ವಿಕಲಚೇತನರ ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ ನೀಡುವ ಸಾಮಾಜಿಕ ಭದ್ರತಾ ಪಿಂಚಣಿ (ಮಾಶಾಸನ)ಯನ್ನು ದೇಶದಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿವೇಶನದಲ್ಲಿ ಹೇಳಿದರು.
ವಿಧಾನ ಪರಿಷತ್ನಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ವೈ.ಎಂ. ಸತೀಶ್ ಅವರು ವಿಕಲಚೇತನರಿಗೆ ಹಾಗೂ ಮನೋರೋಗಿಗಳಿಗೆ ನೀಡುವ ಮಾಸಾಶನದ ಬಗ್ಗೆ ಉಲ್ಲೇಖಿಸಿದರು. ಶೇ.40 ರಿಂದ ಶೇ.75 ರಷ್ಟು ಅಂಗವಿಕಲತೆ ಇರುವವರಿಗೆ 2021 ರಿಂದ 1,400 ರೂಪಾಯಿ ಹಾಗೂ ಶೇ.75ಕ್ಕೂ ಹೆಚ್ಚು ಅಂಗ ವಿಕಲತೆ ಹಾಗೂ ಮನೋರೋಗಿಗಳಿಗೆ 2,000 ರೂಪಾಯಿ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನವನ್ನು ಹೆಚ್ಚಿಸಬೇಕು, ಕಾಲದಿಂದ ಕಾಲಕ್ಕೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಅಂಗವೈಕ್ಯಲ ಹಾಗೂ ಮನೋವೈಕಲ್ಯ ಹೊಂದಿರುವವರ ಮಾಶಾಸನವನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸಬೇಕು ಎಂಬುದು ನಿಜ. ಇದರಲ್ಲಿ ಸರ್ಕಾರಕ್ಕೆ ಬೇರೆ ಅಭಿಪ್ರಾಯ ಇಲ್ಲ. ರಾಜ್ಯದಲ್ಲಿ ಒಟ್ಟು 78,14,513 ವ್ಯಕ್ತಿಗಳಿಗೆ ನಾನಾ ರೀತಿಯ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುತ್ತಿದೆ. ಇದಕ್ಕಾಗಿಯೇ ಪ್ರತಿವರ್ಷ 10,500 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.
ಕೇಂದ್ರದಿಂದಲೂ ನೆರವು ಸಿಗುವ ನಿರೀಕ್ಷೆ
“ಸಾಮಾಜಿಕ ಭದ್ರತಾ ಪಿಂಚಣಿ ಅಡಿಯಲ್ಲಿ ವಿಕಲಚೇತನರು ಹಾಗೂ ಮನೋರೋಗಕ್ಕೆ ತುತ್ತಾಗಿರುವವರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ರಾಜ್ಯ ಸರ್ಕಾರಕ್ಕಿದೆ” ಎಂದರು.
“ಕೇಂದ್ರ ಸರ್ಕಾರದ ಆಯವ್ಯಯ ಪೂರ್ವ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಾನೇ ಹೋಗಿದ್ದೆ. ರಾಜ್ಯ ಸರ್ಕಾರ 78 ಲಕ್ಷ ಜನರಿಗೆ ಮಾಸಾಶನ ನೀಡುತ್ತಿದ್ದರೆ, ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅವರ ಪಾಲಿನ ಹಣ ನೀಡುತ್ತಿದೆ. ಅದರಲ್ಲೂ ನಾವು ರೂ.1,400 ರಿಂದ ರೂ. 2,000 ಹಣ ಮಾಸಾಶನ ನೀಡುತ್ತಿದ್ದರೆ, ಕೇಂದ್ರದ ಅನುದಾನ ಕೇವಲ ರೂ.200 ರಿಂದ ರೂ.400 ರೂಪಾಯಿ ಮಾತ್ರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಗಿತ್ತು” ಎಂದು ಹೇಳಿದರು.
“ಈ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಕೇಂದ್ರ ಸರ್ಕಾರ ಕೊನೆಯದಾಗಿ ಪರಿಷ್ಕರಣೆ ಮಾಡಿದ್ದು, ನವೆಂಬರ್ 8, 2012 ರಲ್ಲಿ. ಕಳೆದ 12 ವರ್ಷಗಳಿಂದ ಒಂದು ಪೈಸೆಯೂ ಪರಿಷ್ಕರಣೆ ಮಾಡೇ ಇಲ್ಲ. ಹೀಗಾಗಿ ರಾಜ್ಯದ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನಮ್ಮ ಸರ್ಕಾರದ ಪರವಾಗಿ ನಾನು ಮೆಮೋರಂಡಂ ಸಲ್ಲಿಸಿದ್ದೇನೆ. ಆ ಮೆಮೋರಾಂಡಂ ನಲ್ಲಿ ಮಾಸಾಶನ ದರವನ್ನು ಪರಿಷ್ಕರಿಸಿ ಹಾಗೂ ನಾವು 78 ಲಕ್ಷ ಜನರಿಗೆ ಮಾಸಾಶನ ನೀಡುತ್ತಿದ್ದೇವೆ. ಈ ಪೈಕಿ ಕೇಂದ್ರ ಸರ್ಕಾರ ಕೇವಲ 13 ಲಕ್ಷ ಜನರಿಗೆ ಮಾತ್ರ ಅನುದಾನ ನೀಡುತ್ತಿದೆ. ಈ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿತ್ತು” ಎಂದು ತಿಳಿಸಿದರು.