ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಾಬೀತು ಮಾಡಿದರೆ, ದೇಶಬಿಟ್ಟು ಹೋಗುತ್ತೇನೆ. ಯತ್ನಾಳ್ ಆರೋಪ ಸಾಬೀತು ಮಾಡದಿದ್ದರೆ, ಅವರು ದೇಶ ಬಿಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಲಿ ಎಂದು ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್ ಹಾಶ್ಮಿ ಸವಾಲು ಹಾಕಿದ್ದಾರೆ.
ಹಾಶ್ಮಿ ಅವರ 10 ವರ್ಷಗಳ ಹಿಂದಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯತ್ನಾಳ್, ‘ಹಾಶ್ಮಿ ಅವರು ಐಸಿಸ್ ಭಯೋತ್ಪಾದಕರ ಜೊತೆ ಸ್ನೇಹ ಹೊಂದಿದ್ದಾರೆ. ಅವರಿಗೆ ಭಯೋತ್ಪಾದಕರ ಮೇಲೆ ಸಹಾನುಭೂತಿ ಇದೆ. ಅಂತಹ ವ್ಯಕ್ತಿಯ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಆರೋಪಿಸಿದ್ದರು. ಆ ಆರೋಪದ ಬಗ್ಗೆ ಈದಿನ.ಕಾಮ್ ಫ್ಯಾಕ್ಟ್ ಚೆಕ್ ಕೂಡ ನಡೆಸಿದ್ದು, ಯತ್ನಾಳ್ ಆರೋಪ ಸುಳ್ಳು ಎಂಬುದನ್ನು ಪತ್ತೆ ಮಾಡಿದೆ. ಯತ್ನಾಳ್ ಹಂಚಿಕೊಂಡಿರುವ ಫೋಟೋದಲ್ಲಿ ಹಾಶ್ಮಿ ಅವರೊಂದಿಗೆ ಇರುವುದು ಯಾವ ಭಯೋತ್ಪಾದಕರೂ ಅಲ್ಲ, ಬದಲಿಗೆ, ಬಾಗ್ದಾದ್ನ ಪ್ರಿನ್ಸ್ ಶೇಖ್ ಖಾಲಿದ್ ಜಿಲಾನಿ ಮತ್ತು ಇರಾಕ್ ಸರ್ಕಾರದ ಭದ್ರತಾ ಅಧಿಕಾರಿ ಸಜ್ಜಾದೇ ನಶೀನ್ ಹಜ್ರತ್ ಗೌಸ್ ಆಜಂ ಅವರು ಎಂಬುದು ಸಾಬೀತಾಗಿದೆ.
ಇದೀಗ, ಯತ್ನಾಳ್ ಅವರ ಆರೋಪಗಳನ್ನು ಅಲ್ಲಗಳೆದು ಪ್ರಕಟಣೆ ನೀಡಿರುವ ಹಾಶ್ಮಿ ಅವರು ಯತ್ನಾಳ್ಗೆ ಸವಾಲು ಹಾಕಿದ್ದಾರೆ. ತಾವು ಮಾಡಿರುವ ಆರೋಪಗಳನ್ನು ಸಾಬೀತು ಮಾಡುವಂತೆ ಆಗ್ರಹಿಸಿದ್ದಾರೆ.
ಈದಿನ.ಕಾಮ್ ಫ್ಯಾಕ್ಟ್ಚೆಕ್ ಇಲ್ಲಿ ಓದಿ: ಯತ್ನಾಳ್ ಹೇಳಿದ ಭಾರೀ ಸುಳ್ಳು: ಸಿಎಂ ವಿರುದ್ಧ ಆರೋಪ ಸುಳ್ಳೆಂಬುದಕ್ಕೆ ಇಲ್ಲಿದೆ ಸಾಕ್ಷಿ
ಹಾಶ್ಮಿ ಅವರು ನೀಡಿರುವ ಪ್ರಕಟಣೆ ಹೀಗಿದೆ:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ಮೇಲೆ ಮಾಡಿರುವ ಆರೋಪಗಳಲ್ಲಿ ಸತ್ಯಾಂಶಗಳಿಲ್ಲ. ಡಿಸೆಂಬರ್ 4 ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು ರಾಜಕೀಯ ಧುರೀಣರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್ಕೆ ಪಾಟೀಲ್ ಹಾಗೂ ಇತರೆ ಮಂತ್ರಿಗಳು ಮತ್ತು ಶಾಸಕರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ಯಾವುದೇ ಕೋಮಿನವರಿಗೆ ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲ. ರಾಜಕಾರಣದಲ್ಲಿ ಎಲ್ಲ ಧರ್ಮ ಮತ್ತು ಜಾತಿಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಜನಪ್ರಿಯತೆಯನ್ನು ನೋಡಲಾರದೆ ಹತಾಶರಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಯತ್ನಾಳ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇರುವದಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದರ ಉದ್ದೇಶ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸುವುದಕ್ಕೆ ಮಾತ್ರ. ನನಗೆ ಐಸಿಸ್ ಉಗ್ರರ ಜೊತೆ ನಂಟಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ಯತ್ನಾಳ ದಾಖಲೆ ಸಮೇತ ಸಾಬೀತು ಮಾಡಲಿ. ವಿಜಯಪುರ ನಗರ ಶಾಸಕರು ಒಂದು ವಾರದೊಳಗೆ ಐಸಿಸ್ ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು.
ನಾನಷ್ಟೇ ಅಲ್ಲಾ ನನ್ನ ಭಕ್ತರು, ಶಿಷ್ಯರಿಗೂ ಐಸಿಸ್ ಜೊತೆ ನಂಟಿದೆಯೆಂದು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದೇನೆ. ನಾನು ಐಸಿಸ್ ಜೊತೆ ನಂಟಿದೆಯಂದು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ಬಸನಗೌಡ ಯತ್ನಾಳ್ ಪಾಟೀಲ್ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ಬಿಂಬಿಸುವ ಫೋಟೋಗಳು ನನ್ನದೆ ಆದಂತಹ ಆಫಿಶಿಯಲ್ ಫೇಸ್ಬುಕ್ ಅಕೌಂಟನಲ್ಲಿರುವ ಫೋಟೋಗಳು. ಫೋಟೋಗಳು 10-12 ವರ್ಷ ಹಿಂದಿನವು. ಇರಾಕ್ ದೇಶದ ಅಂತಾರಾಷ್ಟ್ರೀಯ ಪ್ರಸಿದ್ಧ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋದಾಗಿನ ಫೋಟೋಗಳಾಗಿವೆ.
ಅಲ್ಲಿನ ದರ್ಗಾದ ಪೀಠಾಧಿಪತಿ ಖಾಲೀದ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳು. ಮತ್ತೊಂದು ಫೋಟೋದಲ್ಲಿ ಖಾಲೀದ ಜಿಲಾನಿಯವರ ಅಂಗರಕ್ಷಕ ನನ್ನನ್ನು ಅವರ ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೋಗಳಾಗಿವೆ ಎಂದು ಹಾಶ್ಮಿ ಅವರು ಸ್ಪಷ್ಟನೆ ನೀಡಿದ್ದಾರೆ.