ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ಪ್ರಧಾನಿ ಮೋದಿ ಮೌನ ಮುರಿಯಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನವನ್ನೂ ಹೇಳಲಿಲ್ಲ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ತನ್ನ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಧಾನಿ ಮೋದಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿರುವ ಸಾಮರಸ್ಯ ಹಾಳುಮಾಡುವಂತ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ.
“ಒಂದು ವೇಳೆ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ, ನಿಮ್ಮೆಲ್ಲರ ಸಂಪತ್ತಿನ ಮೇಲೆ ಕಣ್ಣಿಡಲಿದೆ. ದೇಶದ ಮನೆಮನೆಗೂ ದಾಳಿ ನಡೆಸಿ, ನೀವು ಕೂಡಿಸಿಟ್ಟ ಹಣ, ಧನ, ಚಿನ್ನಾಭರಣ ಅಲ್ಲದೇ ಮಾಂಗಲ್ಯ ಸೂತ್ರವನ್ನು ತೆಗೆದುಕೊಳ್ಳಲಿದೆ. ನಂತರ ತನ್ನ ವೋಟ್ಬ್ಯಾಂಕ್ನವರನ್ನು ಖುಷಿ ಪಡಿಸಲು ಸಂಪತ್ತನ್ನು ಪುನರ್ ಹಂಚಿಕೆ ಮಾಡಲಿದೆ? ನೀವು ಕೂಡಿಟ್ಟ ಹಣವನ್ನು ಭವಿಷ್ಯದಲ್ಲಿ ಮಕ್ಕಳಿಗೆ ಕೊಡಲೂ ಸಹ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು” ಎನ್ನುವ ಸುಳ್ಳುಗಳನ್ನು ಕರ್ನಾಟಕದಲ್ಲಿಯೂ ಹೇಳುತ್ತಿದ್ದಾರೆ.
ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಆರಂಭದಿಂದಲೂ ಎಲ್ಲೆಡೆ ಅವೇ ಸುಳ್ಳುಗಳನ್ನು ಹೇಳುತ್ತಾ ಜನರಿಗೆ ಪ್ರಚೋದಿಸುತ್ತಿದ್ದಾರೆ. ಆಸ್ತಿ ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಯಾವುದೇ ಪ್ರಣಾಳಿಕೆಯಲ್ಲಾಗಲಿ, ಭಾಷಣದಲ್ಲಾಗಲೀ ಪ್ರಸ್ತಾಪಿಸಿಲ್ಲ. ಆದರೆ, ಪ್ರಧಾನಿಯ ಚುನಾವಣಾ ಬಾಂಡ್ ಭ್ರಷ್ಟಾಚಾರ, ಕೋವ್ಯಾಕ್ಸಿನ್ ಭ್ರಷ್ಟಾಚಾರಗಳು ಬಯಲಾಗುತ್ತಿದ್ದಂತೆ ಮೋದಿ ಚುನಾವಣಾ ಪ್ರಚಾರದ ಭಾಷಣಗಳ ಸ್ವರೂಪಗಳನ್ನು ಬದಲಾಯಿಸಿಕೊಂಡಿದ್ದಾರೆ. ಕೇವಲ ಹತ್ತು ವರ್ಷಗಳಲ್ಲಿ ದೇಶದ ಸಂಪತ್ತುಗಳನ್ನೆಲ್ಲ ಆದಾನಿಯಂತಹ ಉದ್ಯಮಿಗಳಿಗೆ ಮಾರಾಟ ಮಾಡಿದ್ದು, ಲಾಭ ತರುವಂತಹ ಬಹುತೇಕ ಸಂಪತ್ತನ್ನು ಖಾಸಗೀಕರಣ ಮಾಡುವ ಮೂಲಕ ಇಡೀ ಸಂಪತ್ತನ್ನೇ ಮೋದಿ ಲೂಟಿ ಮಾಡಿರುವುದು ಗೊತ್ತೇ ಇದೆ.
“ರಾಜ, ಮಹಾರಾಜರ ಆಳ್ವಿಕೆಯನ್ನು ಕೀಳಾಗಿ ಕಾಣುವ ಮತ್ತು ನಿಂದಿಸುವ ಕಾಂಗ್ರೆಸ್ನವರು ನವಾಬ್, ನಿಜಾಮರ ಆಳ್ವಿಕೆಯನ್ನು ಕಿಂಚಿತ್ತೂ ಟೀಕಿಸುವುದಿಲ್ಲ. ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೂ ತುಷ್ಟೀಕರಣದ ನೀತಿಯನ್ನು ಕಾಂಗ್ರೆಸ್ ಈಗಲೂ ಮುಂದುವರೆಸಿದೆ. ರಾಜ, ಮಹಾರಾಜರು ಜನರ ಆಸ್ತಿ, ಜಮೀನು ಕಬಳಿಸುತ್ತಾರೆಂದು ಹೇಳುವ ಮೂಲಕ ಕಾಂಗ್ರೆಸ್ನವರು ರಾಜಪರಂಪರೆಯನ್ನು ಅವಮಾನಿಸಿದ್ದಾರೆ” ಎಂದು ಮೋದಿ ಇನ್ನಷ್ಟು ಸುಳ್ಳುಗಳನ್ನು ಹೇಳಿದ್ದಾರೆ.
“ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಸಂಘ ಪರಿವಾರ ಹೋರಾಟ ಮಾಡಲಿಲ್ಲ. ಟಿಪ್ಪು ಸುಲ್ತಾನ್ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ನಾಡಿಗಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಭಕ್ತ. ಟಿಪ್ಪು ಸುಲ್ತಾನ್ ಕೇವಲ ಒಂದು ಧರ್ಮಕ್ಕೆ ಅಂಟಿಕೊಂಡಿದ್ದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸೇರಿರುವ ಆಸ್ತಿ. ಬ್ರಿಟೀಷರೊಂದಿಗೆ ಹೋರಾಟ ನಡೆಸಿ ಮೈಸೂರಿನ ಆಸ್ತಿಯನ್ನು ಉಳಿಸಿದ್ದು, ಟಿಪ್ಪುಸುಲ್ತಾನ್. ಟಿಪ್ಪು ಮುಸಲ್ಮಾನನಾಗಿದ್ದರೂ ಅವನು ತನ್ನ ಹಿಂದೂ ಪ್ರಜೆಗಳ ನಿಷ್ಠೆಯನ್ನು ಉಳಿಸಿಕೊಂಡಿದ್ದನು. ಕೋಮುವಾದವನ್ನೇ ತಲೆಯಲ್ಲಿ ತುಂಬಿಕೊಂಡಿರುವ ಬಿಜೆಪಿ ನಾಯಕರು ಇತಿಹಾಸದ ಅರಿವಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವವರು” ಎಂದು ಸಿಎಂ ಸಿದ್ದರಾಮಯ್ಯ ಕೂಡಾ ಛಾಟಿ ಬೀಸಿದ್ದರು.
ಹೇಗಾದರೂ ಸರಿ ಮೂರನೇ ಬಾರಿಯೂ ತಾನೇ ಅಧಿಕಾರದ ಚುಕ್ಕಾಣಿ ಹಿಡಿದು ಸರ್ವಾಧಿಕಾರ ಸಾಧಿಸಲೇಬೇಕೆಂದು ಪಣತೊಟ್ಟಿರುವ ಮೋದಿ ಉತ್ತರ ಭಾರತದಲ್ಲಿ ಬಿಟ್ಟ ಬೊಗಳೆಗಳನ್ನು ಕರ್ನಾಟಕದಲ್ಲಿಯೂ ಬಿಡುತ್ತಿದ್ದಾರೆ. ಅವರ ಚುನಾವಣಾ ಭ್ರಷ್ಟಾಚಾರ, ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸಿರುವಂತಹ ಸರ್ವಾಧಿಕಾರ, ಕ್ಲೀನ್ ಚಿಟ್ಗಳಂತಹ ಯಾವುದೇ ಪ್ರಕರಣಗಳ ಬಗ್ಗೆ ಮೋದಿ ಮಾತನಾಡುವುದೇ ಇಲ್ಲ. ಪ್ರತಿ ಬಾರಿಯೂ ವಿಪಕ್ಷಗಳ ವಿರುದ್ಧ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ.
“ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆಯೋ, ಅಲ್ಲೆಲ್ಲ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ಹೆಚ್ಚಳವಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆ ನಡೆದಿದೆ. ಹುಬ್ಬಳ್ಳಿಯಲ್ಲಿ ಕಾಲೇಜಿನ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯ ಕೊಲೆ ಕೂಡ ನಡೆಯುತ್ತದೆ. ಇಂತಹ ಅಸುರಕ್ಷಿತ ವಾತಾವರಣ ಕಾಂಗ್ರೆಸ್ ಸರ್ಕಾರ ಇರುವ ಕಡೆ ಇರುತ್ತದೆ. ಇದು ಕರ್ನಾಟಕದ ಜನರು ಮಾಡಿರುವ ಪಾಪ” ಎಂದು ಮತ್ತಷ್ಟು ಸುಳ್ಳುಗಳನ್ನು ಹೇಳಿದ್ದಾರೆ.
ಬೇಟಿ ಬಚಾವೋ ಬೇಟಿ ಪಡಾವೋ ಎಂದೆಲ್ಲ ದೊಡ್ಡ ದೊಡ್ಡ ಭಾಷಣ ಮಾಡುವ ಮೋದಿ ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ಮೌನ ಮುರಿಯಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನವನ್ನೂ ಹೇಳಲಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದವರ ಬದುಕು ಬೀದಿಗೆ ಬಂದಾಗಲೇ, ಮಹಾನ್ ದೇಶಾಭಿಮಾನಿ ಮತ್ತು ತಾನೇ ದೇಶ ಎಂದುಕೊಳ್ಳುವ ಸರ್ಕಾರದ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಕ್ರೀಡಾಲೋಕದಲ್ಲಿ ತಮ್ಮದೇ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ, ಗೌರವ ಹೆಚ್ಚಿಸಿದವರಿಗಾದ ಅನ್ಯಾಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಪರವಾಗಿ ಇದೇ ಪ್ರಧಾನಿ ಒಂದೇ ಒಂದು ಮಾತನ್ನೂ ಆಡದೆ ಸಂಸತ್ ಭವನದ ಉದ್ಘಾಟನೆಯ ಪೂಜೆ ಪುನಸ್ಕಾರಗಳಲ್ಲಿ ಬ್ಯಸಿಯಾಗಿದ್ದರು.
2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಇದು ದೂರು ದಾಖಲಾದ ಅಥವಾ ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳು. ಇನ್ನು, ಬೆಳಕಿಗೆ ಬಾರದೇ ಇರುವ ಸಾವಿರಾರು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ.
ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು: ಭಾಗ-1 | ಕಳೆದ 10 ವರ್ಷಗಳಲ್ಲಿ ವಿಶ್ವಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿದೆಯೇ? ವಾಸ್ತವ ಏನು?
ಭ್ರಷ್ಟಾಚಾರದ ಬೇಟೆಯಾಡುತ್ತೇನೆ, ಕಪ್ಪುಹಣ ಮರಳಿ ತರುತ್ತೇನೆ. ʼನ ಖಾವೂಂಗಾ, ನ ಖಾನೇದೂಂಗಾʼ ಎಂದು ಪಣ ತೊಟ್ಟಿದ್ದ ಮೋದಿ ಸರ್ಕಾರದಲ್ಲಿ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅದಕ್ಕೆ ಬಿಜೆಪಿಯೇ ಕಾರಣವೆಂದು ರಾಜ್ಯದ ಶೇ.34ಕ್ಕೂ ಹೆಚ್ಚು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ದಿನ.ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ರೈತರು, ಕೃಷಿ ಕೂಲಿಗಳು, ದೊಡ್ಡ ವ್ಯಾಪಾರಸ್ಥರು, ಪದವೀಧರರು, ಸ್ನಾತಕೋತ್ತರ ಪದವೀಧರರು, ನಿರುದ್ಯೋಗಿಗಳು, ಶಾಲೆ ಬಿಟ್ಟವರು, ಮಹಿಳೆಯರು, ಪುರುಷರು ಹಾಗೂ ಭಿನ್ನ ವಯೋಮಾನದವರೆಲ್ಲರ ಪ್ರಕಾರವೂ ಬಿಜೆಪಿಯೇ ಅತಿ ಹೆಚ್ಚು ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ.