ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಳ್ಳಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, “ಇಂದಿರಾಗಾಂಧಿ ಯುದ್ಧದ ಸಮಯದಲ್ಲಿ ತಮ್ಮ ಚಿನ್ನವನ್ನು ದೇಶಕ್ಕೆ ನೀಡಿದರೆ, ನನ್ನ ತಾಯಿಯ ಮಂಗಳಸೂತ್ರ ಈ ದೇಶಕ್ಕಾಗಿ ಬಲಿದಾನವಾಗಿದೆ” ಎಂದಿದ್ದಾರೆ.
ಮಂಗಳವಾರ ಬೆಂಗಳೂರಿನ ಎಚ್.ಎಸ್.ಆರ್ ಬಡಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
कांग्रेस ने 55 साल में क्या किसी का सोना या मंगलसूत्र छीना? जब देश युद्ध लड़ रहा था, इंदिरा जी ने अपना मंगलसूत्र व गहने दान किए। लाखों महिलाओं ने इस देश के लिए अपने मंगलसूत्र कुर्बान किए। जब मेरी बहनों को नोटबंदी में अपने मंगलसूत्र गिरवी रखने पड़े, तब प्रधानमंत्री जी कहां थे? जब… pic.twitter.com/E5cfHZoJRR
— Priyanka Gandhi Vadra (@priyankagandhi) April 23, 2024
“ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಕಾಂಗ್ರೆಸ್ 55 ವರ್ಷ ಆಡಳಿತ ನಡೆಸಿದೆ. ಯಾರಾದರೂ ನಿಮ್ಮ ಚಿನ್ನವನ್ನು ಕಿತ್ತುಕೊಂಡರೇ? ನಿಮ್ಮ ಮಾಂಗಲ್ಯವನ್ನು ಕಿತ್ತುಕೊಂಡರೇ? ನರೇಂದ್ರ ಮೋದಿಗೆ ಮಂಗಳಸೂತ್ರದ ಮಹತ್ವದ ಬಗ್ಗೆ ಗೊತ್ತಿದ್ದಿದ್ದರೆ, ಈ ರೀತಿಯ ಅನೈತಿಕ ಮಾತುಗಳನ್ನು ಆಡುತ್ತಿರಲಿಲ್ಲ” ಎಂದು ವಾಗ್ದಾಳಿ ನಡೆಸಿದರು.
“ರೈತನ ಮೇಲೆ ಸಾಲ ಹೆಚ್ಚಾದರೆ ಆತನ ಹೆಂಡತಿ ತನ್ನ ಮಂಗಳಸೂತ್ರವನ್ನು ಅಡಮಾನ ಇಡಲು ನೀಡುತ್ತಾಳೆ. ಮನೆಯಲ್ಲಿ ಮದುವೆ ಅಥವಾ ಯಾರಾದರೂ ಅನಾರೋಗ್ಯ ಪೀಡಿತರಾದರೆ ಮಹಿಳೆ ತನ್ನ ಆಭರಣಗಳನ್ನು ಅಡಮಾನ ಇಡಲು ನೀಡುತ್ತಾಳೆ. ನೋಟುಗಳನ್ನು ಅಮಾನ್ಯ ಮಾಡಿದಾಗ ಮಹಿಳೆಯರು ಕಷ್ಟಪಟ್ಟು ಉಳಿತಾಯ ಮಾಡಿದ್ದನ್ನು ಕಸಿದುಕೊಂಡಾಗ ಮೋದಿಗೆ ಆ ಮಹಿಳೆಯರ ಬಗ್ಗೆ ನೆನಪು ಬರಲಿಲ್ಲವೇ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.
“ದೇಶದಲ್ಲಿ ರಾತ್ರೋರಾತ್ರಿ ಲಾಕ್ಡೌನ್ ಮಾಡಿದಾಗ ಕಾರ್ಮಿಕರು ನಡೆದುಕೊಂಡೇ ತಮ್ಮ ತಮ್ಮ ಮನೆಗಳತ್ತ ಹೊರಟಾಗ, ಕುಟುಂಬಗಳ ನಿರ್ವಹಣೆಗಾಗಿ ಮಹಿಳೆಯರು ತಮ್ಮ ಆಭರಣಗಳನ್ನು ಅಡವಿಟ್ಟು ಮನೆಗಳಿಗೆ ಆಸರೆಯಾದಾಗ ಮೋದಿ ಎಲ್ಲಿದ್ದರು? ರೈತರ ಆಂದೋಲನದಲ್ಲಿ 600 ರೈತರು ಸಾವನ್ನಪ್ಪಿದರು. ಅವರ ಪತ್ನಿಯರ ಮಂಗಳಸೂತ್ರದ ಬಗ್ಗೆ ಮೋದಿ ಆಲೋಚನೆ ಮಾಡಿದ್ದಾರೆಯೇ?” ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿಗೆ ಸರಣಿ ಪ್ರಶ್ನೆ ಕೇಳಿದರು.
“ಮಣಿಪುರದಲ್ಲಿ ಯೋಧನ ಪತ್ನಿಯನ್ನು ವಿವಸ್ತ್ರಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದಾಗ ಆಕೆಯ ಮಂಗಳಸೂತ್ರದ ಬಗ್ಗೆ ಮೋದಿಗೆ ಆಲೋಚನೆ ಬರಲಿಲ್ಲವೇ? ಈಗ ಚುನಾವಣೆ ಸಂದರ್ಭದಲ್ಲಿ ಮಹಿಳೆಯರನ್ನು ಬೆದರಿಸುತ್ತಿರುವ ನಿಮಗೆ ನಾಚಿಕೆಯಾಗಬೇಕು. ಮಹಿಳೆಯರ ಮಂಗಳಸೂತ್ರದ ಬಗ್ಗೆ ಅಷ್ಟೇ ಕಾಳಜಿಯಿದ್ದಿದ್ದರೆ, ಅವರ ಮಕ್ಕಳಿಗೆ ಉದ್ಯೋಗ, ಬೆಲೆ ಏರಿಕೆಗೆ ಕಡಿವಾಣ, ವಿದ್ಯಾರ್ಥಿಗಳಿಗೆ ಶಿಕ್ಷಣ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಶ್ರಮ ಪಡುತ್ತಿದ್ದರು ಎಂದು ಅವರು ಹೇಳಿದರು.
“ಎಷ್ಟು ವರ್ಷಗಳ ಕಾಲ ಚುನಾವಣೆಯನ್ನು ಧರ್ಮದ ಆಧಾರದಲ್ಲಿ ನಡೆಸುತ್ತೀರಾ? ಈ ಚುನಾವಣೆಯನ್ನು ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳ ಆಧಾರದ ಮೇಲೆ ಎದುರಿಸಿ ನೋಡೋಣ” ಎಂದು ಪ್ರಧಾನಿ ಮೋದಿಯವರಿಗೆ ಪ್ರಿಯಾಂಕಾ ಗಾಂಧಿ ಸವಾಲೆಸೆದಿದ್ದಾರೆ.
“ಈಗ ಸಮಯ ಬಂದಿದೆ. ನೀವು ಎಚ್ಚರಗೊಳ್ಳದಿದ್ದರೆ ದೇಶ ಪಾತಾಳಕ್ಕೆ ಹೋಗುತ್ತದೆ. ಈ ಸರಕಾರ ಎಲ್ಲ ಅನೈತಿಕ ಕೆಲಸಗಳನ್ನು ಮಾಡುತ್ತಿದ್ದರೂ ಮಾಧ್ಯಮಗಳಲ್ಲಿ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ವಿಪಕ್ಷ, ಮಾಧ್ಯಮ, ನ್ಯಾಯಾಲಯ, ಜನರ ಅಧಿಕಾರ ರಕ್ಷಿಸಲು ಇರುವ ಎಲ್ಲ ಸಂಸ್ಥೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವು ಅದರ ವಿರುದ್ಧ ಹೋರಾಡುತ್ತಿದ್ದೇವೆ. ನೀವು ಯಾವಾಗ ಹೋರಾಡುತ್ತೀರಾ?” ಎಂದು ಅವರು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ತನ್ನ ವರದಿ ಉಲ್ಲೇಖಿಸಿ ವೀಸಾ ವಿಸ್ತರಿಸಲು ಮೋದಿ ಸರ್ಕಾರ ನಿರಾಕರಣೆ: ಭಾರತ ತೊರೆದ ಆಸ್ಟ್ರೇಲಿಯಾ ಪತ್ರಕರ್ತೆ!
“10 ವರ್ಷಗಳ ಆಡಳಿತದಲ್ಲಿ ಜನಸಾಮಾನ್ಯ ಜೀವನದಲ್ಲಿ ಯಾವ ಬದಲಾವಣೆ ತಂದಿದ್ದಾರೆ ಎಂಬುದನ್ನು ಸಾರ್ವಜನಿಕ ವೇದಿಕೆಯಲ್ಲಿ ಬಂದು ಮೋದಿ ಹೇಳಲಿ” ಎಂದು ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಸವಾಲೆಸೆದಿದ್ದಾರೆ.
