ಲೋಕಸಭಾ ಚುನಾವಣೆ | ರಾಜ್ಯದಲ್ಲಿ ಒಡೆದ ಮನೆಯಾದ ಬಿಜೆಪಿ; ಕಾಂಗ್ರೆಸ್‌ಗೆ ಅಚ್ಚರಿಯ ಲಾಭ?

Date:

Advertisements

ಕಳೆದ ವರ್ಷ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೇರಿತು. ಸೋಲುಂಡ ಬಿಜೆಪಿ ವಿಪಕ್ಷ ನಾಯಕನನ್ನೂ, ರಾಜ್ಯ ಬಿಜೆಪಿ ಅಧ್ಯಕ್ಷನನ್ನೂ ಆಯ್ಕೆ ಮಾಡಲು ಬರೋಬ್ಬರಿ ಆರು ತಿಂಗಳು ತೆಗೆದುಕೊಂಡಿತು. ಅಂತಿಮವಾಗಿ ಮೂಲೆ ಗುಂಪು ಮಾಡಬೇಕೆಂದುಕೊಂಡಿದ್ದ ಬಿ.ಎಸ್‌ ಯಡಿಯೂರಪ್ಪ ಕೈಗೇ ರಾಜ್ಯ ಬಿಜೆಪಿಯ ನಿಯಂತ್ರಣ ಸಿಕ್ಕಿತು. ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾದರು.

ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಸಂಘಪರಿವಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಬಿ.ಎಲ್ ಸಂತೋಷ್‌ ತಂತ್ರ ಫಲಿಸಲಿಲ್ಲ. ಬದಲಾಗಿ, ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ. ಯಡಿಯೂರಪ್ಪ ಮತ್ತು ಪುತ್ರನಿಗೆ ಅಧಿಕಾರ ನೀಡಿರುವ ಬಿಜೆಪಿ ಹೈಕಮಾಂಡ್‌, ತಮ್ಮ ಭದ್ರಕೋಟೆಯಾಗಿರುವ ಲಿಂಗಾಯತ ಸಮುದಾಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಪ್ರಯತ್ನವಾಗಿ ಈ ನಿರ್ಧಾರ ಮಾಡಿದೆ ಎಂದೂ ಹೇಳಲಾಗುತ್ತಿದೆ.

ಅದೇನೇ ಇರಲಿ, ಬಿಜೆಪಿ ಈಗ ರಾಜ್ಯದ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದೆ. ಅಹಿಂದ ಸಮುದಾಯಗಳಲ್ಲಿ ಹಿಡಿತ ಹೊಂದಿರುವ ಕಾಂಗ್ರೆಸ್‌ಅನ್ನು ಮಣಿಸಲು ಬಿಜೆಪಿ-ಜೆಡಿಎಸ್‌ ಜೊತೆಗೂಡಿವೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಆಂತರಿಕ ಬಂಡಾಯಗಳು ಎಲ್ಲೆಡೆ ಭುಗಿಲೆದ್ದಿವೆ. ಆ ಬಂಡಾಯಗಳನ್ನು ತಣಿಸುವುದು ಕೇಂದ್ರ ನಾಯಕತ್ವಕ್ಕೆ ಸಾವಾಲಾಗಿದೆ. ಸದ್ಯ, ಈ ಹೊಣೆಯನ್ನೂ ಹೈಕಮಾಂಡ್‌ ಯಡಿಯೂರಪ್ಪರ ತಲೆಗೆ ಕಟ್ಟಿದೆ.

Advertisements

ಇದೇ ಸಮಯದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ತಮ್ಮ ‘ಗ್ಯಾರಂಟಿ’ಗಳ ವ್ಯವಸ್ಥಿತ ಅನುಷ್ಠಾನದ ಆಧಾರದ ಮೇಲೆ ಜನರನ್ನು ಸೆಳೆಯುತ್ತಿದೆ. ಭೀಕರ ಬರಗಾಲದ ಸಮಯದಲ್ಲಿಯೂ ಕೇಂದ್ರ ಸರ್ಕಾರವು ತಾರತಮ್ಯ ಮಾಡುತ್ತಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಭಿಯಾನವನ್ನೂ ನಡೆಸುತ್ತಿದೆ. ರಾಜ್ಯದಲ್ಲಿ ಚುನಾವಣಾ ಕಣವನ್ನು ಗಟ್ಟಿ ಮಾಡಿಕೊಳ್ಳುತ್ತಿದೆ.

ಅಭ್ಯರ್ಥಿಗಳ ಘೋಷಣೆಗೂ ಮುನ್ನ ಈದಿನ.ಕಾಮ್  ಸರ್ವೇ ನಡೆಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಮತ ಹಂಚಿಕೆಯು 10% ಕುಸಿತ (42.35%) ಕಾಣಬಹುದು. ಕಾಂಗ್ರೆಸ್‌ 10% ಹೆಚ್ಚು ಮತಗಳನ್ನು (43.77%) ಪಡೆಯಬಹುದು ಎಂಬುದನ್ನು ಸಮೀಕ್ಷೆ ತೋರಿಸಿದೆ.

ಈ ಮತಗಳೊಂದಿಗೆ ಕಾಂಗ್ರೆಸ್‌ 17 ಮತ್ತು ಬಿಜೆಪಿ-ಎಡಿಎಸ್‌ 11 ಸ್ಥಾನಗಳನ್ನು ಪಡೆಯಬಹುದು. ಆದರೂ, ಕಾಂಗ್ರೆಸ್‌ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ 6 ಮತ್ತು ಬಿಜೆಪಿ ಗೆಲ್ಲಬಹುದಾದ 1 ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆದು, ಫಲಿತಾಂಶ ಅದಲು-ಬದಲೂ ಆಗಬಹುದು ಎಂಬುದು ಸದ್ಯಕ್ಕೆ ಕಂಡುಬಂದಿದೆ.

ಆದರೆ, ಅಭ್ಯರ್ಥಿಗಳ ಘೋಷಣೆಯ ನಂತರದಲ್ಲಿ ಬಿಜೆಪಿಯಲ್ಲಿ ಎದ್ದಿರುವ ಬಂಡಾಯವು ಕಾಂಗ್ರೆಸ್‌ಗೆ ಮತ್ತಷ್ಟು ಲಾಭ ನೀಡಬಹುದು ಎಂಬ ಅಭಿಪ್ರಾಯಗಳು ಈಗ ವ್ಯಕ್ತವಾಗುತ್ತಿವೆ.

‘ಅಸ್ವಾಭಾವಿಕ ಮೈತ್ರಿ’ ಮತ್ತು ಒಡೆದ ಮನೆಯಾದ ಬಿಜೆಪಿ

‘ಗ್ಯಾರಂಟಿ’ ಯೋಜನೆಗಳ ಆಧಾರದ ಮೇಲೆ ಜನರನ್ನು ಒಗ್ಗೂಡಿಸುತ್ತಿರುವ ಕಾಂಗ್ರೆಸ್‌, ರಾಜ್ಯಕ್ಕೆ ತೆರಿಗೆ ಹಂಚಿಕೆ ಮತ್ತು ಬರ ಪರಿಹಾರದಲ್ಲಿ ಕೇಂದ್ರದ ಮೋಸ ಮಾಡಿದೆ ಎಂಬುದನ್ನೂ ಒತ್ತಿ ಹೇಳುತ್ತಿದೆ. ಕೇಂದ್ರದ ಅನ್ಯಾಯದ ವಿರುದ್ಧದ ಆಂದೋಲನಕ್ಕೆ ಬಿಜೆಪಿಗರನ್ನೂ ಆಹ್ವಾನಿಸುತ್ತಿರುವ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಇಂತಹ ಸಮಯದಲ್ಲಿ ಬಿಜೆಪಿ-ಜೆಡಿಎಸ್‌ ಅಸಹಜ ಮೈತ್ರಿ ಮಾಡಿಕೊಂಡಿವೆ. ಒಕ್ಕಲಿಗರು ಮತ್ತು ಮುಸ್ಲಿಮರ ಬೆಂಬಲ ಪಡೆದಿದ್ದ ಜೆಡಿಎಸ್‌, ಈಗ ಅಲ್ಪಸಂಖ್ಯಾತರ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಬಿಜೆಪಿಯೊಳಗೆ ಬಂಡಾಯದ ಕಾವು ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಸಾರ್ವಜನಿಕವಾಗಿ ಘರ್ಷಣೆ ನಡೆಸುತ್ತಿರುವುದು ಕಂಡುಬಂದಿದೆ. ಇದಕ್ಕೆ, ತುಮಕೂರು ಇತ್ತೀಚಿನ ನಿದರ್ಶನವಾಗಿದೆ.

ಅಲ್ಲದೆ, ಮೈತ್ರಿಯಲ್ಲಿ ಜೆಡಿಎಸ್‌ ಕನಿಷ್ಠ ಪಾಲು ಪಡೆದಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಪಕ್ಷದ ಕೆಲ ಮುಖಂಡರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ.

ಇನ್ನು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಒಬಿಸಿ ನಾಯಕ ಕೆ.ಎಸ್‌ ಈಶ್ವರಪ್ಪ ತಮ್ಮ ಮಗನಿಗೆ ಬಿಜೆಪಿ ಟಿಕೆಟ್‌ ನಿರಾಕರಣೆಗೆ ಯಡಿಯೂರಪ್ಪ ಕಾರಣವೆಂದು ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಈ ಹಿಂದೆ, ವಿಧಾನಸಭಾ ಚುನಾವಣೆ ವೇಳೆಯು ತಮಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಕಾರಣವೆಂದು ಅವರು ಆಕ್ರೋಶಗೊಂಡಿದ್ದರು. ಆದರೆ, ಅವರನ್ನು ಸಮಾಧಾನಿಸುವಲ್ಲಿ ಹೈಕಮಾಂಡ್‌ ಯಶಸ್ವಿಯಾಗಿತ್ತು. ಆದರೆ, ಈಗ ಅವರನ್ನು ಸಮಾಧಾನಿಸುವ ಯಾವುದೇ ಪ್ರಯತ್ನಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿಲ್ಲ. ಇದರ ಹಿಂದೆಯೂ ಬಿಜೆಪಿ ತಂತ್ರವಿರಬಹುದು ಎಂಬ ಅನುಮಾನಗಳಿವೆ.

ಇನ್ನು, ತುಮಕೂರಿನಲ್ಲಿ ತಮಗೆ ಟಿಕೆಟ್‌ ಬೇಕೆಂದು ಬೇಡಿಕೆ ಇಟ್ಟಿದ್ದ ಮಾಜಿ ಸಚಿವ ಮಾಧುಸ್ವಾಮಿ ಕೂಡ ಬಂಡಾಯ ಎದ್ದಿದ್ದಾರೆ. ತಾವು ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.

ದಾವಣೆಗೆರೆಯಲ್ಲಿ ರೇಣುಕಾಚಾರ್ಯ ಕೂಡ ಬಂಡಾಯ ಎದ್ದಿದ್ದರು. ಈಗ ಬಿಜೆಪಿ ನಾಯಕರು ಅವರನ್ನು ಸಮಾಧಾನಿಸಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಚುನಾವಣಾ ಕಣದಲ್ಲಿ ಅವರು ನಡೆ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಲ್ಲದೆ, ಮೂವರು – ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಮತ್ತು ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ – ಬದಲಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಮೂವರೂ ವಿಭಜನೆ ಮತ್ತು ಪ್ರಚೋದನಾಕಾರಿ ಹೇಳಿಕೆಗಳಲ್ಲಿ ಹೆಸರುವಾಸಿಯಾಗಿದ್ದವರು, ಹೆಗಡೆ, ಇತ್ತೀಚೆಗೆ ‘ಸಂವಿಧಾನ’ ಬದಲಿಸುವ ಹೇಳಿಕೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಮನೆ ಬಾಗಿಲಿಗೆ ಬಂದರೂ, ಅನಂತ ಹೆಗಡೆ ಬಾಗಿಲು ತೆರೆಯದೆ ವಾಪಸ್‌ ಕಳಿಸಿದ್ದಾರೆ ಎಂದೂ ತಿಳಿದುಬಂದಿದೆ.

ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ರಾಮೇಶ್ವರಂ ಕೆಫೆ ಸ್ಫೋಟದ ನಂತರ ತಮಿಳು ವಲಸಿಗರ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಾರೆ. ಅಲ್ಲದೆ, ಕರಂದ್ಲಾಜೆ ಬೆಂಗಳೂರಿಗೆ ಬರುವುದು ನಗರದ ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿ, ಅವರನ್ನು ಹಿಮ್ಮೆಟ್ಟು ಕೆಲಸವೂ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ.

ಈ ವರದಿ ಓದಿದ್ದೀರಾ?: ಸಿಎಂ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿ, ಆರ್.‌ಕನ್ನಡ ಸಂಪಾದಕರ ವಿರುದ್ಧ ಎಫ್‌ಐಆರ್

ಇನ್ನು, ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೇ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಕೆ.ಸಿ ನಾರಾಯಣಗೌಡ ಹಾಗೂ ಹಲವರಿಗೆ ನುಂಗಲಾದರ ತುತ್ತಾಗಿ ಪರಿಣಮಿಸಿದೆ. ಈ ನಡುವೆ, ಕುಮಾರಸ್ವಾಮಿ ಅವರು ನಾರಾಯಣಗೌಡರನ್ನು ಭೇಟಿಯಾಗಿ, ಬೆಂಬಲ ಕೋರಿದ್ದಾರೆ. ಅದರೆ, ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತೊಂದೆಡೆ, ವಿವಾದಿತ ಬಳ್ಳಾರಿ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರಿಂದ ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ಇದೀಗ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರ ಸೇರ್ಪಡೆಯಿಂದಾಗಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿಗೆ ಲಾಭವಾಗಬಹುದು. ಅದರೆ, ಭ್ರಷ್ಟಾಚಾರದ ವಿರುದ್ಧದ ಬಿಜೆಪಿ ಮಾತುಗಳನ್ನು ಅವರ ಸೇರ್ಪಡೆ ದುರ್ಬಲಗೊಳಿಸುವಲ್ಲಿ ಸಂದೇಹವಿಲ್ಲ.

ಈ ಎಲ್ಲ ಕಾರಣಗಳಿಂದಾಗಿ, ಕರ್ನಾಟಕದಲ್ಲಿ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ಗೆ ಅಚ್ಚರಿಯ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ, ಅಂತಿಮ ಘಟ್ಟದಲ್ಲಿ ಏನಾಗಬಹುದು ಎಂಬುದನ್ನು ಕಾದುನೋಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X