ಮಹಾವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 2022ರಲ್ಲಿನ ಶಿವಸೇನೆ ವಿಭಜನೆಗೆ ಬಿಜೆಪಿಯ ಉನ್ನತ ನಾಯಕತ್ವ ಒಪ್ಪಿಗೆ ನೀಡಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಆರೋಪಿಸಿದ್ದಾರೆ.
ಹಾರಾಷ್ಟ್ರದ ಸತಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿರಾಜ್ ಚೌಹಾಣ್, “2022ರಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಗೂ ಶಿವಸೇನೆ ಅಧ್ಯಕ್ಷರಾಗಿದ್ದ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಶಿವಸೇನೆಯ ಒಂದು ಗುಂಪು ಬಂಡಾಯ ಎದ್ದಿತ್ತು. ಅದಕ್ಕೆ ಬಿಜೆಪಿ ಕುಮ್ಮಕ್ಕು ನೀಡಿತ್ತು. ಶಿವಸೇನೆ ವಿಭಜನೆಗೊಂಡ ನಂತರ, ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂದೆ ಬಿಜೆಪಿ ಜೊತೆಗೂಡಿ ಮುಖ್ಯಮಂತ್ರಿಯಾಗಿದರು” ಎಂದು ಹೇಳಿದ್ದಾರೆ.
“ಶಿವಸೇನೆಯನ್ನು ವಿಭಜಿಸುವ ಮೂಲಕ, ಬಿಜೆಪಿಯ ಉನ್ನತ ನಾಯಕತ್ವವು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿತ್ತು. ಈ ಸಂಪೂರ್ಣ ನಡೆಗೆ ಬಿಜೆಪಿ ಉನ್ನತ ನಾಯಕತ್ವದ ಅನುಮೋದನೆಯಿತ್ತು” ಎಂದು ಅವರು ಆರೋಪಿಸಿದ್ದಾರೆ.
“ಶಿವಸೇನೆಯನ್ನು ಒಡೆದು, ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸುವ ಯೋಜನೆಯನ್ನು ಕೇವಲ ಇಬ್ಬರು ಮೂವರಿಂದ ಮುಂಬೈನಲ್ಲಿ ಮಾಡಲಾಗಿಲ್ಲ. ಇದರ ಹಿಂದೆ ಇಡೀ ಬಿಜೆಪಿ ಯಂತ್ರವೇ ಇದ್ದುದರಿಂದ, ಅತ್ಯಂತ ನಾಜೂಕಾಗಿ ಈ ಯೋಜನೆಯನ್ನು ಮಾಡಲಾಗಿತ್ತು. ಸೇನಾ ಕಾರ್ಯಾಚರಣೆಯಂತೆ ಶಾಸಕರಿಗೆ ಭದ್ರತೆ ಹಾಗೂ ಚಾರ್ಟರ್ಡ್ ವಿಮಾನಗಳನ್ನು ಒದಗಿಸಲಾಗಿತ್ತು” ಎಂದು ಅವರು ಆಪಾದಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ‘ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂಬ ಭ್ರಷ್ಟಾಚಾರ ವಿರೋಧಿ ಘೋಷಣೆಯನ್ನು ಮಹಾರಾಷ್ಟ್ರದಲ್ಲಿ ಕೂಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.