- ‘ರಾಜ್ಯದಲ್ಲಿ 18,806 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು’
- ರಾಜ್ಯ ಸರ್ಕಾರ ಗ್ಯಾರಂಟಿಯಲ್ಲಿ ಟೈಂ ಪಾಸ್ ಮಾಡುತ್ತಿದೆ: ಎಚ್ಡಿಕೆ ಕಿಡಿ
ಮಳೆ ಅಭಾವ ಹಾಗೂ ಇನ್ನಿತರ ಸಮಸ್ಯೆಗಳು ಇದ್ದರೂ ಪ್ರಸ್ತುತ ರಾಜ್ಯದಲ್ಲಿ 18,806 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ ವಿದ್ಯುತ್ ಕೊರತೆ ಇದೆ ಎಂದು ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿರು.
ಶನಿವಾರ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ರಾಜ್ಯ ಸರ್ಕಾರ ಕೃತಕ ವಿದ್ಯುತ್ ಅಭಾವ ಸೃಷ್ಟಿ ಮಾಡುತ್ತಿರುವುದು ಕಮಿಷನ್ಗಾಗಿ. ಹೀಗಾಗಿ ಖಾಸಗಿ ಕಂಪನಿಗಳು ಹಾಗೂ ಹೊರ ರಾಜ್ಯದಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ” ಎಂದು ದೂರಿದರು.
ರಾಜ್ಯದಲ್ಲಿ ವಿದ್ಯುತ್ ಸ್ಥಿತಿಗತಿಗಳ ಬಗ್ಗೆ ಕೆಲವೊಂದು ಅಂಕಿಅಂಶ ಬಿಡುಗಡೆ ಮಾಡಿ, “ರಾಜ್ಯದಲ್ಲಿ ಜಲ ವಿದ್ಯುತ್ 3096.6 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ಉಷ್ಣ ವಿದ್ಯುತ್- 5020 ಮೆ. ವ್ಯಾ, ಖಾಸಗಿ ಕಂಪನಿಗಳು – 2,050 ಮೆ.ವ್ಯಾ, ರಿನಿವೇಬಲ್ ಎನರ್ಜಿ – 17848.74 ಮೆ.ವ್ಯಾ, ಡಿಸೇಲ್ 25.2 ಮೆ. ವ್ಯಾ ಹಾಗೂ ನ್ಯೂಕ್ಲಿಯರ್ – 698 ಮೆ.ವ್ಯಾ ಸೇರಿದಂತೆ ಒಟ್ಟು 32,912.52 ಮೆ.ವ್ಯಾ ಉತ್ಪಾದನೆ ಸಾಮರ್ಥ್ಯ ರಾಜ್ಯದಲ್ಲಿ ಇದೆ” ಎಂದು ವಿವರಿಸಿದರು.
“ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಾರೆ. ಆದರೆ 7 ಗಂಟೆಗಳ ಕಾಲ ವಿದ್ಯುತ್ ಕೊಟ್ಟರೂ 28 ಕೋಟಿ ಯೂನಿಟ್ ಅಗತ್ಯವಿದೆ. ವಿದ್ಯುತ್ ಕೊರತೆ ಇರುವುದು 3 ಕೋಟಿ ಯೂನಿಟ್ ಅಷ್ಟೇ. ಸರಿಯಾದ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಬಳಕೆ ಮಾಡಿದ್ದಲ್ಲಿ ಇನ್ನೂ 5.85 ಕೋಟಿ ಯೂನಿಟ್ ಹೆಚ್ಚು ಉಳಿತಾಯ ಮಾಡಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ
“ರಾಜ್ಯದಲ್ಲಿ 16,867.63 ಮೆ.ವ್ಯಾ ಉತ್ಪಾದನೆ ಮಾಡಬಹುದು. ಆದರೆ ವಿದ್ಯುತ್ ಕೊರತೆ ಇದೆ ಎಂದು ಹೇಳಲಾಗುತ್ತದೆ, ಇದೇನಾ ಕಾಂಗ್ರೆಸ್ ಸರ್ಕಾರದ ಪುಣ್ಯದ ಫಲ? ಸರ್ಕಾರ ಗ್ಯಾರಂಟಿಯಲ್ಲಿ ಟೈಂ ಪಾಸ್ ಮಾಡುತ್ತಿದೆ. ಮಾತೆತ್ತಿದ್ದರೆ ಹಿಂದಿನ ಸರ್ಕಾರದ ಕಮಿಷನ್ ಆರೋಪ ಮಾಡುತ್ತಾರೆ. ಆದರೆ ವರ್ಗಾವಣೆ ದಂಧೆಯಲ್ಲಿ ಈ ಸರ್ಕಾರ ಮಾಡಿದ್ದೇನು” ಎಂದು ಪ್ರಶ್ನಿಸಿದರು.
“50% ಜಲ ವಿದ್ಯುತ್ ಉತ್ಪಾದನೆ ಆದರೂ, 1953 ಮೆ.ವ್ಯಾ ಆಗುತ್ತದೆ. ಉಷ್ಣ ವಿದ್ಯುತ್ ಸ್ಥಾವರದಿಂದ 9947.5 ಮೆ ವ್ಯಾ ಉತ್ಪಾದನೆಗೆ ಅವಕಾಶ ಇದೆ. ಆದರೆ ಕಲ್ಪಿದ್ದಲು ಸಮಸ್ಯೆಗೆ ಸದ್ಯ ದಿನಕ್ಕೆ 62,000 ಟನ್ ಕಲ್ಲಿದ್ದಲು ಬೇಕು. ಇದನ್ನು ಸಂಗ್ರಹ ಮಾಡಿದರೆ ಖರೀದಿ ಅಗತ್ಯವಿಲ್ಲ. ಆದರೆ ಇದಕ್ಕೆ ಪರಿಹಾರ ಕಂಡುಕೊಂಡಿಲ್ಲ” ಎಂದು ಕಿಡಿಕಾರಿದರು.
ಸರಿಯಾದ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿದರೆ ಸಮಸ್ಯೆ ಇಲ್ಲ. ಉತ್ತರಪ್ರದೇಶ ಹಾಗೂ ಪಂಜಾಬ್ ನಿಂದ ಖರೀದಿ ಮಾಡ್ತಾರಂತೆ. ವಿದ್ಯುತ್ ಕೊರತೆಯ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾದ ಮಾಹಿತಿ ಇಲ್ಲ. ರೈತರ ಬೆಳೆ ಉಳಿಸಿಕೊಳ್ಳಲು ಏನು ಮಾಡುತ್ತೀರಿ? ಇವಾಗ ಅದಾನಿ ಗ್ರೂಪ್ ನಿಂದಲೇ ವಿದ್ಯುತ್ ಖರೀದಿಗೆ ತೀರ್ಮಾನ ಮಾಡಿದ್ದೀರಿ, ಮತ್ತೊಂದು ಕಡೆಯಲ್ಲಿ ರಾಹುಲ್ ಗಾಂಧಿ ಅದಾನಿ ವಿರುದ್ಧ ಆರೋಪ ಮಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.