ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಮಹಿಳೆಯೊಬ್ಬರು ಚಿಕಾಗೋದ ರಸ್ತೆಗಳಲ್ಲಿ ಊಟಕ್ಕಾಗಿ ಪರದಾಡುತ್ತಿದ್ದಾರೆ. ತನ್ನ ಮಗಳ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳು ಕಳ್ಳತನ ಮಾಡಲಾಗಿದ್ದು, ಆಕೆಯನ್ನು ಮರಳಿ ಭಾರತಕ್ಕೆ ಕರೆದುಕೊಂಡು ಬರುವಂತೆ ಆಕೆಯ ತಾಯಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
35 ವರ್ಷದ ಸೈಯದಾ ಲುಲು ಮಿನ್ಹಾಜ್ ಜೈದಿ ಅವರ ತಾಯಿ ಹೈದರಾಬಾದ್ ನಗರದ ಸೈಯದಾ ವಹಾಜ್ ಫಾತಿಮಾ ಅವರು ವಿದೇಶಾಂಗ ಸಚಿವರಿಗೆ ಬರೆದಿರುವ ಪತ್ರದಲ್ಲಿ, “ನನ್ನ ಮಗಳು ಡೆಟ್ರಾಯಿಟ್ನ ಟ್ರೈನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 2022 ಆಗಸ್ಟ್ನಲ್ಲಿ ಅಮೆರಿಕಕ್ಕೆ ಹೋಗಿದ್ದಳು. ಆಕೆಯ ಬಳಿಯಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕಳೆದ ಎರಡು ತಿಂಗಳನಿಂದ ಅವಳು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ನನ್ನ ಮಗಳು ಊಟಕ್ಕೆ ಹಣವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾಳೆ. ಆಕೆ ಖಿನ್ನತೆಗೆ ಒಳಗಾಗಿದ್ದು, ಚಿಕಾಗೋದ ರಸ್ತೆಗಳಲ್ಲಿ ತಿರುಗಾಡುತ್ತಿದ್ದಾಳೆ. ತಾವು ಮಧ್ಯ ಪ್ರವೇಶಿಸಿ ಮರಳಿ ಭಾರತಕ್ಕೆ ಕರೆದುಕೊಂಡು ಬನ್ನಿ” ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸೈಯದಾ ಲುಲು ಮಿನ್ಹಾಜ್ ಜೈದಿಯನ್ನು ಅಮೆರಿಕದಲ್ಲಿರುವ ಇಬ್ಬರು ಹೈದರಾಬಾದಿ ಯುವಕರು ಗುರುತಿಸಿ ಈಗ ಇರುವ ಸ್ಥಿತಿಯ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿಸಿದ್ದಾರೆ.
‘ಮಗಳು ಚಿಕಾಗೋದ ರಸ್ತೆಗಳಲ್ಲಿ ಒಂಟಿಯಾಗಿರುವ ಭಾವಚಿತ್ರವನ್ನು ನಮಗೆ ಯುವಕರು ಕಳುಹಿಸಿದ್ದಾರೆ, ಆಕೆಯ ಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಭಾರತದ ರಾಯಭಾರ ಕಚೇರಿಗೆ ಈ ಬಗ್ಗೆ ತಿಳಿಸಿ, ವಾಷಿಂಗ್ಟನ್ ಡಿಸಿ, ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತಕ್ಷಣವೇ ಅವಳನ್ನು ಸಂಪರ್ಕ ಮಾಡುವಂತೆ ಹೇಳಿ. ನನ್ನ ಮಗಳನ್ನು ಭಾರತಕ್ಕೆ ಮರಳಿ ಕರೆತರುವಂತೆ ಮಾಡಿ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್
ಈ ಪತ್ರವನ್ನು ಬಿಆರ್ಎಸ್ ನಾಯಕ ಖಲೀಕುರ್ ರಹಮಾನ್ ಟ್ವಿಟರ್ನಲ್ಲಿ ಹಂಚಿಕೊಂಡ ನಂತರ ಮಾಧ್ಯಮಗಳಲ್ಲಿ ಸುದ್ದಿ ಬೆಳಕಿಗೆ ಬಂದಿದೆ. ತನ್ನ ಮಗಳನ್ನು ಮನೆಗೆ ಕರೆತರಲು ಸಹಾಯ ಮಾಡುವಂತೆ ಆಕೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಕಾಗೋದಲ್ಲಿರುವ ದೂತವಾಸವನ್ನು ಕೋರಿದ್ದಾರೆ ಎಂದು ಖಲೀಕುರ್ ರಹಮಾನ್ ಹೇಳಿದ್ದಾರೆ.
ಮಹಿಳೆಯ ತಾಯಿ ಬರೆದಿರುವ ಪತ್ರ ಮತ್ತು ಆಕೆಯ ಸ್ಥಿತಿಯ ಭಾವಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಸಚಿವ ಎಸ್ ಜೈಶಂಕರ್ ಅವರಿಗೆ ಬಿಆರ್ಎಸ್ ನಾಯಕ ಟ್ಯಾಗ್ ಕೂಡ ಮಾಡಿದ್ದಾರೆ.