- ರಾಜಕೀಯ ಮೆಚ್ಯುರಿಟಿಗಾಗಿ ನನ್ನತ್ರ ಟ್ಯೂಷನ್ ಬಂದರೆ ಒಳ್ಳೆಯದು
- ಮುನಿಸ್ವಾಮಿ ಎಂದುಕೊಂಡಿದ್ದೆ. ‘ಮನಿ’ಸ್ವಾಮಿ ಎಂಬುದು ಈಗ ಗೊತ್ತಾಯಿತು
ತಮ್ಮನ್ನು ಚೈಲ್ಡ್ ಆರ್ಟಿಸ್ಟ್ ಎಂದಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ಗೆ ಕೋಲಾರ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ. ಪ್ರದೀಪ್ ಈಶ್ವರ್ ಮೊದಲ ಬಾರಿಗೆ ಶಾಸಕರಾಗಿದ್ದು, ಎರಡನೇ ಹುಚ್ಚ ವೆಂಕಟ್ ರೀತಿ ಆಡುತ್ತಿದ್ದಾರೆ. ಇಂಥ ಡ್ರಾಮಾ ಕಂಪನಿಗಳನ್ನು ತುಂಬಾ ನೋಡಿದ್ದೇನೆ ಎಂದು ಮುನಿಸ್ವಾಮಿ ಕಿಡಿಕಾರಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಕರ್ತರ ಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು 2002ರಿಂದಲೂ ರಾಜಕೀಯದಲ್ಲಿದ್ದು, ಪ್ರದೀಪ್ ಈಶ್ವರ್ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ರಾಜಕೀಯ ಮೆಚ್ಯುರಿಟಿಗಾಗಿ ನನ್ನ ಬಳಿ ಟ್ಯೂಶನ್ಗೆ ಬರಲಿ” ಎಂದು ವಾಗ್ದಾಳಿ ನಡೆಸಿದ್ದಾರೆ.
“ನಾನು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಂಸದ ಚುನಾವಣೆವರೆಗೂ ನಿಭಾಯಿಸಿದ್ದೇನೆ. ಪ್ರದೀಪ್ ಈಶ್ವರ್ನಂತಹ ರಾಜಕೀಯ ಅನನುಭವಿಯಿಂದ ನನಗೆ ಕಲಿಯೋದು ಏನಿದೆ? ಅವನೊಬ್ಬ ಎರಡನೇ ಹುಚ್ಚ ವೆಂಕಟ್, ಲಬಾ ಲಬಾ ಅಂತ ಬಾಯಿ ಬಡ್ಕೋತಾನೆ. ಮಕ್ಕಳಿಗೆ ಪಾಠ ಮಾಡಿ ಬಾಯಿ ಬಡ್ಕೋಳೋದಲ್ಲ, ನನ್ನತ್ರ ಟ್ಯೂಷನ್ಗೆ ಬರಲಿ” ಎಂದು ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮುನಿಸ್ವಾಮಿ ಅಲ್ಲ ಅವರು ‘ಮನಿ’ಸ್ವಾಮಿ
ಶುಕ್ರವಾರ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಕಿಡಿಕಾರಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, “ಬಿಜೆಪಿ ಸಂಸದ ಮುನಿಸ್ವಾಮಿ ಒಂದು ರೀತಿ ಚೈಲ್ಡ್ ಆರ್ಟಿಸ್ಟ್ ಇದ್ದಂಗೆ. ಮುನಿಸ್ವಾಮಿ ಅಲ್ಲ ಅವರು ‘ಮನಿ’ಸ್ವಾಮಿ ಎಂದು ವ್ಯಂಗ್ಯವಾಡಿದ್ದರು.
“ನಾನು ಅವರನ್ನು ಮುನಿಸ್ವಾಮಿ ಎಂದುಕೊಂಡಿದ್ದೆ. ‘ಮನಿ’ಸ್ವಾಮಿ ಎಂಬುದು ಈಗ ಗೊತ್ತಾಯಿತು. ಚಿಂತಾಮಣಿ ಮತ್ತು ಕೋಲಾರದ ಪ್ರಭಾವಿ ನಾಯಕರು ಮನಸ್ಸು ಮಾಡಿಲ್ಲದಿದ್ದರೆ ಅವರು ಹೇಗೆ ಸಂಸದರಾಗುತ್ತಿದ್ದರು? ಅವರು ಒಂದು ರೀತಿ ಚೈಲ್ಡ್ ಆರ್ಟಿಸ್ಟ್ ಇದ್ದಂತೆ. ಒಬ್ಬ ಸಂಸದ ಹೇಗೆ ಇರಬೇಕು ಎನ್ನುವುದು ಗೊತ್ತಿಲ್ಲ. ಮುನಿಸ್ವಾಮಣ್ಣ ನನಗೆ ಇನ್ನು ಐದು ವರ್ಷಕ್ಕೆ ಇರೋದು ಹಬ್ಬ. ನಿಮಗೆ ಮುಂದಿನ ವರ್ಷವೇ ಇದೆ ಹಬ್ಬ. ನೋಡೇ ಬಿಡೋಣ” ಎಂದು ಸವಾಲು ಹಾಕಿದ್ದರು.
ಈ ಸುದ್ದಿ ಓದಿದ್ದೀರಾ? ವಿಧಾನಸೌಧದಲ್ಲೇ ‘ಮೌಢ್ಯ’ಕ್ಕೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ
ಪ್ರತಾಪ್ ಸಿಂಹ ಚರ್ಚೆಗೆ ಬರಲಿ
“ಮಾನ್ಯ ಪ್ರತಾಪ್ ಸಿಂಹ ಅವರೇ, ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ದೀರಿ. ಸಂಸದರಾದ ಮೇಲೆ ಓದೋದು ಬಿಟ್ಟು ಬಿಟ್ಟಿದ್ದೀರಿ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಒಂದು ಗೋಡೌನ್ ಇದ್ದಂಗೆ ಎಂದು ಹೇಳ್ತಿರಲ್ಲ, ನಿಮಗೇನಾದರೂ ತಲೆಗಿಲೆ ಕೆಟ್ಟಿದೆಯಾ? ತಾಕತ್ತಿದ್ದರೆ ಎಫ್ಸಿಐ ಬಗ್ಗೆ ಚರ್ಚೆಗೆ ಬನ್ನಿ” ಎಂದು ಪ್ರದೀಪ್ ಈಶ್ವರ್ ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದರು.