ಮುಡಾ ಪ್ರಕರಣದ ತನಿಖೆ ಸುದೀರ್ಘ ಪ್ರಕ್ರಿಯೆ ಇಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂದು ನ್ಯಾಯಾಲಯ ವಿಚಾರಣೆ ಮಾಡಬೇಕೆ ಹೊರತು, ನೀವು ನಾನು ವಿಚಾರಣೆ ಮಾಡುವಂತಹದಲ್ಲ. ನಾನು ಇ.ಡಿ ತನಿಖೆ ನೋಡಿದ್ದೇನೆ. ಈ ಪ್ರಕರಣದ ಬಗ್ಗೆ ನಾನು ಹೆಚ್ಚಿಗೆ ಏನು ಹೇಳುವುದಿಲ್ಲ. ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಳಗಾವಿಯ ಸುವರ್ಣಸೌಧ ಗಾಂಧಿ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲನೆ ನಡೆಸಿದ ಶಿವಕುಮಾರ್ ಅವರು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಮುಖ್ಯಮಂತ್ರಿಗಳಾಗಲಿ, ಅವರ ಧರ್ಮಪತ್ನಿ ಅವರಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಈ ವಿಚಾರ ಬಿಟ್ಟು ರಾಜ್ಯದ ವಿಚಾರದ ಬಗ್ಗೆ ಗಮನಹರಿಸಿ” ಎಂದರು.
“ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷದ ಶಾಸಕರ ಜತೆಗೆ ಸ್ವಾತಂತ್ರ್ಯ ಹೋರಾಟಗಾರರಿಗೂ ಆಹ್ವಾನ ನೀಡಲಾಗುವುದು. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಘನ ಉಪಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷರು, ರಾಜ್ಯ ಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿ ಟಿ ರವಿಯನ್ನು ರಕ್ಷಿಸಲು ಹೋಗಿ ತಮ್ಮ ಘನತೆ ಕಳೆದುಕೊಂಡರೇ ಸಭಾಪತಿ ಹೊರಟ್ಟಿ?
“ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಹಾಗೂ ಪರಿಷತ್ತಿನ ಸಭಾಪತಿಗಳು ಭಾಗವಹಿಸಲಿದ್ದಾರೆ. ಎಲ್ಲಾ ಪಕ್ಷದ ಶಾಸಕರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ನಂತರ ನೆನಪಿಗಾಗಿ ಎಲ್ಲಾ ಶಾಸಕರ ಗುಂಪು ಫೋಟೋ ತೆಗೆಯಲಾಗುವುದು. ನಂತರ ಅತಿಥಿಗಳು ಹಾಗೂ ಆಹ್ವಾನಿತರಿಗೆ ಮುಖ್ಯಮಂತ್ರಿಗಳು ಭೋಜನಕೂಟ ಏರ್ಪಡಿಸಲಿದ್ದಾರೆ. ಶಾಸಕರ ಹೊರತಾಗಿ ಗಂಗಾಧರ ದೇಶಪಾಂಡೆ ಅವರ ಕುಟುಂಬ ಸೇರಿದಂತೆ ಪ್ರಮುಖ ಕುಟುಂಬದವರಿಗೂ ಆಹ್ವಾನ ನೀಡಲಾಗುವುದು” ಎಂದು ಮಾಹಿತಿ ನೀಡಿದರು.