ಕ್ರಿಶ್ಚಿಯನ್ ಧರ್ಮವನ್ನು ಭಾರತದಿಂದ ನಾಶಪಡಿಸಲು ಸಾಧ್ಯವಿಲ್ಲ ಎಂದು ಕೇರಳ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ ಅಧ್ಯಕ್ಷ ಕಾರ್ಡಿನಲ್ ಮಾರ್ ಬಸೆಲಿಯೋಸ್ ಕ್ಲೀಮಿಸ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಯಿಂದಾಗಿ ನಡೆಯುತ್ತಿರುವ ಅಶಾಂತಿಗೆ ಸಂಬಂಧಿಸಿದಂತೆ ಕೇರಳ ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪ್ಝಾದಲ್ಲಿ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲ್ನಾಡನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ತಕ್ಷಣವೇ ಶಾಂತಿಯನ್ನು ಮರುಸ್ಥಾಪಿಸಲು ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯಿಸಿದ ಕ್ಲೀಮಿಸ್, ಈ ವಿಷಯದ ಬಗ್ಗೆ ಮೌನ ಮುರಿಯಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು. ಈ ದೇಶದ ಸಮಗ್ರತೆಯನ್ನು ಜಗತ್ತಿಗೆ ಸಾರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವಿದೆ ಎಂಬ ಸಂದೇಶವನ್ನು ಜಗತ್ತಿಗೆ ತಿಳಿಸಲು ಇದು ಅವರಿಗೆ ಉತ್ತಮ ಅವಕಾಶ. ನಮ್ಮ ಸಂವಿಧಾನದಲ್ಲಿ ಬರೆಯಲಾದ ಜಾತ್ಯಾತೀತ ಎಂಬ ಪದವು ಅಲಂಕಾರಿಕ ಪದವಲ್ಲ, ಅದು ಜಾರಿಗೊಳಿಸಿದ ತತ್ವಶಾಸ್ತ್ರವಾಗಿದೆ. ಯಾವುದೇ ಧರ್ಮವನ್ನು ಅನುಸರಿಸುವ ಮತ್ತು ಆಚರಿಸುವ ಹಕ್ಕನ್ನು ನಮ್ಮ ಶ್ರೇಷ್ಠ ಸಂವಿಧಾನದಿಂದ ಏಕೆ ಮರೆಮಾಚಿಸಲಾಗುತ್ತಿದೆ ಎಂದು ಪ್ರಶ್ನಿಸಿದ ಕ್ಲೀಮಿಸ್ ಕೇಂದ್ರವು ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶ್ವಾನಗಳೊಂದಿಗೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ
ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಗಲಭೆ ನಡೆದು 65 ದಿನಗಳಾಗಿವೆ. ಸರ್ಜಿಕಲ್ ಸ್ಟ್ರೈಕ್ ನಡೆಸುವ ಸರ್ಕಾರಕ್ಕೆ ಗಲಭೆಗಳನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕ್ಲೀಮಿಸ್ ಪ್ರಶ್ನಿಸಿದರು.
ಕೇರಳದ ಕ್ರಿಶ್ಚಿಯನ್ ಬಿಷಪ್ಗಳು ಮತ್ತು ವಿವಿಧ ಧರ್ಮಪ್ರಾಂತ್ಯಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿವೆ.
ಮೇ 3 ರಂದು ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನದ ಬೇಡಿಕೆಯನ್ನು ವಿರೋಧಿಸಿ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಉದ್ವಿಗ್ನತೆ ಉಲ್ಬಣಗೊಂಡಿತು.
ಇಲ್ಲಿಯವರೆಗೆ ನಡೆದಿರುವ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ನಿರಾಶ್ರಿತರಾಗಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅರೆಸೇನೆ ಪಡೆಯ ಬೃಹತ್ ಉಪಸ್ಥಿತಿಯ ಹೊರತಾಗಿಯೂ, ರಾಜಕೀಯ ನಾಯಕರ ಮನೆಗಳನ್ನು ಸುಟ್ಟುಹಾಕುವುದು, ವ್ಯಾಪಕ ಲೂಟಿ ಮತ್ತು ಮುಂತಾದ ಹಿಂಸಾಚಾರಗಳು ನಡೆಯುತ್ತಲೇ ಇವೆ.