ಕಳೆದ 11 ವರ್ಷಗಳ ಆಡಳಿತದಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 33 ತಪ್ಪುಗಳನ್ನು ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎನ್ಡಿಎ ಸರ್ಕಾರವನ್ನು ಟೀಕಿಸಿದ್ದಾರೆ.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, “ಚುನಾವಣಾ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಎಷ್ಟು ಭರವಸೆಗಳನ್ನು ನೀಡಿದ್ದಾರೆ? ಮತ್ತು ಅವುಗಳಲ್ಲಿ ಎಷ್ಟು ಭರವಸೆಗಳನ್ನು ಅವರು ನಿಜವಾಗಿಯೂ ಪೂರೈಸಿದ್ದಾರೆ? ಎಂಬುದನ್ನು ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಗಡಿ ಭದ್ರತಾ ಪಡೆ ರಕ್ಷಣೆ ನೀಡದೆ ಜನರ ಜೀವ ತೆಗೆದಿದ್ದು ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ಆರೋಪ
“11 ವರ್ಷಗಳು ಕಳೆದಿವೆ ಮತ್ತು 33 ತಪ್ಪುಗಳನ್ನು ಮಾಡಲಾಗಿದೆ. ನಿಮಗೆ ಅದು ತಿಳಿದಿದೆ. ನಾನು ಸಂಸತ್ತಿನಲ್ಲಿಯೂ ಈ ತಪ್ಪುಗಳ ಬಗ್ಗೆ ಹೇಳುತ್ತಿದ್ದೇನೆ. ಇಷ್ಟೊಂದು ಸುಳ್ಳು ಹೇಳುವ, ಇಷ್ಟೊಂದು ತಪ್ಪುಗಳನ್ನು ಮಾಡುವ, ಜನರನ್ನು ಬಲೆಗೆ ಬೀಳಿಸುವ, ಯುವಕರನ್ನು ವಂಚಿಸುವ, ಬಡವರನ್ನು ಬಲೆಗೆ ಬೀಳಿಸುವ ಮತ್ತು ಮತಗಳನ್ನು ಪಡೆಯುವ ಪ್ರಧಾನಿಯನ್ನು ನಾನು ಎಂದಿಗೂ ನೋಡಿಲ್ಲ. ನಾನು 55 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ ಮತ್ತು 65 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಈವರೆಗೂ ಈ ರೀತಿಯ ಪ್ರಧಾನಿಯನ್ನು ನೋಡಿಲ್ಲ” ಎಂದು ಖರ್ಗೆ ಹೇಳಿದರು.
“ಪ್ರಧಾನಿ ಎಲ್ಲಾ ವಿಚಾರದಲ್ಲಿಯೂ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ಹೇಳಿದ ಯಾವುದನ್ನೂ ಜಾರಿ ಮಾಡಲ್ಲ. ನಾವು ಅದರ ಬಗ್ಗೆ ಪ್ರಶ್ನಿಸಿದರೆ ಅದಕ್ಕೆ ಯಾವುದೇ ಉತ್ತರ ನೀಡಲ್ಲ” ಎಂದರು.
“ನೋಟು ರದ್ದತಿಯಾಗಿರಲಿ, ಉದ್ಯೋಗ ಸೃಷ್ಟಿಯಾಗಿರಲಿ ಅಥವಾ ಎಂಎಸ್ಪಿ ಆಗಿರಲಿ – ಅಂತಹ ಹಲವು ವಿಷಯಗಳಿವೆ. ಅವರು ಎಂದಿಗೂ ಜನರಿಗೆ ಸುಳ್ಳು ಹೇಳಿದ್ದೇನೆ ಮತ್ತು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿಲ್ಲ ಮತ್ತು ಅದಕ್ಕಾಗಿ ಎಂದಿಗೂ ಕ್ಷಮೆಯಾಚಿಸಿಲ್ಲ. ಆದರೆ ಹನ್ನೊಂದು ವರ್ಷಗಳಿಂದ ಒಂದರ ನಂತರ ಒಂದು ಸುಳ್ಳನ್ನು ಹೇಳುತ್ತಲೇ ಇದ್ದಾರೆ” ಎಂದು ಹೇಳಿದರು.
“ಯುಪಿಎ ಮತ್ತು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನವನ್ನು ನೀಡುವ ಮೂಲಕ ವಿರೋಧ ಪಕ್ಷದ ನಾಯಕರಿಗೆ ಅವಕಾಶ ಮಾಡಿಕೊಟ್ಟರು. ಆದರೆ ಪ್ರಸ್ತುತ ಎನ್ಡಿಎ ಸರ್ಕಾರವು ಕಳೆದ 11 ವರ್ಷಗಳಿಂದ ಆ ಹುದ್ದೆಯನ್ನು ಖಾಲಿ ಬಿಟ್ಟಿದೆ. ಪ್ರಮುಖ ಸಂಸದೀಯ ಪಾತ್ರಗಳಲ್ಲಿ ವಿರೋಧ ಪಕ್ಷಗಳನ್ನು ಒಳಗೊಳ್ಳುವ ಸಂಪ್ರದಾಯವನ್ನು ಮುರಿದಿದೆ” ಎಂದು ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದರು.
ಇದನ್ನು ಓದಿದ್ದೀರಾ? ಮೋದಿ ಸರ್ಕಾರ ‘ಯುಟರ್ನ್’ಗಳ ಸರ್ಕಾರ: ಮಲ್ಲಿಕಾರ್ಜುನ್ ಖರ್ಗೆ
“ಮೋದಿಯವರ ಕೃತ್ಯ ಕಾನೂನುಬಾಹಿರ, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅವರು ವಿರೋಧ ಪಕ್ಷಕ್ಕೆ ಉಪಸಭಾಪತಿ ಹುದ್ದೆಯನ್ನು ನೀಡಲು ಬಯಸುವುದಿಲ್ಲ. ಇದು ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ತೋರಿಸುತ್ತದೆ” ಎಂದರು.
“ವಾಜಪೇಯಿ ಸರ್ಕಾರ ಮಾಡಿದ ಉತ್ತಮ ಕೆಲಸಗಳಿಗೆ ಯುಪಿಎ ಆಗಾಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಎನ್ಡಿಎ ಸರ್ಕಾರ ಕಾಂಗ್ರೆಸ್ ನೇತೃತ್ವದ ಯುಪಿಎಯನ್ನು ನಿರಂತರವಾಗಿ ಟೀಕಿಸುತ್ತಿದೆ. ಜೊತೆಗೆ ಮನಮೋಹನ್ ಸಿಂಗ್ ಯುಗದಲ್ಲಿ ಪ್ರಾರಂಭಿಸಲಾದ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸಿದೆ” ಎಂದು ಖರ್ಗೆ ದೂರಿದರು.
