್ದೇ ಆಗಿನ ಸಿಎಂ ಕುಮಾರಸ್ವಾಮಿ: ಸಿದ್ದರಾಮಯ್ಯ ಆರೋಪ
“ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ಜನತೆಯ ನಾಡಿಮಿಡಿತ ಗೊತ್ತಿದೆ. ರಾಜ್ಯದ ಜನತೆಗೆ ಏನೆಲ್ಲ ಸಹಾಯ ಮಾಡಬೇಕು. ಯಾರಿಗೆ ಏನೆಲ್ಲ ಸಹಾಯ ಮಾಡಿದರೆ, ಈ ರಾಜ್ಯದ ಜನ ನನ್ನನ್ನು ನೆನೆಯುತ್ತಾರೆ ಎನ್ನುನ ಮಾಹಿತಿ ಅವರಿಗಿದೆ. ಅದಕ್ಕೋಸ್ಕರವೇ ರಾಜ್ಯದ ಜನತೆಯ ಆಶೀರ್ವಾದದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಜನರ ಋಣವನ್ನು ತೀರಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಏನೆಲ್ಲ ಘೋಷಣೆ ಮಾಡಿದ್ದಾರೆ, ಏನೆಲ್ಲ ಕಮಿಟ್ಮೆಂಟ್ ಮಾಡಿಕೊಂಡಿದ್ದಾರೋ ಅದನ್ನು ಈಡೇರಿಸಲು ಬದ್ಧರಿದ್ದಾರೆ” ಎಂದು ಹೊಗಳಿದರು.
“ನಮ್ಮ ಕ್ಷೇತ್ರಕ್ಕೆ ಜನಪ್ರಿಯ ಮುಖ್ಯಮಂತ್ರಿ ಎರಡನೇ ಬಾರಿಗೆ ಬಂದಿದ್ದಾರೆ. ನಾನೂ ಕೂಡ ಈ ಭಾಗದ ಸೇವಕನಾಗಿ, ಅವರ ಅಭಿಮಾನಿಯಾಗಿ, ಅವರ ಶಿಷ್ಯನಾಗಿ ಅವರನ್ನು ಬರಮಾಡಿಕೊಂಡಿದ್ದೇನೆ” ಎಂದಿದ್ದಾರೆ.