“ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಮಹಾಪ್ರಭು ಹೇಳುತ್ತಾರೆ”
“ದೇಶವನ್ನು ಆಳುತ್ತಿರುವ ಮಹಾಪ್ರಭುಗಳು ಬಟ್ಟೆಯೊಳಗೆಯೇ ಬೆವರುತ್ತಿದ್ದಾರೆ. ಹೀಗಾಗಿ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲು ಶುರು ಮಾಡಿದ್ದಾರೆ” ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಧಾನಿ ಮೋದಿಯವರು ನೀಡಿರುವ ಕೋಮುದ್ವೇಷದ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದರು.
“ಮಹಾಪ್ರಭುಗಳು ಬಟ್ಟೆಯೊಳಗೆ ಬೆವರುತ್ತಿದ್ದಾರೆ. ಕೀಳು ಮಟ್ಟಕ್ಕೆ ಇಳಿದು ಪ್ರಧಾನಿ ಮಾತನಾಡುತ್ತಿದ್ದಾರೆ. ಮಹಾಪ್ರಭುವಿಗೆ ಸೋಲು ಕಾಣುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
“ತಮ್ಮ ಬೇಳೆ ಕಾಳು ಬೇಯುತ್ತಿಲ್ಲ ಎಂಬುದು ಮೊದಲ ಸುತ್ತಿನ ಮತದಾನೋತ್ತರ ಸಮೀಕ್ಷೆಯಲ್ಲಿ ಮಹಾಪ್ರಭುಗಳಿಗೆ ಗೊತ್ತಾಗಿದೆ. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಕಾಗಕ್ಕ ಗುಬ್ಬಕ್ಕನ ಕಥೆ ಹೇಳುತ್ತಿದ್ದಾರೆ. ದೆವ್ವ ಬರುತ್ತೆ, ದೆವ್ವ ಬರುತ್ತೆ ಅಂತ ಹೆದರಿಸುತ್ತಿದ್ದಾರೆ. ಕಾಂಗ್ರೆಸ್ನವರು ಮಂಗಳಸೂತ್ರವನ್ನೂ ಕಿತ್ತುಕೊಂಡುಬಿಡುತ್ತಾರೆ, ನಿಮ್ಮ ಆಸ್ತಿಯನ್ನೂ ಕಿತ್ತುಕೊಳ್ಳುತ್ತಾರೆ, ಮುಸ್ಲಿಮರಿಗೆ ಕೊಡುತ್ತಾರೆ ಎಂದು ಮೋದಿಯವರು ಹೇಳಿದ್ದಾರೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೂ ಚುನಾವಣಾ ಆಯೋಗ ಗಮನಿಸುತ್ತಿಲ್ಲ. ಅದಕ್ಕೆ ಬಾಯಿಲ್ಲವೇ?” ಎಂದು ಪ್ರಶ್ನಿಸಿದರು.
“400 ಸೀಟು ಗೆಲ್ಲುತ್ತೇವೆ ಎಂದು ಹೇಳಿದಾಗಲೇ ನಮಗೆ ಅರ್ಥವಾಯಿತು. ಒಂದು ನರೇಟಿವ್ ಸೃಷ್ಟಿ ಮಾಡಲು ನೋಡುತ್ತಿದ್ದಾರೆ. ಕೀಳರಿಮೆ ಉಳ್ಳವರು ಮಾತ್ರ ತನ್ನನ್ನು ತಾನೇ ಸೂಪೀರೀಯರ್ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಾರೆ” ಎಂದು ಕುಟುಕಿದರು.
“ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಚಿಕ್ಕ ತಪ್ಪಿನ ಕಾರಣಕ್ಕೆ ರದ್ದುಗೊಳಿಸಲಾಗಿದೆ. ಉಳಿದ ಸ್ಪರ್ಧಿಗಳು ರಾತ್ರೋರಾತ್ರಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಚುನಾವಣೆ ನಡೆಸದೆಯೇ ಬಿಜೆಪಿಯ ಅಭ್ಯರ್ಥಿಯನ್ನು ವಿಜಯಶಾಲಿ ಎಂದು ಘೋಷಿಸಲಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ- ಎತ್ತ ಕಡೆ ಹೋಗುತ್ತಿದ್ದೇವೆ ನಾವು” ಎಂದು ಕೇಳಿದರು.
ಮಹಾಪ್ರಭುವಿಗೆ ರಾಜ್ಯದ ಪ್ರತಿನಿಧಿಗಳು ಬೇಕಿಲ್ಲ, ಹೊಗಳು ಭಟ ವಿದೂಷಕರು ಬೇಕಾಗಿದ್ದಾರೆ. ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎನ್ನುವವರು, 2014ರ ನಂತರ ದೇಶಕ್ಕೆ ಸ್ವಾತಂತ್ರ್ಯ ಬಂತು ಎನ್ನುವವರು ಮಹಾಪ್ರಭುಗಳ ಅಭ್ಯರ್ಥಿಗಳು. ನಾಡಿನಲ್ಲಿ ಕೋತಿಗಳ ಕಾಟ ಜಾಸ್ತಿಯಾಗಿದೆ, ಹಾಗಾಗಿ ಕಾಡುಗಳಲ್ಲಿ ಹಣ್ಣು ಬೆಳೆಸಬೇಕು ಎನ್ನುವ ಹೇಮಾಮಾಲಿನಿ ಮಹಾಪ್ರಭು ಆಯ್ಕೆ ಮಾಡಿರುವ ಅಭ್ಯರ್ಥಿ ಎಂದರು.
ಮೈಸೂರಿನ ಮಹಾರಾಜರನ್ನು ತಮ್ಮ ಆಸ್ಥಾನದ ವಿದೂಷಕರನ್ನಾಗಿ ಮಾಡಿಕೊಳ್ಳಲು ಮಹಾಪ್ರಭುಗಳು ಹೊರಟಿದ್ದಾರೆ. ಮೈಸೂರು ಮಹಾರಾಜರಿಗೆ ಕೇವಲ ಆರೇಳು ಕೋಟಿ ಆಸ್ತಿ ಇದೆಯಂತೆ. ಇವರು ಅಫಿಡವಿಟ್ನಲ್ಲಿ ಸುಳ್ಳು ಹೇಳಿದ್ದಾರೆ. ಮಹಾರಾಜರು ಅರಮನೆ ಹೊರಗೆ ಇದ್ದಾರಾ? ಆಟೋದಲ್ಲಿ ಓಡಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.
“ಮಹಾಪ್ರಭುವಿನ ಗ್ಯಾರಂಟಿಗೆ ವಾರಂಟಿ ಇದೆಯಾ? ನೂರು ಸ್ಮಾರ್ಟ್ ಸಿಟಿ ಕಟ್ಟುತ್ತೇವೆ ಎಂದು. ಹತ್ತು ಸ್ಮಾರ್ಟ್ ಸಿಟಿಗಳನ್ನಾದರೂ ತೋರಿಸಲಿ. ಪ್ರತಿ ಕ್ಷೇತ್ರದಲ್ಲಿ ಒಂದು ಮಾದರಿ ಗ್ರಾಮ ಮಾಡುತ್ತೇವೆ ಎಂದರು. ಒಂದೇ ಒಂದು ಮಾಡೆಲ್ ವಿಲೇಜ್ ತೋರಿಸಿ ಸ್ವಾಮಿ ಸಾಕು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು. ವಾಸ್ತವದಲ್ಲಿ ಹತ್ತು ಸಾವಿರ ಉದ್ಯೋಗಕ್ಕೆ ಐವತ್ತು ಲಕ್ಷ ಯುವಕರು ಅರ್ಜಿ ಹಾಕಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ಬರ ಪರಿಹಾರದ ಬಗ್ಗೆ ನಮ್ಮ ಸಂಸದರು ದನಿ ಎತ್ತಲಿಲ್ಲ. ಸಂಸದ ತೇಜಸ್ವಿ ಸೂರ್ಯ ಕೋವಿಡ್ ಕಾಲದಲ್ಲಿ ಮುಸ್ಲಿಮರ ಹೆಸರು ಹಿಡಿದುಕೊಂಡು ತಿರುಗುತ್ತಿದ್ದ ಮನುಷ್ಯ. ಈಗ ರಾಘವೇಂದ್ರ ಬ್ಯಾಂಕ್ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕರ್ನಾಟಕಕ್ಕೆ ಜೊಂಬು ಕೊಟ್ಟರೂ ಅದನ್ನು ದೇವೇಗೌಡರು ಅಕ್ಷಯ ಪಾತ್ರೆ ಎನ್ನುತ್ತಿದ್ದಾರೆ. ಎಲೆಕ್ಷನ್ನಲ್ಲಿ ಇವರಿಗೆ ಜೊಂಬು ಕೊಟ್ಟು ಕಳುಹಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ನವರ ಮ್ಯಾನಿಫೆಸ್ಟೋ ರಿಲೀಸ್ ಆಗಿದೆ. ನಿಮ್ಮ ಮ್ಯಾನಿಫೆಸ್ಟೋದಲ್ಲಿ ಏನು ಇರುತ್ತೆ ಹೇಳಪ್ಪ ಅಂತ ಮೋದಿಯವರನ್ನು ಕೇಳಿದರೆ, “ಕಾಂಗ್ರೆಸ್ನವರದ್ದು ಮುಸ್ಲಿಂ ಲೀಗ್ ಮ್ಯಾನಿಫೆಸ್ಟೋ” ಎನ್ನುತ್ತಾರೆ. ನಿಮ್ಮ ಪಕ್ಷದ ಮ್ಯಾನಿಫೆಸ್ಟೋ ಬಗ್ಗೆ ಮಾತನಾಡಪ್ಪ ಅಂದರೆ ಊಟದ ಮೆನು ತೋರಿಸುತ್ತಾರೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಮಹಾಪ್ರಭು ಮಾತನಾಡುತ್ತಾರೆ ಎಂದು ಕುಟುಕಿದರು.
ಹಿಂದೂ ಮುಸ್ಲಿಂ ಎಂಬುದೇ ಅವರ ಚುನಾವಣಾ ವಿಚಾರ. ಹತ್ತು ವರ್ಷ ತಮ್ಮ ಸಾಧನೆ ಏನೆಂದು ಹೇಳುತ್ತಿಲ್ಲ. ಸಬ್ ಸಾತ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸ್ಲಿಂ ವಿರುದ್ಧ ಮಾತನಾಡಿದ್ದಾರೆ. ಪ್ರಶ್ನೆ ಮಾಡುವವರನ್ನು ಅರ್ಬನ್ ನಕ್ಸಲ್ ಎನ್ನುತ್ತಾರೆ. ಒಬ್ಬ ಪ್ರಧಾನಿ ಬಳಸುವ ಭಾಷೆಯೇ ಇದು? ಬಲ ಪಂಥೀಯರೋ ಎಡ ಪಂಥೀಯರೋ ನಾವೆಲ್ಲ ಒಂದು ದೋಣಿಯಲ್ಲಿ ಹೋಗುತ್ತಿದ್ದೇವೆ. ದೋಣಿಗೆ ತೂತು ಬಿದ್ದಿದೆ. ದೋಣಿಯನ್ನು ರಕ್ಷಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದು ಎಚ್ಚರಿಸಿದರು.
ಜನಶಕ್ತಿ ಸಂಘಟನೆಯ ಗೌರಿಯವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
