ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ವಕೀಲ ದೇವರಾಜೇಗೌಡ ವಿರುದ್ಧ ವಿಶೇಷ ತನಿಖಾ ತಂಡಕ್ಕೆ ಕಾಂಗ್ರೆಸ್ ದೂರು ನೀಡಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ ಅವರು ಮಾಧ್ಯಮಗಳ ಬಂದ ವರದಿಯನ್ನು ಆಧರಿಸಿ ಗುರುವಾರ ದೂರು ನೀಡಿದ್ದಾರೆ.
“ಕುಮಾರಸ್ವಾಮಿಯವರ ಇಲ್ಲಸಲ್ಲದ ಹೇಳಿಕೆಯಿಂದ ಸಂತ್ರಸ್ತ ಮಹಿಳೆಯರು ತನಿಖಾ ತಂಡದ ಮುಂದೆ ಬಂದು ದೂರು ನೀಡಲು ಹಾಗೂ ನಿರ್ಭಿತಿಯಿಂದ ಮಾಹಿತಿ ನೀಡಲು ಭಯಪಡುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಸಂತ್ರಸ್ತರಿರುವ ಸ್ಥಳ ಹಾಗೂ ಈ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್ ಇರುವ ಮಾಹಿತಿಯನ್ನು ಅವರೇ ಬಹಿರಂಗ ಪಡಿಸಿದ್ದಾರೆ. ಹಾಗಾದರೆ ಪ್ರಕರಣದ ರೂವಾರಿ ಹಾಗೂ ಪ್ರಮುಖ ಆರೋಪಿ ಪ್ರಜ್ವಲ್ ತಲೆಮರೆಸಿಕೊಂಡಿರುವ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾಹಿತಿ ಇರಬೇಕು” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೇವರಾಜೇಗೌಡ ಹಾಗೂ ಕುಮಾರಸ್ವಾಮಿ ಅವರು ಎಸ್ಐಟಿ ವಿರುದ್ಧ ಹೇಳಿಕೆ ನೀಡುವ ಮೂಲಕ ತನಿಖೆಯ ದಾರಿಯನ್ನು ತಪ್ಪಿಸಿ ಪರೋಕ್ಷವಾಗಿ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ.
ಕುಮಾರಸ್ವಾಮಿ ಅವರಿಗೆ ಪ್ರಜ್ವಲ್ ರೇವಣ್ಣ ಅತ್ಯಾಚಾರದ ಬಗ್ಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂತ್ರಸ್ತೆಯರು ಕೆ ಕೆ. ಗೆಸ್ಟ್ ಹೌಸ್ ನಲ್ಲಿ ಇದ್ದಾರೆಂದು ಹೇಳಿಕೆ ಕೊಡುವ ಮೂಲಕ ಸಂತ್ರಸ್ತೆ ಬಗ್ಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ರೇವಣ್ಣ ಬಳಿಕ ವಕೀಲ ದೇವರಾಜೇಗೌಡ ಸರದಿ: ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿ ಲೈಂಗಿಕ ಕಿರುಕುಳ ಆರೋಪ
ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಅವರು ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿಕೊಂಡಿರುವ ಆರೋಪಿ ವಿರುದ್ಧ ದೂರು ನೀಡದೇ ವಿಡಿಯೋ ಹಂಚಿರುವ ವ್ಯಕ್ತಿಗಳನ್ನು ಮಾತ್ರ ಗುರುತಿಸಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
