- ಕುಮಾರಸ್ವಾಮಿ ಕರ್ಮಕಾಂಡಗಳ ಬಗ್ಗೆ ನಮ್ಮ ಕಡೆಯೂ ಪೆನ್ ಡ್ರೈವ್ ಇದೆ
- ಡಿಕೆ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚುತ್ತಿರುವ ಬಗ್ಗೆ ಎಚ್ಡಿಕೆ ಸಹಿಸುತ್ತಿಲ್ಲ
ಕೇವಲ 19 ಸೀಟು ಪಡೆದು, ತಮ್ಮ ಮಗನ ಸೋಲಿನಿಂದ ತೀವ್ರ ಹತಾಶರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಯವರಿಂದ ಸುಪಾರಿ ಪಡೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಜಿ ಎಂಎಲ್ಸಿ ರಮೇಶ್ ಬಾಬು ಜತೆ ನಡೆದ ಜಂಟಿಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಕುಮಾರಸ್ವಾಮಿ ಅವರು 14 ತಿಂಗಳ ಕಾಲ ಪಂಚತಾರಾ ಹೋಟೆಲ್ ನಲ್ಲಿ ಇದ್ದುಕೊಂಡು ಮಾಡಿರುವ ಕರ್ಮಕಾಂಡಗಳ ಬಗ್ಗೆ ನನ್ನ ಕಡೆಯೂ ಪೆನ್ ಡ್ರೈವ್ ಇದೆ” ಎಂದು ಹರಿಹಾಯ್ದರು.
“ಕುಮಾರಸ್ವಾಮಿ ಮಹಾ ಸುಳ್ಳುಗಾರ. ದೇಶದಲ್ಲಿ ಹಿಟ್ ಅಂಡ್ ರನ್ ಹೇಳಿಕೆ ನೀಡುವ ಮುಖಂಡರಲ್ಲಿ ಕುಮಾರಸ್ವಾಮಿ ಮೊದಲಿಗರು. ಇದು ರಾಜ್ಯದ ದುರಂತ. ಕಳೆದ ಹತ್ತು ವರ್ಷಗಳಿಂದ ಕುಮಾರಸ್ವಾಮಿ ಅವರು ಕೇವಲ ಆರೋಪ ಮಾಡುತ್ತಿದ್ದಾರೆ ಹೊರತು ಒಂದು ಆರೋಪವನ್ನು ಸಾಬೀತು ಮಾಡಿಲ್ಲ” ಎಂದರು.
“ವರ್ಗಾವಣೆ ಕುರಿತು ಒಂದು ಪೆನ್ ಡ್ರೈವ್ ತೋರಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ಹುದ್ದೆಗಳಿಗೆ ಹತ್ತು ಕೋಟಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ. ಚೆಸ್ಕಾಂ ಹಾಗೂ ಮೆಸ್ಕಾಂ ನಾಲ್ಕೈದು ಜಿಲ್ಲೆಗಳನ್ನು ಒಳಗೊಂಡಂತಹ ಕಂಪನಿಯಾಗಿದೆ. ಇದರಲ್ಲಿ 10 ಕೋಟಿ ಕೊಟ್ಟು ಹುದ್ದೆ ತಗೊಳ್ಳುವ ಪರಿಸ್ಥಿತಿ ಇದೆಯಾ? ಅದು ಯಾವ ಹುದ್ದೆ? ಯಾರಿಗೆ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಆ ಬಗ್ಗೆ ದಾಖಲೆ ನೀಡಲಿ” ಎಂದು ಆಗ್ರಹಿಸಿದರು.
“ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಆಗುವಂತಹ ಹುದ್ದೆ ಎಂದು ಹೇಳುತ್ತಾರೆ. ಅಂತಹ ಹುದ್ದೆ ಯಾವುದಾದರೂ ಇದೆಯಾ? ಇಡೀ ಮೆಸ್ಕಾಂ ಸಂಸ್ಥೆಯ ಒಂದು ದಿನಕ್ಕೆ 50 ಲಕ್ಷ ವಹಿವಾಟು ಆಗುವುದಿಲ್ಲ” ಎಂದು ಹೇಳಿದರು.
ನಮ್ಮ ಕಡೆಯೂ ಇದೆ ಪೆನ್ ಡ್ರೈವ್!
“ನನ್ನ ಬಳಿ ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕರ್ಮಕಾಂಡಗಳ ಕುರಿತು ಒಂದು ಪೆನ್ ಡ್ರೈವಿದೆ. ಕುಮಾರಸ್ವಾಮಿಯವರು ತಮ್ಮ ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಿದ ಒಂದು ತಾಸಿನಲ್ಲಿ ನಾನು ಕೂಡ ಈ ಪೆನ್ ಡ್ರೈವ್ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ. ಇದು ಕುಮಾರಸ್ವಾಮಿ ಅವರಿಗೆ ನನ್ನ ಸವಾಲು” ಎಂದರು.
“ಕುಮಾರಸ್ವಾಮಿ ಗುರಿ ಬೇರೆ ಇತ್ತು. ಅವರು ಬಹಳ ಕನಸು ಕಂಡಿದ್ದರು. 35 ರಿಂದ 40 ಸೀಟು ಗೆದ್ದು ಮೂರನೇ ಬಾರಿ ಮುಖ್ಯಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಾಜ್ಯದ ಯಾವುದೇ ಭಾಗದ ಜನರು ಅವರಿಗೆ ಕಿಮ್ಮತ್ತು ನೀಡಲಿಲ್ಲ. ಒಕ್ಕಲಿಗರ ಪಕ್ಷ ಎಂದು ಕರೆಸಿಕೊಂಡು ಮಂಡ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರ ಮಾತ್ರ ಗೆದ್ದಿದ್ದಾರೆ. ಮೈಸೂರಿನಲ್ಲಿ ಜಿ ಟಿ ದೇವೇಗೌಡರು ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಮೈಸೂರಿನಲ್ಲಿ ಅವರ ಸಾಧನೆ ಶೂನ್ಯವಾಗುತ್ತಿತ್ತು” ಎಂದು ಲೇವಡಿ ಮಾಡಿದರು.
ಡಿಕೆಶಿ ವರ್ಚಸ್ಸು ಹೆಚ್ಚಳಕ್ಕೆ ಸಂಕಟ
“ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಅವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಕುಮಾರಸ್ವಾಮಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ವಿರುದ್ಧ ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳ ಬಗ್ಗೆ ನಿಮ್ಮ ಬಳಿ ಏನಾದರೂ ದಾಖಲೆ ಇದೆಯಾ? ದಾಖಲೆ ಇದ್ದರೆ ಕೊಡಿ” ಎಂದು ಒತ್ತಾಯಿಸಿದರು.
“ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅಡಿಶನ್ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು, ಗ್ಯಾರಂಟಿ ಯೋಜನೆಗಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಸ್ಥಾನದ ರೇಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ನಾಯಕರಿಗೆ ಇದೆ” ಎಂದು ಪ್ರಶ್ನಿಸಿದರು.
“ಗ್ಯಾರಂಟಿ ಯೋಜನೆ ನೀಡುವುದು ನಮ್ಮ ಬದ್ಧತೆ. ಅಲ್ಲಿ ಮಧ್ಯಪ್ರದೇಶದಲ್ಲಿ ಮೋದಿಯವರು ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ನೀವು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಂದು ಹೋರಾಟ ಮಾಡುತ್ತಿದ್ದೀರಿ. ಈ ಬಗ್ಗೆ ಬಿಜೆಪಿ ಪಕ್ಷದ ಸ್ಪಷ್ಟ ನಿಲುವೇನು? ಎಂಬುದನ್ನು ಹೇಳಲಿ” ಎಂದಿದ್ದಾರೆ.