ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಹಿಂದು ವ್ಯಾಪಾರಸ್ಥರ ಮಳಿಗೆಗಳಿಗೆ ಬಲವಂತದಿಂದ ಕೇಸರಿ ಬಾವುಟ ಕಟ್ಟಿ, ಮುಸ್ಲಿಂ ವ್ಯಾಪಾರಿಗಳ ಮಳಿಗೆಗಳಲ್ಲಿ ಹಿಂದುಗಳು ವ್ಯಾಪಾರ ನಡೆಸಬಾರದು ಎಂದು ಬಹಿರಂಗವಾಗಿ ಕರೆ ನೀಡಿರುವ ವಿಶ್ವ ಹಿಂದೂ ಪರಿಷತ್ನ ಶರಣ್ ಪಂಪ್ವೆಲ್ ಮತ್ತು ಸಹಚರರನ್ನು ಕೋಮು ಪ್ರಚೋದಕ ಸೆಕ್ಷನ್ಗಳಡಿ ಬಂಧಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇಂದು ದ ಕ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಬುಧವಾರ ಬೆಳಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ ನಿಯೋಗವು, ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವ ಮಂಗಳೂರಿನ ಎಲ್ಲ ಸಮುದಾಯಗಳು ಸಂಭ್ರಮಿಸುವ ಹಬ್ಬವಾಗಿ ಕಳೆದ ಶತಮಾನದಿಂದಲೇ ಖ್ಯಾತಿ ಪಡೆದಿದೆ. ದಸರಾದ ಕೊನೆಯ ದಿನ ತುಳುನಾಡಿನಾದ್ಯಂತ ಮಾರ್ನಮಿ ಹುಲಿವೇಷ ತಂಡಗಳು ಜಳಕ (ವೇಷ ಕಳಚುವ) ಕಾರ್ಯಕ್ರಮಕ್ಕಾಗಿ ಮಂಗಳಾದೇವಿ ದೇವಸ್ಥಾನದ ಉತ್ಸವಕ್ಕೆ ಆಗಮಿಸುವುದು, ಅಂದು ಹಿಂದು, ಮುಸ್ಲಿಂ, ಕ್ರೈಸ್ತರು ಸೇರಿದಂತೆ ತುಳುನಾಡಿನ ಎಲ್ಲ ಜಾತಿ, ಧರ್ಮಗಳ ಜನ ಅಲ್ಲಿ ಸೇರಿ ಸಂಭ್ರಮಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡುಬಂದಿದೆ. ಅಲ್ಲಿ ಸೇರುವ ಜನರು, ಅಲ್ಲಿ ನೆರೆಯುವ ಸಂತೆಗೆ ಯಾವುದೇ ಧರ್ಮ, ಜಾತಿ, ಪಂಗಡಗಳ ಹಂಗು, ರಂಗು ಯಾವತ್ತೂ ಇರಲಿಲ್ಲ. ಮುಸ್ಲಿಂ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಮಂಗಳಾದೇವಿ ದಸರಾ ಹುಲಿ ವೇಷಗಳು, ಬಣ್ಣದ ಬೆಳಕು, ಸಂತೆಗಳನ್ನು ನೋಡಲು ನಿರ್ಭಯವಾಗಿ ಭಾಗಿಗಳಾಗುವುದು ಮಂಗಳಾದೇವಿ ದೇವಳ ಹಾಗೂ ಅಲ್ಲಿನ ದಸರಾ ಉತ್ಸವದ ಸೌಹಾರ್ದತೆ, ಜಾತಿ, ಧರ್ಮಗಳನ್ನು ಮೀರಿ ಒಳಗೊಳ್ಳುವ ಗುಣಕ್ಕೆ ಸಾಕ್ಷಿ ಎಂದು ತಿಳಿಸಿದೆ.
ಇಂತಹ ಬಹುದೊಡ್ಡ ಖ್ಯಾತಿಯುಳ್ಳ ಕ್ಷೇತ್ರ ಹಾಗೂ ಆ ಕ್ಷೇತ್ರದ ಪ್ರಖ್ಯಾತ ದಸರಾ ಉತ್ಸವವನ್ನೇ ಗುರಿಯಾಗಿಸಿ ವಿಎಚ್ಪಿ, ಬಜರಂಗದಳವನ್ನು ಛೂ ಬಿಟ್ಟು ಮತೀಯ ಸೌಹಾರ್ದತೆಯನ್ನು ಕದಡುವ ಕೆಲಸ ಬಹಿರಂಗವಾಗಿಯೇ ನಡೆಯತೊಡಗಿದೆ. ಅದರ ಭಾಗವಾಗಿಯೇ ಮುಸ್ಲಿಂ ಜಾತ್ರಾ ವ್ಯಾಪಾರಿಗಳಿಗೆ ಮಂಗಳಾದೇವಿ ದಸರಾ ಸಂತೆಯಲ್ಲಿ ಅಂಗಡಿ ಮಳಿಗೆ ನೀಡದಂತೆ ದೇವಸ್ಥಾನ ಆಡಳಿತ ಮಂಡಳಿಗೆ ಮನವಿ ಮಾದರಿಯಲ್ಲಿ ಬೆದರಿಕೆ ಪತ್ರ ನೀಡಲಾಯಿತು. ಆ ಮೂಲಕ ಜನರ ನಡುವೆ ಗೊಂದಲ ಮೂಡಿಸಲು ಯತ್ನಿಸಲಾಯಿತು. ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರ ಆ ಪ್ರಯತ್ನ ವಿಫಲಗೊಂಡು ಹಿನ್ನಡೆ ಅನುಭವಿಸಿದ ನಂತರ ಮಂಗಳಾದೇವಿ ದೇವಸ್ಥಾನದ ಮುಂಭಾಗದ ನಗರ ಪಾಲಿಕೆ ಜಾಗದಲ್ಲಿ ಹಾಕಲಾದ ಜಾತ್ರೆ ವ್ಯಾಪಾರದ ಸ್ಟಾಲ್ಗಳಲ್ಲಿ ಹಿಂದು ಧರ್ಮೀಯ ವ್ಯಾಪಾರಿಗಳ ಮಳಿಗೆಗಳನ್ನು ಹುಡುಕಿ ಬಲವಂತವಾಗಿ ಕೇಸರಿ ಧ್ವಜ ಕಟ್ಟುವ, ಆ ಮೂಲಕ ಮುಸ್ಲಿಂ ವ್ಯಾಪಾರಿಗಳನ್ನು ಪ್ರತ್ಯೇಕಿಸುವ, ಕೇಸರಿ ಬಾವುಟ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ಹಿಂದುಗಳು ವ್ಯಾಪಾರ ನಡೆಸುವಂತೆ, ಮುಸ್ಲಿಂ ಸಂತೆ ವ್ಯಾಪಾರಿಗಳೊಂದಿಗೆ ವ್ಯಾಪಾರ ನಡೆಸದೆ ಬಹಿಷ್ಕಾರ ಹಾಕುವಂತೆ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಬಜರಂಗದಳದ ಮುಖಂಡರು ಬಹಿರಂಗ ಕರೆ ನೀಡಿದ್ದಾರೆ ಎಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದು ಸಂವಿಧಾನದ ನಿಯಮಗಳ, ಕ್ರಿಮಿನಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ. ಸಮುದಾಯವೊಂದನ್ನು ಬಹಿಷ್ಕರಿಸುವುದು, ಬಹಿರಂಗವಾಗಿ ಬಹಿಷ್ಕಾರಕ್ಕೆ ಕರೆ ನೀಡುವುದು ಜಾಮೀನು ರಹಿತ ಅಪರಾಧವಾಗಿದೆ. ಶರಣ್ ಪಂಪ್ವೆಲ್ ನೇತೃತ್ವದ ಬಜರಂಗ ದಳದ ಕುಖ್ಯಾತ ಗ್ಯಾಂಗ್ ಪದೇ ಪದೆ ಇಂತಹ ಸೌಹಾರ್ದ ಕದಡುವ, ದ್ವೇಷ ಹರಡುವ ಕ್ರಿಮಿನಲ್ ಕೃತ್ಯಗಳನ್ನು ಎಸಗುತ್ತಲೇ ಬಂದಿದೆ. ಆದರೆ, ಕಾನೂನು ಪಾಲಕರು ಈ ಕುರಿತು ತೀರಾ ಮೃದು ಧೋರಣೆ ತಳೆಯುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಕೋಮುವಾದಿ ಕ್ರಿಮಿನಲ್ ಗಳು ತಮ್ಮ ಗೂಂಡಾಗಿರಿಯನ್ನು ಎಗ್ಗಿಲ್ಲದೆ ಮುಂದುವರಿಸಲು ಅವಕಾಶ ಒದಗಿಸಿದೆ. ಈ ಬಾರಿಯಂತು ಒಂದು ಹೆಜ್ಜೆ ಮುಂದೆ ಹೋಗಿ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಳದ ದಸರಾ ಉತ್ಸವವನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಇಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಕಾಣಬಾರದು, ಕಾನೂನಿನ ಕಠಿಣ ನಿಯಮಗಳಡಿ ತಕ್ಷಣವೇ ಪ್ರಕರಣ ದಾಖಲಿಸಿ ಶರಣ್ ಪಂಪ್ವೆಲ್ ಮತ್ತು ಅವರ ಜೊತೆಗಾರರಾದ ಕ್ರಿಮಿನಲ್ ಗುಂಪನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಬಲವಾಗಿ ಆಗ್ರಹಿಸುತ್ತದೆ. ಇಂತಹ ಕ್ರಮಗಳಿಲ್ಲದೆ ಮುಂದಕ್ಕೆ ಶಾಂತಿ ಕದಡುವ ಘಟನೆಗಳು ಜರುಗಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವೇದಿಕೆ ಎಚ್ಚರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯ ಸಿದ್ದತೆಯ ಭಾಗವಾಗಿಯೇ ಈ ಎಲ್ಲ ಘಟನೆಗಳು ನಡೆಯುತ್ತಿವೆ. ಶರಣ್ ಪಂಪ್ವೆಲ್ ಸೇರಿದಂತೆ ಬಜರಂಗದಳದ ಕಾರ್ಯಕರ್ತರನ್ನು ಛೂ ಬಿಟ್ಟು ಬಿಜೆಪಿ ಮತೀಯ ಉದ್ವಿಗ್ನತೆ ಕೆರಳಿಸಲು ಮುಂದಾಗಿದೆ. ವಿಫಲ ಆಡಳಿತ, ಜನರ ವಿರೋಧ ಕಟ್ಟಿಕೊಂಡಿರುವ ಬಿಜೆಪಿ ಚುನಾವಣಾ ಗೆಲುವಿಗಾಗಿ ಮಂಗಳಾದೇವಿ ದೇವಸ್ಥಾನ, ದಸರಾ ಉತ್ಸವದಂತಹ ಪವಿತ್ರ ಕ್ಷೇತ್ರ, ಉತ್ಸವಗಳ ಹೆಸರು ಕೆಡಿಸಲು ಮುಂದಾಗಿದೆ. ಹಾಗಾಗಿ, ಇಂತಹ ಕೆಟ್ಟ, ದುರಾಲೋಚನೆಯ, ಮತೀಯ ದ್ವೇಷದ ರಾಜಕಾರಣಕ್ಕೆ ಕಡಿವಾಣ ಹಾಕಲು ದೃಢ ಕ್ರಮಗಳನ್ನು ಜರುಗಿಸಬೇಕು, ಐಕ್ಯತೆ, ಸೌಹಾರ್ದತೆಯ ಪರಂಪರೆಯನ್ನು ಎತ್ತಿಹಿಡಿಯಲು ಮುಂದಾಗಬೇಕು ಎಂದು ವೇದಿಕೆಯು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.
ನಿಯೋಗದಲ್ಲಿ ಜಂಟಿ ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ರಘು ಕೆ ಎಕ್ಕಾರು, ಸಾಮಾಜಿಕ ಕಾರ್ಯಕರ್ತರಾದ ಎಂ ಜಿ ಹೆಗ್ಡೆ, ಯಾಸೀನ್ ಕುದ್ರೋಳಿ, ದ. ಕ, ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಝ್, ಪದಾಧಿಕಾರಿಗಳಾದ ಮುಸ್ತಫಾ, ಶ್ರೀನಿವಾಸ್, ಹಿರಿಯ ಕಾರ್ಮಿಕ ನಾಯಕರಾದ ವಿ ಕುಕ್ಯಾನ್, ಕರುಣಾಕರ ಮಾರಿಪಳ್ಳ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಸಮರ್ಥ್ ಭಟ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.