ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, “ನನ್ನನ್ನು ಮುಗಿಸಲು ಏನೇನು ಕುತಂತ್ರ ಮಾಡಿದ್ದಾರೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಸುಮ್ಮನೆ ಇದ್ದರೆ ಲೇಸು, ಇಲ್ಲವಾದರೆ ನಮಗೂ ಆಟ ಆಡಲು ಬರುತ್ತದೆ” ಎಂದಿದ್ದಾರೆ.
“ಯಡಿಯರಪ್ಪ, ವಿಜಯೇಂದ್ರ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ಅಸಮಾಧಾನದ ಅಲೆ ಸದ್ಯದಲ್ಲೇ ಏಳಲಿದೆ. ಸೋತ ಎಂಪಿಗಳು ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ. ಅಲ್ಲಲ್ಲಿ ಆಟಂಬಾಂಬ್ ಗಳು ಬೀಳುತ್ತಿವೆ. ದಾವಣಗೆರೆಯಲ್ಲಿ ನಿನ್ನೆ ಬಿದ್ದಿದೆ” ಎಂದರು.
“ಮುಂದೆ ಕೊಪ್ಪಳದಲ್ಲಿ ಬೀಳುತ್ತದೆ. ನಂತರ ಬಳ್ಳಾರಿ, ಆಮೇಲೆ ರಾಯಚೂರು. ಎಲ್ಲೆಲ್ಲಿ ಸೋತಿದ್ದಾರಲ್ಲ, ಅದಕ್ಕೆ ಕಾರಣ ಯಾರು ಎನ್ನುವುದನ್ನು ವಿಜಯೇಂದ್ರ ಹೇಳಬೇಕು. ಯತ್ನಾಳ್ ಹಿರಿಯರು ಎನ್ನುವ ಡೈಲಾಗ್ ಎಲ್ಲ ಬಿಟ್ಟುಹಾಕಿ. ನನ್ನ ಜೊತೆ ಆಟವಾಡಲು ಬಂದರೆ ನಾನೂ ಆಟವಾಡುವೆ” ಎಂದು ಎಚ್ಚರಿಸಿದ್ದಾರೆ.
“ಬಿಜೆಪಿಯ ಶುದ್ಧೀಕರಣ ಆಗಬೇಕಿದೆ. ಈಶ್ವರಪ್ಪನವರಿಗೆ ಅನ್ಯಾಯ ಮಾಡಿದರು. ಅವರು ಏನು ತಪ್ಪು ಮಾಡಿದ್ದರು. ಆರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಪ್ರಧಾನ ಮಂತ್ರಿಯವರ ಒಂದೇ ಮಾತಿಗೆ ಬೆಲೆ ಕೊಟ್ಟು ವಿಧಾನಸಭಾ ಚುನಾವಣೆಗೆ ಅವರು ನಿಂತಿರಲಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದರು. ಆದರೆ ಈಶ್ವರಪ್ಪ ಹಾಗೂ ಒಳ್ಳೆಯವರನ್ನೆಲ್ಲಾ ಹೊರಗೆ ಹಾಕಿದ್ದಾರೆ. ಒಂದು ಕುಟುಂಬದ ಪಕ್ಷವಾಗಲು ನಾನಂತೂ ಬಿಡುವುದಿಲ್ಲ” ಎಂದು ಹೇಳಿದರು.
ಮುಡಾ ಹಗರಣಕ್ಕೆ ಸಂಬಂಧಿಸಿ ವಿಜಯೇಂದ್ರ ಅವರ ವರ್ತನೆಯ ವಿರುದ್ಧವೂ ಅವರು ಹರಿಹಾಯ್ದರು. ಸಿದ್ದರಾಮಯ್ಯ ಒಬ್ಬರನ್ನೇ ಟಾರ್ಗೆಟ್ ಮಾಡಬೇಡಿ. ಸಿದ್ದರಾಮಯ್ಯ ವಿರುದ್ಧ ಹೋರಾಟವಲ್ಲ. ಕಾಂಗ್ರೆಸ್ ವಿರುದ್ಧ ಹೋರಾಟ ಎಂದು ವಿಜಯೇಂದ್ರ ಅವರು ಹೇಳುತ್ತಾರೆ. ಹಾಗಿದ್ದರೆ ಸಿದ್ದರಾಮಯ್ಯನವರು ಬಿಜೆಪಿನಾ ಎಂದು ಪ್ರಶ್ನಿಸಿದರು.