“ಒಬಿಸಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ರೂಪಿಸಿದ್ದಾರೆ, ಮಂಡಲ್ ಆಯೋಗ ಬಂದಾಗ ಒಬಿಸಿಗಳನ್ನು ದಲಿತರ ವಿರುದ್ಧ ನಿಲ್ಲಿಸಲು ಸಂಘ ಪರಿವಾರ ಯತ್ನಿಸಿತ್ತು…”
“ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಒಬಿಸಿ ಪಟ್ಟಿಯೊಳಗೆ ಸೇರಿಸಿದ್ದರಿಂದ ಒಬಿಸಿಗಳಿಗೆ ಅನ್ಯಾಯವಾಗಿದೆ, ದೇಶದ್ಯಾಂತ ಇದನ್ನೇ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಆರ್ಥಿಕ, ಸಾಮಾಜಿಕ ಸ್ಥಿತಿಯ ಆಧಾರದಲ್ಲಿ ಹಿಂದುಳಿದ ವರ್ಗಗಳನ್ನು ಪಟ್ಟಿ ಮಾಡಲಾಗಿದೆ. ಮುಸ್ಲಿಂ ಸಮುದಾಯವನ್ನು ಒಬಿಸಿ ಪಟ್ಟಿಯೊಳಗೆ ಸೇರಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್” ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಸ್ಪಷ್ಟಪಡಿಸಿದರು.
ಮೋದಿ ಹೇಳಿಕೆ ಸಂಬಂಧ ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ ಅವರು, “ಪ್ರಧಾನಿಯವರಿಗೆ ಒಬಿಸಿ ಮೀಸಲಾತಿಯ ಬಗ್ಗೆ ಕನಿಷ್ಠ ಅರಿವಿಲ್ಲ. ಮೀಸಲಾತಿಯ ವಿಚಾರವನ್ನು ಮಾತನಾಡುವಾಗ ಪ್ರಜ್ಞೆ ಇಟ್ಟುಕೊಳ್ಳಬೇಕು. ವಿಚಾರಗಳು ಗೊತ್ತಿಲ್ಲವಾದರೆ ತಿಳಿದವರ ಬಳಿ ಮಾಹಿತಿ ಪಡೆದು ನಂತರ ಮಾತನಾಡಬೇಕು. ಪ್ರಧಾನಿ ಹುದ್ದೆಯಲ್ಲಿ ಕುಳಿತು ಇಷ್ಟು ಬಿಡುಬೀಸಾಗಿ ಸುಳ್ಳುಗಳನ್ನು ಹೇಳುವುದು ಸರಿಯಲ್ಲ” ಎಂದು ಖಂಡನೆ ವ್ಯಕ್ತಪಡಿಸಿದರು.
“ಹಿಂದುಳಿದ ವರ್ಗಗಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ ಸಂಚನ್ನು ಮೋದಿ ಹೊಂದಿದ್ದಾರೆ. ವಾಸ್ತವವನ್ನು ನಾವು ತಿಳಿಯಬೇಕು. ನಮ್ಮಲ್ಲಿ ಮುಸ್ಲಿಂ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಮೀಸಲಾತಿ ವ್ಯವಸ್ಥೆಯಲ್ಲಿ ಪರಿಗಣಿಸಿಯೇ ಇಲ್ಲ. ಸ್ವತಂತ್ರ ಪೂರ್ವದಲ್ಲಿ ಬಂದಂತಹ ಮಿಲ್ಲರ್ ಕಮಿಷನ್ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗವನ್ನಾಗಿ ಗುರುತಿಸಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗವನ್ನು ರಚಿಸಿ, ಅದು ನೀಡಿದ ಶಿಫಾರಸ್ಸಿನ ಅನ್ವಯ ಅಬ್ರಾಹ್ಮಣರಿಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿತು” ಎಂದು ವಿವರಿಸಿದರು.
ಸ್ವಾತಂತ್ರ್ಯ ಬಂದ ನಂತರ ರಚನೆಯಾದ ಜಸ್ಟಿಸ್ ಚಿನ್ನಪ್ಪ ರೆಡ್ಡಿ ಕಮಿಷನ್, ವೆಂಕಟಸ್ವಾಮಿ ಕಮಿಷನ್ ಮತ್ತು ನಾನು ಅಧ್ಯಕ್ಷನಾಗಿದ್ದ ಕಮಿಷನ್ವರೆಗೂ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗವೆಂದೇ ಪರಿಗಣಿಸಲಾಗಿದೆ. ಯಾಕೆ ಪರಿಗಣಿಸಲಾಯಿತು ಎಂಬುದನ್ನು ನಾವು ಗಮನಿಸಬೇಕಾಗುತ್ತದೆ. ಕಾಕ ಕಾಲೇಲ್ಕರ್ ಕಮಿಷನ್ ಎದುರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನುಡಿದ ಸಾಕ್ಷ್ಯಗಳು ಉಲ್ಲೇಖನೀಯ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೇ ಒಬಿಸಿಗಳು, ಅವರು ಯಾವುದೇ ಧರ್ಮಕ್ಕೆ ಸೀಮಿತವಲ್ಲ ಎಂಬುದು ಬಾಬಾ ಸಾಹೇಬರ ಸ್ಪಷ್ಟ ನುಡಿಯಾಗಿತ್ತು. ಮುಸ್ಲಿಮರು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರನ್ನೂ ಕರ್ನಾಟಕದಲ್ಲಿ ನಾವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದರು.
“ಯಾರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೋ ಅವರನ್ನು ಹಿಂದುಳಿದ ವರ್ಗವಾಗಿ ಪರಿಗಣಿಸಬಹುದು ಎಂದು ಸಂವಿಧಾನದ ಅನುಚ್ಛೇದ 15 (4), 16 (4)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಮುಸ್ಲಿಮರು ಒಬಿಸಿ ಪಟ್ಟಿಯಲ್ಲಿ ಸೇರುತ್ತಾರೆ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಪಟ್ಟಿಗೆ ಮುಸ್ಲಿಮರನ್ನು ಸೇರಿಸಿದಾಗ, ಅದನ್ನು ಪ್ರಶ್ನಿಸಿ ಭಾಸ್ಕರಪ್ಪ ಎನ್ನುವವರು ಹೈಕೋರ್ಟ್ನಲ್ಲಿ ದಾವೆ ಹೂಡಿದರು. ತೀರ್ಪು ನೀಡಿದ ಹೈಕೋರ್ಟ್, ದೇವರಾಜ ಅರಸು ಅವರ ಕೆಲಸವನ್ನು ಶ್ಲಾಘಿಸಿತ್ತು. ನಂತರದ ದಿನಗಳಲ್ಲಿ ಯಾರೂ ಇದನ್ನು ಪ್ರಶ್ನಿಸಿರಲಿಲ್ಲ. ಈಗ ಮಾತನಾಡುತ್ತಿರುವವರು ಅಜ್ಞಾನಿಗಳು. ಹಿಂದುಳಿದ ವರ್ಗಗಳು ಎಂದರೇನು ಎಂಬ ಕನಿಷ್ಠ ಪ್ರಜ್ಞೆ ಪ್ರಧಾನಿಗೂ ಇಲ್ಲವಾಗಿರುವುದು ಅಸಹ್ಯ ಹುಟ್ಟಿಸಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಂಡಲ್ ಆಯೋಗವು ಒಬಿಸಿಗಳಿಗೆ ಮೀಸಲಾತಿ ನೀಡಬೇಕು ಎಂದಾಗ ಮೊಟ್ಟಮೊದಲು ವಿರೋಧಿಸಿದ್ದೇ ಸಂಘಪರಿವಾರ. ಒಬಿಸಿಗಳನ್ನು ದಲಿತರ ವಿರುದ್ಧ ಎತ್ತಿ ಕಟ್ಟಿದ್ದರು. ನಿಮ್ಮ ಅವಕಾಶಗಳನ್ನು ದಲಿತರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದರು. ದಲಿತ ಸಮುದಾಯಕ್ಕೆ ಪ್ರಜ್ಞಾವಂತಿಕೆ ಇದ್ದಿದ್ದರಿಂದ ನಕ್ಕು ಸುಮ್ಮನಾಯಿತು. ದಲಿತ ಚಳವಳಿಯ ನಾಯಕರು ಒಬಿಸಿಗಳಿಗೆ ಅರಿವು ಮೂಡಿಸಿದರು. ಹಿಂದುಳಿದ ವರ್ಗಗಳ ಪರವಾಗಿ ನಿಜವಾಗಿಯೂ ಹೋರಾಡಿದ್ದು ದಲಿತ ಸಂಘಟನೆಗಳೇ ಹೊರತು ಸಂಘಪರಿವಾರವಲ್ಲ. ಈಗ ಮುಸ್ಲಿಮರ ವಿರುದ್ಧ ಒಬಿಸಿಗಳನ್ನು ಎತ್ತಿಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ” ಎಂದು ಎಚ್ಚರಿಸಿದರು.
