ನಾಡು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್

Date:

Advertisements
ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನು ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು 'ಸಾಮಾಜಿಕ ಕಾನೂನುಗಳ ಹರಿಕಾರ' ಎಂದು ಕರೆದಿದ್ದಾರೆ. ಗಾಂಧೀಜಿಯವರು 'ರಾಜರ್ಷಿ' ಎಂದು ಪ್ರಶಂಸಿಸಿದ್ದಾರೆ. ಇಂದು ಅವರ ಜನ್ಮದಿನ...

ನಾವು ಯಾವ ಯಾವುದನ್ನು ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅಂತಹ ಮಹನೀಯರ ಶ್ರೇಷ್ಠ ಸೇವೆ ಎಂದು ಕೊಂಡಾಡುತ್ತೇವೆಯೋ ಆ ಹಿರಿಮೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಕೂಡ ಮಹತ್ತರವಾದುದು. ಸರ್ವ ಕಾಲದಲ್ಲೂ ಪ್ರಾಜ್ಞರು ನಿಷ್ಠರು ಇರುತ್ತಾರೆ. ಆ ಪ್ರಾಜ್ಞರಿಗೆ ಕಾರ್ಯದಕ್ಷತೆ ತೋರುವ ಅವಕಾಶ, ಸ್ವಾತಂತ್ರ್ಯ, ಅಧಿಕಾರಗಳನ್ನು ನೀಡುವ ಮನೋಬಲ ರಾಜ್ಯಭಾರದವರಿಗೆ ಇದ್ದಾಗ ಮಾತ್ರವೇ ಅದು ಸಾಧ್ಯ ಎಂಬುದು ಅತ್ಯಂತ ಮುಖ್ಯ ಸಂಗತಿಯಲ್ಲವೆ..?

ನಾಲ್ವಡಿ ಕೃಷ್ಣರಾಜ ಒಡೆಯರ್ ಜೂನ್ 4, 1884ರಂದು ಮಹಾರಾಜ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಅವರ ಜೇಷ್ಠ ಪುತ್ರನಾಗಿ ಜನಿಸಿದರು. ನಾಡು ಇಂದು ಅವರ 141ನೇ ಜಯಂತಿಯನ್ನು ಆಚರಿಸುತ್ತಿದೆ.

ಯದುವಂಶದ ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರಾಗಿ ಮೈಸೂರು ಸಂಸ್ಥಾನವನ್ನು ಮುನ್ನಡೆಸಿ ಅನೇಕ ಕ್ರಾಂತಿಯ ಹರಿಕಾರರಾದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಇವರು 1902-1940ರ ಸುಮಾರು 38 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ಮೈಸೂರನ್ನು ಪ್ರಗತಿಪಥದಲ್ಲಿ ಕೊಂಡೊಯ್ದರು.

Advertisements

ಇವರು 1895ರಲ್ಲೇ ಪಟ್ಟಾಭಿಷಿಕ್ತರಾದಾಗ ಇವರ ವಯಸ್ಸು ಕೇವಲ 10. ಈ ಸಮಯದಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಅವರು ರಾಜ್ಯ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಕೃಷ್ಣರಾಜರಿಗೆ ವಯೋಸಹಜವಾಗಿ ಮತ್ತು ಮೈಸೂರು ಅರಸರಿಗೆ ಸಿಗಬೇಕಿದ್ದ ಅರ್ಹ ವಿದ್ಯಾಭ್ಯಾಸ, ಆಡಳಿತ ತರಬೇತಿಗಳನ್ನು ಮಹಾರಾಣಿ ನಿಗಾದಲ್ಲಿ ಕೊಡಿಸಿದರು. 1902ರ ಫೆಬ್ರವರಿ 2ರಂದು ಅಧಿಕೃತವಾಗಿ ತಮ್ಮ ತಾಯಿಯಿಂದ ಅಧಿಕಾರದ ದಂಡವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ಅನಂತರದ್ದೆಲ್ಲ ಕರ್ನಾಟಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ.

1902ರ ಆಗಸ್ಟ್ 8ರಂದು ಮೈಸೂರಿನ ಜಗನ್ಮೋಹನ ಪ್ಯಾಲೆಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ಯುಕ್ತವಾಗಿ ಮೈಸೂರಿನ ಮಹಾರಾಜ ಎಂದು ಘೋಷಿಸುತ್ತಾರೆ. 

ಇದನ್ನು ಓದಿದ್ದೀರಾ?: ಬೀನಾದಾಸ್‌ ಎಂಬ ಕ್ರಾಂತಿಕನ್ಯೆಯ ʼಶೃಂಖಲೆಯ ಝೇಂಕಾರʼ

ಆಡಳಿತ ಸುಧಾರಣೆಯ ಪರ್ವ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ನೆಪಮಾತ್ರಕ್ಕೆ ಸೀಮಿತವಾಗಿದ್ದ ‘ಪ್ರಜಾ ಪ್ರತಿನಿಧಿ ಸಭೆ’ಗೆ ಹೊಸರೂಪ ಕೊಡುವಲ್ಲಿ ಇವರ ಪಾತ್ರ ಗಮನಾರ್ಹವಾದುದು. ಇವರ ಅವಧಿಯಲ್ಲೇ ಪ್ರಜಾಪ್ರತಿನಿಧಿ ಸಭೆ ನೈಜ ಪ್ರಜಾಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಗುತ್ತದೆ. 1923ರಲ್ಲಿ ನೂತನ ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ ಜಾರಿಗೆ ತರುತ್ತಾರೆ. 

ಅವರು ಅಂದು ಇಟ್ಟ ಈ ನಡೆ ಪ್ರಜಾಪ್ರಭುತ್ವದ ದೃಷ್ಟಿಯಲ್ಲಿ ಭಾರತದಲ್ಲೇ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಮೊದಲ ಹೆಜ್ಜೆ ಇಡುತ್ತದೆ. ಪ್ರಜಾಪ್ರತಿನಿಧಿ ಸಭೆಯೊಂದಿಗೆ 1907ರಲ್ಲಿ ನ್ಯಾಯ ವಿಧೇಯಕ ಸಭೆಯನ್ನೂ ಜಾರಿಗೊಳಿಸಲಾಯಿತು. ಇದರಲ್ಲಿನ ಸದಸ್ಯರ ಸಂಖ್ಯೆ 50. ಇವರ ಪೈಕಿ ಜನರಿಂದ ಆಯ್ಕೆಯಾದವರ ಸಂಖ್ಯೆ 22. ಇದು ಇಂದಿನ ರಾಜ್ಯಸಭೆ, ವಿಧಾನಪರಿಷತ್ತಿನ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ವಿಮರ್ಶಿಸುವ ಅಧಿಕಾರವನ್ನು ನ್ಯಾಯವಿಧೇಯಕ ಸಭೆಗೆ ನೀಡಲಾಗಿತ್ತು. ಯಾವುದೇ ಕಾನೂನನ್ನು ಜಾರಿಗೊಳಿಸಲು ನ್ಯಾಯ ವಿಧೇಯಕ ಸಭೆಯ ಅನುಮತಿ ಕಡ್ಡಾಯವಾಗಿತ್ತು. ಈ ಸಭೆಗೆ ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರವನ್ನು ಕೂಡ ನೀಡಲಾಗಿತ್ತು.

WhatsApp Image 2025 06 03 at 18.26.55 1

ಮೀಸಲಾತಿಯ ಜನಕ ನಾಲ್ವಡಿ

1918ರಲ್ಲಿ ಸರ್ ಮಿಲ್ಲರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಎಲ್ಲ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಕೊಡುವ ಸಲುವಾಗಿ ಅಗತ್ಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಯಿತು. ಆಯೋಗದ ಶಿಫಾರಸಿನ ಪ್ರಕಾರ, ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಲಾಯಿತು. 1921ರಲ್ಲಿ ಪ್ರಪ್ರಥಮ ಭಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶಿಸಲಾಯಿತು. ಇದೇ ಕಾರಣದಿಂದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ‘ಮೀಸಲಾತಿಯ ಜನಕ’ ಎಂದು ಕರೆಯಲಾಗುತ್ತದೆ. 

‘ಮಿಲ್ಲರ್ ಆಯೋಗ’ ರಚನೆ ಸಾಮಾಜಿಕ ಇತಿಹಾಸದಲ್ಲೇ ಬೃಹತ್ ಮೈಲಿಗಲ್ಲು ಎಂದು ಹೆಸರಾಗಿದೆ. ಮಿಲ್ಲರ್ ಆಯೋಗ ಜಾರಿಗೆ ಬಂದ ಪರಿಣಾಮದಿಂದ ಮೈಸೂರು ಸಂಸ್ಥಾನದಲ್ಲಿ ಮೊಟ್ಟಮೊದಲ ಬಾರಿಗೆ ಕಾಂತರಾಜೇ ಅರಸ್ ಮೈಸೂರಿನ ದಿವಾನರಾಗಲು ಅವಕಾಶ ಲಭಿಸಿತು. ಅನಂತರದ ಪ್ರಮುಖ ಬೆಳವಣಿಗೆಗಳೆಂದರೆ, ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವ ಜಾತಿ ಆಧಾರಿತ ಶಾಲಾ- ಕಾಲೇಜುಗಳು ತೆರೆದವು. ಇದರ ಪರಿಣಾಮದಿಂದಾಗಿಯೇ ಇಂದು ಈ ಸಮುದಾಯದವರು ವಿದ್ಯಾಭ್ಯಾಸ, ಸರ್ಕಾರಿ ನೌಕರಿ, ಖಾಸಗಿ ಉದ್ದಿಮೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಲು ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೂಡ ಮೇಲುಗೈ ಸಾಧಿಸಲು ಕಾರಣರಾದರು. ಇದರ ಶ್ರೇಯಸ್ಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು.

ಆಡಳಿತ ವಿಕೇಂದ್ರೀಕರಣಕ್ಕೆ ಕೊಡುಗೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಟಿಯುಳ್ಳ ಅರಸರಾಗಿದ್ದರು ಎಂಬುದಕ್ಕೆ ಅನೇಕ ಸಾಕ್ಷಿಗಳು ಸಿಕ್ಕಿವೆ. ಮೈಸೂರು ಸಂಸ್ಥಾನದಲ್ಲಿ ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದರು. ಇದು ಅವರ ಅವಿಸ್ಮರಣೀಯ ಕೊಡುಗೆಗಳ ಪೈಕಿ ಒಂದು. ಅವರ ಈ ಮುಂಗಾಣ್ಕೆಯಿಂದಾಗಿ ರಾಜ್ಯದ ಸಣ್ಣ ಪಟ್ಟಣಗಳಲ್ಲಿ ಮುನಿಸಿಪಾಲಿಟಿಗಳು ಕಾರ್ಯಾಚರಣೆಗಿಳಿದವು. ಗ್ರಾಮೀಣ ಪ್ರದೇಶಗಳಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯಾರಂಭಿಸಿದವು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆ ಸಾಧ್ಯವಾಯಿತು. ಮಹಾತ್ಮ ಗಾಂಧಿಯವರು ಹೇಳುವ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಅವಧಿಯಲ್ಲಿ ಜಾರಿಗೊಳಿಸಿದರು.

ಕೃಷ್ಣರಾಜರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಸಂಸ್ಥಾನ ಮಾದರಿ ಸಂಸ್ಥಾನವಾಗಿ ಹೆಸರಾಯಿತು. ನಾಲ್ವಡಿಯವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದೇ ಹೆಸರಾಗಲು ಅವರು ನೀಡಿದ ಕೊಡುಗೆಗಳೇ ಕಾರಣ. ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಸೇರಿದಂತೆ ರಾಜ್ಯದ ಆಮುಲಾಗ್ರ ಅಭಿವೃದ್ಧಿಗೆ ಕೃಷ್ಣರಾಜರು ಕಾರಣರಾದರು. ಇದಕ್ಕೆ ಒಂದು ಉದಾಹರಣೆಯೆಂದರೆ, 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ.

ಗ್ರಾಮ ನೈರ್ಮಲೀಕರಣ, ವೈದ್ಯಕೀಯ ಚಿಕಿತ್ಸೆ, ವಿದ್ಯಾಭ್ಯಾಸದ ಅವಕಾಶಗಳ ವಿಸ್ತರಣೆ, ನೀರು ಸರಬರಾಜು, ಜನರ ಸಂಚಾರಕ್ಕೆ ನೀಡಿದ ಒತ್ತುಗಳೆಲ್ಲ ಕೃಷ್ಣರಾಜ ಒಡೆಯರ್ ಅವರು ಎಷ್ಟು ಮುಂದಾಲೋಚನೆ ಹೊಂದಿದ್ದರು ಎಂಬುದಕ್ಕೆ ಕೆಲವು ಉದಾಹರಣೆಗಳು ಮಾತ್ರ. 

ಕೃಷ್ಣರಾಜ ಒಡೆಯರ ಕಾಲದಲ್ಲಿ ರೈಲ್ವೇ ವಿಸ್ತರಣೆ

ಮೈಸೂರು – ಅರಸೀಕೆರೆ, ಬೆಂಗಳೂರು – ಚಿಕ್ಕಬಳ್ಳಾಪುರ, ಚಿಕ್ಕಜಾಜೂರು – ಚಿತ್ರದುರ್ಗ, ನಂಜನಗೂಡು – ಚಾಮರಾಜನಗರ, ತರೀಕೆರೆ – ನರಸಿಂಹರಾಜಪುರ, ಶಿವಮೊಗ್ಗ – ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು 1931ರ ಹೊತ್ತಿಗೆ ಪೂರ್ಣಗೊಳಿಸಲಾಗಿತ್ತು. 

ನೀರಾವರಿಗೆ ನೀಡಿದ ಉತ್ತೇಜನ ಇಂದಿಗೂ ಮಾದರಿ

1907ರಲ್ಲಿ ಬರದ ನಾಡು ಎಂದೇ ಖ್ಯಾತವಾದ ಚಿತ್ರದುರ್ಗ ಮಾರಿಕಣಿವೆ ಎಂಬಲ್ಲಿ ವಾಣೀವಿಲಾಸ ಸಾಗರ ಅಣೆಕಟ್ಟೆಯನ್ನು ಕಟ್ಟಿದರು. ಇದರಿಂದಾಗಿ ಚಳ್ಳಕೆರೆ ಮತ್ತು ಸುತ್ತಮುತ್ತಲ ರೈತರು ಹಾಗೂ ಕಾರ್ಖಾನೆಗಳಿಗೆ ನೀರಿನ ಸೌಕರ್ಯವನ್ನು ಒದಗಿಸಲಾಯಿತು.

ಏಷ್ಯಾದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಕೇಂದ್ರ ಸ್ಥಾಪನೆ

1911ರಲ್ಲಿ ಚಾಲನೆ ನೀಡಲಾದ ಕೃಷ್ಣರಾಜ ಸಾಗರ ಅಣೆಕಟ್ಟೆ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ ಎಂದೇ ಪ್ರಸಿದ್ಧವಾಗಿದೆ. 1900ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ವಿದ್ಯುತ್ ಉತ್ಪಾದನಾ ಕೇಂದ್ರ ಭಾರತದ ಮೊಟ್ಟಮೊದಲ ಜಲ ವಿದ್ಯುತ್ ಉತ್ಪಾದನಾ ಕೇಂದ್ರ. ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ಪ್ರಪ್ರಥಮ ಜಲ ವಿದ್ಯುತ್ ಯೋಜನೆಯನ್ನು ಆಗುಮಾಡಿದ ಸಾಧನೆ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ. ಈ ಯೋಜನೆಯಿಂದಾಗಿಯೇ 1905 ಆಗಸ್ಟ್ 3ರಂದು ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಈ ಮೂಲಕ ಬೆಂಗಳೂರಿನ ಬೆಳಕು ಎಂಬ ಕೀರ್ತಿ ಕೂಡ ಕೃಷ್ಣರಾಜ ಒಡೆಯರಿಗೆ ಸಲ್ಲಬೇಕು. 

ಇದನ್ನು ಓದಿದ್ದೀರಾ: ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಮತ್ತೊಂದು ಗ್ಯಾರಂಟಿ ಯೋಜನೆಯೇ?

ಜಾತ್ಯತೀತಗೆ ಕೃಷ್ಣರಾಜ ಒಡೆಯರ ಒತ್ತು

ಜಾತಿ ಆಧಾರದ ಮೇಲೆ ಯಾರನ್ನೂ ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಠಗಳನ್ನು ಸರ್ಕಾರ ಎತ್ತಿ ಹಿಡಿಯದು. ಸಾರ್ವಜನಿಕ ಶಾಲೆಗಳನ್ನು ತೆರಿಗೆ ಆದಾಯದಿಂದ ನಡೆಸುತ್ತಿರುವುದರಿಂದ ಶಿಕ್ಷಣವು ಸಹ, ಆಸ್ಪತ್ರೆ, ನ್ಯಾಯಾಲಯ, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಬೇಕು ಎಂಬುದು ಕೃಷ್ಣರಾಜರ ನಿಲುವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಎಲ್ಲ ವರ್ಗ, ಜಾತಿಯವರಿಗೂ ನೀಡಲು ಒತ್ತು ನೀಡಿದರು.

ಶಿಕ್ಷಣ ಕ್ಷೇತ್ರಕ್ಕೆ ಕೃಷ್ಣರಾಜರ ಕೊಡುಗೆ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡಲು ಉತ್ತೇಜನ ನೀಡಲಾಯಿತು. ಇದರ ಮುಂದುವರೆದ ಭಾಗವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ವಿಶ್ವವಿದ್ಯಾನಿಲಯವನ್ನು ಜುಲೈ 27, 1916ರಂದು ಸ್ಥಾಪಿಸಿದರು. ಇದು ಭಾರತದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಮೂಲಕ ಹೊಸ ದಾಖಲೆಯನ್ನೇ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದಾರೆ.

ಬುಡಕಟ್ಟು ಸಮುದಾಯದವರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಪ್ರಥಮವಾಗಿ ಸ್ಥಾಪಿಸಿದರು. ಅಸ್ಪೃಶ್ಯರಿಗೆ ಮಾತ್ರ ಮೀಸಲಾದ ಶಾಲೆಗಳನ್ನು ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ತೆರೆದರು. ಅನಂತರದ ಅವರ ಆಡಳಿತದ ಅವಧಿಯಲ್ಲಿ ಒಟ್ಟು ಸುಮಾರು 800 ಶಾಲೆಗಳನ್ನು ಸ್ಥಾಪಿಸಲಾಯಿತು. ಈ ಮೂಲಕ ಅವರು ವಿದ್ಯೆ ನೀಡಲು ನೀಡುತ್ತಿದ್ದ ಒತ್ತನ್ನು ಗಮನಿಸಬಹುದು.  ಜೊತೆಗೆ, ಕ್ರಾಂತಿಕಾರಕ ನಿರ್ಧಾರ ಕೈಗೊಂಡು ಪ್ರಪ್ರಥಮ ಬಾರಿಗೆ ಸ್ತ್ರೀ ಶಿಕ್ಷಣವನ್ನು ಕಡ್ಡಾಯಗೊಳಿಸಲಾಯಿತು. 

ಆರೋಗ್ಯ ಕ್ಷೇತ್ರಕ್ಕೆ ಕೃಷ್ಣರಾಜರ ಕೊಡುಗೆ

ಇನ್ನು ಕೃಷ್ಣರಾಜರ ಅವಧಿಯಲ್ಲಿ ರಾಜ್ಯದ ವಿವಿಧೆಡೆ 270 ಉಚಿತ ಆಸ್ಪತ್ರೆಗಳಿಗೆ ಚಾಲನೆ ನೀಡಲಾಯಿತು. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಕೂಡ ಅವರು ಒತ್ತು ನೀಡಿದ್ದನ್ನು ಗಮನಿಸಬಹುದು. ಅವರ ಅವಧಿಯಲ್ಲಿ 1913ರಲ್ಲಿ ಸ್ಥಾಪಿಸಲಾದ ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯಾಯಿತು.

6 ಏಪ್ರಿಲ್ 1918ರಂದು ಚಾಲನೆ ನೀಡಲಾದ ಮೈಸೂರಿನ ಕ್ಷಯರೋಗ ಆಸ್ಪತ್ರೆಯನ್ನು ಇದೀಗ ಪಿ.ಕೆ.ಟಿ.ಬಿ ಎಂದು ಕರೆಯಲಾಗುತ್ತಿದೆ. 1921ರಂದು ಇದು ಕ್ಷಯ ಮತ್ತು ಉಸಿರಾಟದ ರೋಗ ಸಂಬಂಧಿಸಿದ ಆಸ್ಪತ್ರೆಯಾಗಿ ಲೋಕಾರ್ಪಣೆಯಾಯಿತು. ನಂತರ ಇದನ್ನೇ ಬೋಧನಾ ಸಂಸ್ಥೆಯೆಂದು 1974 ರಲ್ಲಿ ಎಂ.ಎಂ.ಸಿ ಗೆ ವಹಿಸಿಕೊಡಲಾಗಿದೆ. ಏಪ್ರಿಲ್ 1975ರಲ್ಲಿ ಸುವರ್ಣಮಹೋತ್ಸವನ್ನು ಆಚರಿಸಲಾಗಿದೆ.

ವಾಣಿಜ್ಯ ಉತ್ತೇಜನಕ್ಕೆ ಒತ್ತು

2 ಅಕ್ಟೋಬರ್ 1913ರಂದು ವಾಣಿಜ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅನ್ನು ಸ್ಥಾಪಿಸಲಾಯಿತು. ಖಾಸಗಿ ಸಹಭಾಗಿತ್ವದೊಡನೆ 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲು ಚಾಲನೆ ನೀಡಲಾಯಿತು. ರೈತರಿಗಾಗಿ ನೆರವು ನೀಡುವ ಸದುದ್ದೇಶದಿಂದ ಜಮೀನು ಅಡಮಾನ ಬ್ಯಾಂಕುಗಳನ್ನು ತೆರೆಯಲಾಯಿತು.

WhatsApp Image 2025 06 03 at 18.26.55 2

ಕೆಲವು ಸಾಧನೆಗಳು

1902-ಬೆಂಗಳೂರಿನಲ್ಲಿ ಪ್ರಥಮ ವಾಣಿಜ್ಯಶಾಲೆ ಪ್ರಾರಂಭ

1902-ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆ ಜಾರಿ

1902-ಕಾವೇರಿ ನದಿಗೆ ಶಿವನ ಸಮುದ್ರದಲ್ಲಿ ಜಲವಿದ್ಯುತ್ ಕಾರ್ಯಾಗಾರ ಸ್ಥಾಪನೆ – ಪ್ರಥಮ ಬಾರಿಗೆ ಕೋಲಾರದ ಗಣಿ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ

1903-ಮೈಸೂರಿನಲ್ಲಿ ತಾಂತ್ರಿಕ ಶಾಲೆ ಸ್ಥಾಪನೆ

1906-ಕುರುಡ ಹಾಗೂ ಮೂಕ ಮಕ್ಕಳಿಗೆ ಶಾಲೆಗಳು ಆರಂಭ

1911-ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಚಾಲನೆ

1912-ಪ್ರಪ್ರಥಮ ಬಾರಿ ವಯಸ್ಕರ ಶಿಕ್ಷಣ ಆಂದೋಲನಕ್ಕೆ ಚಾಲನೆ – 7000 ಸಾಕ್ಷರತಾ ಕೇಂದ್ರಗಳ ಸ್ಥಾಪನೆ

1913-ಗ್ರಾಮೀಣ ಪ್ರದೇಶದ ಜನರಿಗೆ ಶೀಘ್ರ ನ್ಯಾಯ ನೀಡುವ ಸಲುವಾಗಿ ʼದಿ ಮೈಸೂರು ವಿಲೇಜ್ ಕೋರ್ಟ್ ಆಕ್ಟ್ʼ ಜಾರಿ

1916-ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ – ಉರ್ದು ಶಾಲೆಗಳ ಸ್ಥಾಪನೆ

1918-ಶಾಲಾ ಪ್ರವೇಶಕ್ಕೆ ಅಡ್ಡಿಯಾಗಿದ್ದ ಜಾತಿಪದ್ದತಿ ನಿರ್ಮೂಲನೆ

1919-ಮಾಧ್ಯಮಿಕ ಶಿಕ್ಷಣ ಶುಲ್ಕ ರದ್ದು

1928-ರೈತರು ಸಾಲದ ಅಡಿಯಲ್ಲಿ ಸಿಕ್ಕಿ ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿಯಿಂದ ಮುಕ್ತಿ ನೀಡುವ ʼಅಗ್ರಿಕಲ್ಚರಿಸ್ಸ್ ಡಿಬೆಟ್ ರಿಲೀಫ್ ಆಕ್ಟ್ʼ ಜಾರಿ

1939-ಫೆಬ್ರವರಿ-5ರಂದು ಜೋಗ ಜಲಪಾತದ ಬಳಿ ಶರಾವತಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ

ಸಾಮಾಜಿಕ ಕಾನೂನುಗಳು

1905-ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿ

1909-ದೇವದಾಸಿ ಪದ್ಧತಿ ನಿಷೇಧ

1910-ಬಸವಿ ಪದ್ಧತಿ ರದ್ದು

1910-ʼಗೆಜ್ಜೆಪೂಜೆʼ ಪದ್ಧತಿ ನಿಷೇಧ

1913-ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿ

1918-ಗ್ರಾಮ ಪಂಚಾಯ್ತಿಗಳ ಕಾಯ್ದೆ ಜಾರಿ

1936- ವೇಶ್ಯಾ ವೃತ್ತಿ ತಡೆಗಟ್ಟುವ ಕಾನೂನು

1936-ವಿಧವಾ ವಿವಾಹ ಕಾಯ್ದೆ

1936-ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ

1927-ಪ್ರಪ್ರಥಮ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ನೀಡಿಕೆ

ಆರ್ಥಿಕ ಸುಧಾರಣೆಗಳು

ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಎಂದು ಬಹುತೇಕ ಆರ್ಥಿಕ ತಜ್ಞರು ಹೇಳುತ್ತಾರೆ. ಈ ಮಹತ್ವದ ವಿಷಯವನ್ನು ಮೊದಲೇ ತಿಳಿದಿದ್ದ ಕೃಷ್ಣರಾಜ ಒಡೆಯರ್, ರೈತರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಲು 1905ರಲ್ಲಿ ಸಹಕಾರಿ ಸಂಘಗಳನ್ನು ತೆರೆದರು. ಇದರಿಂದಾಗಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕು ಮತ್ತು ಭೂ ಅಭಿವೃದ್ಧಿ ಬ್ಯಾಂಕ್‍ಗಳು ಸ್ಥಾಪನೆಯಾದವರು. 

ಮೈಸೂರು ಪ್ರಾಂತ್ಯದ ಫಲವತ್ತಾದ ಪ್ರದೇಶಗಳಾದ ಮಂಡ್ಯ ಮತ್ತು ಮೈಸೂರು ಭಾಗದ ರೈತರ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಸುಮಾರು 1,12,000 ಎಕರೆ ಜಮೀನಿಗೆ ನೀರಾವರಿ ಸೌಕರ್ಯವನ್ನು ಒದಗಿಸಿದರು. 

ಕೈಗಾರಿಕೆ ಅಭಿವೃದ್ಧಿಗೆ ಕೃಷ್ಣರಾಜರ ಕೊಡುಗೆ  

1914-ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಆರಂಭ, ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ

1934- ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ

1936- ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ 

ರಸ್ತೆ ಸಾರಿಗೆಗೆ ಉತ್ತೇಜನ ನೀಡಿದ ಕೃಷ್ಣರಾಜ ಒಡೆಯರ್

215 ಮೈಲಿ ರಸ್ತೆ – ಬೆಂಗಳೂರು, 211 ಮೈಲಿ – ಕೋಲಾರ, 189 ಮೈಲಿ – ತುಮಕೂರು, 220 ಮೈಲಿ – ಚಿತ್ರದುರ್ಗ, 368 ಮೈಲಿ – ಮೈಸೂರು, 191 ಮೈಲಿ – ಹಾಸನ, 283 ಮೈಲಿ – ಶಿವಮೊಗ್ಗ, 325 ಮೈಲಿ – ಕಡೂರು  

WhatsApp Image 2025 06 03 at 18.26.55

ರೈಲು ಸಾರಿಗೆಗೆ ಉತ್ತೇಜನ ನೀಡಿದ ಕೃಷ್ಣರಾಜ ಒಡೆಯರ್

1913-ಹೊಸ ರೈಲು ಸಾರಿಗೆ ನಿರ್ಮಾಣ ಇಲಾಖೆ ಆರಂಭ, 1918-ಚಿಕ್ಕಬಳ್ಳಾಪುರ-ಯಲಹಂಕ-ಮೈಸೂರು-ಅರಸೀಕೆರೆ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣ, 1921-ಚಿಕ್ಕ ಜಾಜೂರು-ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗ ನಿರ್ಮಾಣ

ಶಿಕ್ಷಣ, ಕೈಗಾರಿಕೆ, ನೀರಾವರಿ, ಬ್ಯಾಂಕಿಂಗ್, ಸಹಕಾರ, ಕಲೆ, ಸಾಹಿತ್ಯ, ಸಂಸ್ಕೃತಿ, ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸುದೀರ್ಘ 38 ವರ್ಷಗಳ ಅವಧಿಯವರೆಗೆ ದಕ್ಷವಾಗಿ ಮೈಸೂರು ಸಂಸ್ಥಾನವನ್ನು ಮುನ್ನಡೆಸಿದರು. ಇವರ ಕೊಡುಗೆಗಳನ್ನು ಅನುಲಕ್ಷಿಸಿ ಇವರಿಗೆ ರಾಜರ್ಷಿ ಎಂಬ ಬಿರುದನ್ನು ಜನತೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X