- ರಾಜ್ಯದ ವಿಮಾನ ನಿಲ್ದಾಣಗಳ ನಿರ್ವಹಣೆ ಸರ್ಕಾರದಿಂದಲೇ; ಚರ್ಚೆ
- ಬಂಡವಾಳ ಹೂಡಿಕೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ; ಕೈಗಾರಿಕಾ ಸಚಿವ
ರಾಜ್ಯದಲ್ಲಿ ನೈಜ ಬಂಡವಾಳ ಹೂಡಿಕೆ ಮಾಡುವುದೇ ಆದಲ್ಲಿ ಅದಾನಿ-ಅಂಬಾನಿ ಕಂಪನಿಗಳಿಗೂ ಹೂಡಿಕೆ ಅವಕಾಶ ನೀಡುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಧಾನಸೌಧಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಬೇಕಾದರೂ ಕರ್ನಾಟಕದಲ್ಲಿ ಬಂಡವಾಳ ಹೂಡಬಹುದು. ಇದಕ್ಕೆ ಅಂದಾನಿ-ಅದಾನಿ ಕಂಪನಿಗಳು ಹೊರತಲ್ಲ. ಇದರಿಂದ ರಾಜ್ಯಕ್ಕೆ ಪ್ರಯೋಜನವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಅಂದಾನಿ-ಅದಾನಿ ಈ ಸಮೂಹಗಳ ಮೇಲೆ ಯಾವುದೇ ಪ್ರಕರಣಗಳಿದ್ದರೂ ಅದನ್ನು ಕಾನೂನು ನೋಡಿಕೊಳ್ಳುತ್ತದೆ. ತಪ್ಪಾಗಿದ್ದರೆ ಕಾನೂನಿನನ್ವಯ ಕ್ರಮವಾಗುತ್ತದೆ ಎಂದ ಸಚಿವರು, ರಾಜ್ಯದಲ್ಲಿ ಅವರ ಹೂಡಿಕೆ ನೈಜವೇ ಆಗಿದ್ದರೆ ಹೂಡಿಕೆ ಅವಕಾಶ ಮಾಡಿಕೊಡುತ್ತೇವೆ ಎಂದರು.
ಸರ್ಕಾರದಿಂದ ವಿಮಾನ ನಿಲ್ದಾಣ ನಿರ್ವಹಣೆ
ರಾಜ್ಯದಲ್ಲಿ ವಿಮಾನ ನಿಲ್ದಾಣಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆದರೆ ನಿರ್ವಹಣೆಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಆಗದೇ ಇರುವ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ರಾಜ್ಯವೇ ಮಾಡಿದರೆ ಸರ್ಕಾರಕ್ಕೆ ಲಾಭ ಆಗಲಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.
ಮಹಾರಾಷ್ಟ್ರವನ್ನೂ ಒಳಗೊಂಡಂತೆ 2-3 ರಾಜ್ಯಗಳಲ್ಲಿ ಅಲ್ಲಿನ ಸರ್ಕಾರವೇ ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುತ್ತಿದೆ. ಇದೇ ಮಾದರಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ಸರ್ಕಾರಿ ಆಸ್ಪತ್ರೆಗಳ ಅಸಮರ್ಪಕ ನಿರ್ವಹಣೆ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಆದ್ಯತಾ ವಲಯಗಳಿಗೆ ವಿಷನ್ ಗ್ರೂಪ್
ರಾಜ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಉತ್ತೇಜಿಸಲು ಸರ್ಕಾರ ಆಯ್ದ ಏಳು ವಲಯಗಳಲ್ಲಿ ವಿಷನ್ ಗ್ರೂಪ್ಗಳನ್ನು ರಚಿಸಲಿದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಉದ್ಯಮಿಗಳು, ಉನ್ನತಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ಇರುವ ಈ ವಿಷನ್ ಗ್ರೂಪ್ಗಳು ಕೈಗಾರಿಕಾ ಅಭಿವೃದ್ಧಿಗೆ ಸೂಕ್ತ ಮಾರ್ಗದರ್ಶನ ನೀಡಲಿವೆ.
ವೈಮಾನಿಕ ಮತ್ತು ರಕ್ಷಣೆ, ಮಷಿನ್ ಅಂಟ್ ಟೂಲ್ಸ್, ಔಷಧ, ಕಬ್ಬಿಣ– ಉಕ್ಕು, ಸಿಮೆಂಟ್ ಉತ್ಪಾದನಾ ಕ್ಷೇತ್ರಗಳನ್ನು ಒಳಗೊಂಡ ಪ್ರಮುಖ ಉತ್ಪಾದನಾ ವಲಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಹೊರತುಪಡಿಸಿದ ನವೋದ್ಯಮಗಳು, ಭವಿಷ್ಯದ ಸಂಚಾರ ವ್ಯವಸ್ಥೆ, ಗ್ರೀನ್ ಹೈಡ್ರೋಜನ್, ಆಹಾರ ಸಂಸ್ಕರಣೆ, ಜವಳಿ, ಉಗ್ರಾಣ ಮತ್ತು ಲಾಜಿಸ್ಟಿಕ್ ಗಳನ್ನು ಆದ್ಯತೆಯ ವಲಯಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ವಲಯಗಳಿಗಾಗಿ ವಿಷನ್ ಗ್ರೂಪ್ ಗಳು ರಚನೆ ಆಗುತ್ತಿರುವುದು ಇದೇ ಮೊದಲು ಎಂದ ಸಚಿವರು, ಇದಕ್ಕೂ ಮುನ್ನ ಒಟ್ಟಾರೆ ಉದ್ಯಮದ ಅಭಿವೃದ್ಧಿಗೆ ವಿಷನ್ ಗ್ರೂಪ್ ಇತ್ತು ಎಂದು ಹೇಳಿದರು