- ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಕುಮಾರಸ್ವಾಮಿ
- ಗ್ಯಾರಂಟಿಗಳನ್ನು ಜನರಿಗೆ ಸರಿಯಾಗಿ ತಲುಪಿಸಿ; ಸರ್ಕಾರಕ್ಕೆ ಹೆಚ್ಡಿಕೆ ಸಲಹೆ
ಜನರ ಅಗತ್ಯಗನುಗುಣವಾಗಿ ಜೆಡಿಎಸ್ ಕೆಲಸ ಮಾಡಲಿದೆ. ನಮ್ಮ ಪಕ್ಷ ವಿಪಕ್ಷ ಸ್ಥಾನದಲ್ಲಿ ಕೂತಿರುವುದೇ ಜನರಿಗಾಗಿ ಯುದ್ಧ ಮಾಡಲು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜಾತ್ಯತೀತ ಜನತಾದಳದ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಜೆಡಿಎಸ್ ವಿಪಕ್ಷದಲ್ಲಿ ಕುಳಿತಿರುವುದೇ ಸರ್ಕಾರದ ತಪ್ಪುಗಳ ವಿರುದ್ಧ ಯುದ್ಧ ಮಾಡಲಿಕ್ಕಾಗಿ. ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿನಂತೆ ನಡೆಯದಿದ್ದರೆ ನಾವು ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.
ಜನಸೇವೆ ಸಲುವಾಗಿ ಸ್ನೇಹಕ್ಕೂ ಸಿದ್ಧ ಯುದ್ಧಕ್ಕೂ ಸಿದ್ಧ ಎಂಬ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ನಾವಿಲ್ಲಿ ಕುಳಿತಿರುವುದು ಸ್ನೇಹ ಮಾಡಲು ಅಲ್ಲ. ಅಗತ್ಯ ಬಿದ್ದರೆ ಜನರಿಗಾಗಿ ಯುದ್ಧ ಮಾಡಲು ಸಿದ್ಧ ಎಂದು ತಿರುಗೇಟು ನೀಡಿದರು.
ವಿಪಕ್ಷಗಳು ಜನರನ್ನ ಎತ್ತುಕಟ್ಟುತ್ತಿವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ವೇದಿಕೆ ಸಿದ್ಧ ಮಾಡಿದ್ದೇ ಅವರ ಪಕ್ಷದವರು. ಗ್ಯಾರಂಟಿ ಯೋಜನೆಗೆ ಸಹಿ ಮಾಡಿಕೊಟ್ಟಿರಿ ಎಂದಾದ ಮೇಲೆ ಅದನ್ನು ಕೊಟ್ಟ ಮಾತಿನಂತೆಯೇ ಅನುಷ್ಠಾನ ಮಾಡಬೇಕೆನ್ನುವ ಪರಿಜ್ಞಾನ ಇಲ್ಲವೇ ಎಂದ ಕುಮಾರಸ್ವಾಮಿ, ಗ್ಯಾರಂಟಿ ಭರವಸೆ ಕೊಡುವಾಗ ಇವರಿಗೆ ಅದರ ಮುಂದಿನ ಸವಾಲುಗಳ ಬಗ್ಗೆ ತಿಳಿದಿರಲಿಲ್ಲವೆ? ಎಂದು ಕುಟುಕಿದರು.
ನಾವು ಎಷ್ಟು ಸ್ಥಾನ ಗಳಿಸಿದ್ದೇವೆ ಎಂಬುದರ ಬಗ್ಗೆ ಈಗ ಚಿಂತಿಸುವುದಿಲ್ಲ. ವಿರೋಧ ಪಕ್ಷದಲ್ಲಿ ಇದ್ದು ಪ್ರಬಲ ಹೋರಾಟ ನಡೆಸುತ್ತೇವೆ. ಅದಕ್ಕೆ ಬಿಜೆಪಿಯವರಂತೆ ಆತುರವಿಲ್ಲ. ಸರ್ಕಾರ ಕೆಲಸ ಮಾಡಲು ಒಂದಷ್ಟು ದಿನ ಕಾಲಾವಕಾಶ ನೀಡುತ್ತೇವೆ. ನಂತರ ಹೋರಾಟ ಮಾಡುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ?:ರೆಂಟ್ ಅಗ್ರಿಮೆಂಟ್ ಇದ್ದರೆ ಮಾತ್ರ ಬಾಡಿಗೆದಾರರಿಗೆ ʼಉಚಿತ ವಿದ್ಯುತ್ʼ: ಸಚಿವ ಕೆ ಜೆ ಜಾರ್ಜ್ ಮಾಹಿತಿ
ರಾಜ್ಯ ಸರ್ಕಾರ ಮಂಡಿಸುವ ಬಜೆಟ್ ಮತ್ತು ಅದರ ಅನುಷ್ಠಾನ ನೋಡಿಕೊಂಡು ಮುಂದಿನ ಹೆಜ್ಜೆಇಡುತ್ತೇವೆ. ಬಡವರಿಗೆ ಉಚಿತ ಸೌಲಭ್ಯಗಳನ್ನು ನೀಡುವುದನ್ನು ನಾನಾಗಲಿ ನನ್ನ ಪಕ್ಷವಾಗಲಿ ವಿರೋಧಿಸುವುದಿಲ್ಲ. ಏಕೆಂದರೆ ಬಡವರು ಕೂಡ ತೆರಿಗೆ ಕಟ್ಟುತ್ತಾರೆ. ಸರ್ಕಾರದ ಸೌಲಭ್ಯ ಪಡೆಯಲು ಅವರಿಗೂ ಹಕ್ಕಿದೆ. ಆದರೆ, ಈ ಸರ್ಕಾರ ಭರವಸೆ ನೀಡಿ ಮೋಸ ಮಾಡಬಾರದು. ಒಂದು ವೇಳೆ ಹಾಗಾದಲ್ಲಿ ಅದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಹೇಳಿದರು.
ಇನ್ನು ಜೆಡಿಎಸ್ ಸಂಘಟನೆ ವಿಚಾರವಾಗಿ ಮಾತನಾಡಿದ ಅವರು ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಅವಲೋಕನ ಮಾಡಲಾಗುವುದು, ಹಾಗೆಯೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣಾ ಸಿದ್ಧತೆಗಳ ಕುರಿತು ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಸರಣಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಆ ಟೈಮ್ ಕಳೆದು ಹೋಗಿದೆ ಸಾರ್.