ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದರ ತಡೆಗೋಡೆ ಕುಸಿದಿದೆ. ಆ ತಡೆಗೋಡೆ ಮತ್ತೊಂದು ಮನೆಯ ಮೇಲೆ ಬಿದ್ದು, ಒಂದೇ ಕುಟುಂಬದ ನಾಲ್ಕು ಜನ ಮೃತರಾಗಿದ್ದಾರೆ. ಈ ದುರಂತ ಸ್ಥಳಕ್ಕೆ ಬುಧವಾರ ಸಂಜೆ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, “ಇದೊಂದು ವಿಷಾದನೀಯ ದುರ್ಘಟನೆ ಹಾಗೂ ಎಲ್ಲರಿಗೂ ನೋವನ್ನು ನೀಡುವ ದುರಂತ. ಈ ದುರ್ಘಟನೆಯಲ್ಲಿ ಪ್ರಾಣಹಾನಿ ಉಂಟಾಗಿರುವುದು ಸರ್ಕಾರದ ಮನಸ್ಸನ್ನೂ ಕದಲುವಂತೆ ಮಾಡಿದೆ. ಒಂದೇ ಕುಟುಂಬದ ನಾಲ್ಕು ಜನರ ಪ್ರಾಣಹಾನಿಗೆ ಮುಖ್ಯಮಂತ್ರಿಗಳೂ ಸಹ ವಿಷಾದ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.
“ಮುಖ್ಯಮಂತ್ರಿಗಳು ಸ್ವತಃ ನನ್ನ ಜೊತೆ ಈ ದುರ್ಘಟನೆ ಬಗ್ಗೆ ಮಾತನಾಡಿ, ಸ್ಥಳಕ್ಕೆ ತೆರಳುವಂತೆ ಸೂಚಿಸಿದರು. ಅಲ್ಲದೆ, ತಮ್ಮವರನ್ನು ಕಳೆದುಕೊಂಡ ಪರಿವಾರಕ್ಕೆ ಸರ್ಕಾರದಿಂದ ಮಾಡಬಹುದಾದ ಸಹಾಯವನ್ನು ಮಾಡಿ ಎಂದು ತಿಳಿಸಿದರು. ಅಲ್ಲದೆ ಇಂತಹ ದುರ್ಘಟನೆಗಳನ್ನು ಆದಷ್ಟು ತಡೆಗಟ್ಟಲು ಸಿಎಂ ಸೂಚಿಸಿದ್ದಾರೆ” ಎಂದರು.
ದ. ಕ. ಜಿಲ್ಲೆಯ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದರ ತಡೆಗೋಡೆ ಕುಸಿದಿದೆ. ಆ ತಡೆಗೋಡೆ ಮತ್ತೊಂದು ಮನೆಯ ಮೇಲೆ ಬಿದ್ದು, ಒಂದೇ ಕುಟುಂಬದ ನಾಲ್ಕು ಜನ ಮೃತರಾಗಿದ್ದಾರೆ. ಈ ದುರಂತ ಸ್ಥಳಕ್ಕೆ ಕಂದಾಯ ಸಚಿವ @krishnabgowda ಭೇಟಿ ನೀಡಿ, ಪರಿಶೀಲಿಸಿದರು.@utkhader @DCDKOfficial pic.twitter.com/ZrTuLuWgHK
— Irshad Venur ಇರ್ಷಾದ್ ವೇಣೂರು (@muhammadirshad6) June 26, 2024
“ರಾತ್ರಿ ಮಲಗುವಾಗ ಗೋಡೆ ಕುಸಿಯುವ ಬಗ್ಗೆ ಪಾಪ ಅವರಿಗೂ ಗೊತ್ತಿರಲು ಸಾಧ್ಯವಿಲ್ಲ. ನಿದ್ದೆಯಲ್ಲೇ ಪ್ರಾಣಬಿಟ್ಟಿದ್ದಾರೆ. ಪ್ರಕೃತಿಯಿಂದ ಆಗುವ ವಿಕೋಪಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಹಾಗೂ ಈ ಇಳಿಜಾರು ಪ್ರದೇಶದಲ್ಲಿ ಬೆಟ್ಟ ಕಡಿದು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದು ಮೊದಲಿನಿಂದಲೂ ಆತಂಕದ ವಿಚಾರವೇ. ಇಂತಹ ಘಟನೆಗಳು ಆಗಾಗ್ಗೆ ಆಗ್ತಾನೆ ಇದೆ. ಆದರೂ ಜನ ಬೆಟ್ಟದ ಪ್ರದೇಶದಲ್ಲಿ ಬೆಟ್ಟಗಳನ್ನು ತೀಷ್ಣವಾಗಿ ಕಡಿದು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ” ಎಂದು ಸಚಿವರು ತಿಳಿಸಿದರು.
ಮನೆಗಳ ಸರ್ವೆ ಮಾಡಲು ಸೂಚನೆ
“ಜನಕ್ಕೆ ಜಾಗದ ಕೊರತೆ ಇರುವುದರಿಂದ ಇದು ಅನಿವಾರ್ಯ ಎಂಬಂತಾಗಿದೆ. ರಕ್ಷಣಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿ ಪಂಚಾಯಿತಿಯಲ್ಲೂ ನಾಳೆಯ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳಿಗೆ ಸಿಕ್ಕಿಕೊಳ್ಳಬಹುದಾದ ಮನೆಗಳನ್ನು ಸರ್ವೇ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಂತಹ ಮನೆಗಳಿಗೆ ಸರ್ಕಾರದಿಂದ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಲಾಗುವುದು” ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
“ದಕ್ಷಿಣ ಕನ್ನಡ ಜಿಲ್ಲೆ ಒಂದರಲ್ಲೇ ಸಾವಿರಾರು ಮನೆಗಳನ್ನು ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಕೆಲವರು ತಡೆಗೋಡೆಗಳನ್ನು ಕಟ್ಟಿಕೊಳ್ಳುವುದಕ್ಕೂ ಜಾಗಗಳನ್ನು ಬಿಟ್ಟಿಲ್ಲ. ಹೀಗಾಗಿ ಇದೊಂದು ಸಂಕೀರ್ಣ ಸಮಸ್ಯೆಯಾಗಿದ್ದು, ಆದರೂ, ತತಕ್ಷಣ ಸರ್ವೇ ಮಾಡಿಸಿ ಮಳೆಗಾಲದಲ್ಲಿ ಸಮಸ್ಯೆಗೆ ಸಿಕ್ಕಿಕೊಳ್ಳಬಹುದಾದ ಮನೆಗಳನ್ನು ಗುರುತಿಸಿ ಆ ಮನೆಯಲ್ಲಿ ವಾಸವಿರುವವರಿಗೆ ಆ ಮನೆಯಲ್ಲಿ ಇರದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದರು.
“ಇಂದೇ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ತತಕ್ಷಣ ಸರ್ವೇ ನಡೆಸಲು ಸೂಚಿಸುತ್ತೇನೆ. ಸರ್ವೇಯಲ್ಲಿ ಆಪತ್ತನ್ನು ಎದುರಿಸಬಹುದಾದ ಮನೆಗಳ ಪಟ್ಟಿ ಸಿದ್ದಪಡಿಸಿ, ಜನರಿಗೆ ಎಚ್ಚರಿಕೆ ನೀಡಬೇಕು, ಅಲ್ಲದೆ, ಮಳೆ ಸಂದರ್ಭದಲ್ಲಿ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದೂ ಸೂಚಿಸುತ್ತೇನೆ” ಎಂದು ಸಚಿವರು ತಿಳಿಸಿದರು.
“ಅವಘಡದಲ್ಲಿ ನಾಲ್ಕು ಜನ ಮೃತಪಟ್ಟಿದ್ದು, ಆ ಇಡೀ ಕುಟುಂಬದ ಪೈಕಿ ಓರ್ವ ಸಹೋದರಿ ಮಾತ್ರ ಬದುಕುಳಿದಿದ್ದಾರೆ. ಅವರಿಗೆ ಆಗಿರುವ ನಷ್ಟಕ್ಕೆ ಸರ್ಕಾರದ ಪರವಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಸ್ಪೀಕರ್ ಯುಟಿ ಖಾದರ್ ಅವರ ಮಾರ್ಗದರ್ಶನದಲ್ಲಿ ಅವರಿಗೆ ಶೀಘ್ರ ಪರಿಹಾರವನ್ನು ನೀಡಲಾಗುವುದು” ಎಂದು ಕೃಷ್ಣಬೈರೇಗೌಡ ತಿಳಿಸಿದರು.
ವಿಪತ್ತು ನಿರ್ವಹಣಾ ಘಟಕಕ್ಕೂ ಭೇಟಿ
ಉಳ್ಳಾಲ ಗ್ರಾಮದ ಅವಘಡ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಂಗಳೂರಿನ ವಿಪತ್ತು ನಿರ್ವಹಣಾ ಘಟಕಕ್ಕೂ ಭೇಟಿ ನೀಡಿ, ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ ನಡೆಸಿದರು. ಇದೇ ವೇಳೆ ಈ ವೇಳೆ ಜಿಲ್ಲೆಯ ಎಲ್ಲ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ಎಷ್ಟು ಮನೆಗಳಿವೆ? ಈ ಪೈಕಿ ಮಳೆಗಾಲದಲ್ಲಿ ಸಮಸ್ಯೆಗೆ ಸಿಲುಕಬಹುದಾದ ಮನೆಗಳು ಯಾವುವು? ಎಂದು ಸರ್ವೇ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಅಲ್ಲದೆ, ಮಳೆ ಸಂದರ್ಭದಲ್ಲಿ ಅಂತಹ ಮನೆಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.
