ನೈಸ್ ಯೋಜನೆಯಿಂದ ತುಂಬಾ ದಿನಗಳಿಂದ ಬಡವರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿ ಬಡವರ ಜಮೀನು ಉಳಿಸಿಕೊಟ್ಟರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಮಾಜಿ ಪ್ರಧಾನಿಗಳೂ ಆದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಈಗಾಗಲೇ ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಕ ಮಾಡಲಾಗಿದೆ. ವರದಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. ಅಕ್ರಮಗಳನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.
“ಸರ್ಕಾರ ಈವರೆಗೆ ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ, ವಿಳಂಬವಾಗಿದೆ. ನೈಸ್ ಅಕ್ರಮದ ವಿರುದ್ದ ನಮ್ಮ ಪಕ್ಷ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘವಾಗಿ ಚರ್ಚೆಯಾಗಿದೆ. ಸೋನಿಯಾ ಗಾಂಧಿಯವರ ಜೊತೆ ಕೂಡ ಚರ್ಚೆ ಮಾಡಲಾಗಿತ್ತು. ಅವರು ಮಸ್ಟ್ ಟೇಕ್ ಆಕ್ಷನ್ ಅಂತಾ ಹೇಳಿದ್ದರು” ಎಂದು ದೇವೇಗೌಡ ನೆನಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಜಾತಿಭೂತ- ಸುಪ್ರೀಮ್ ಕೋರ್ಟ್ ಕಳವಳ
“ನೈಸ್ ರಸ್ತೆಗೆ ಒಳಪಡದೆ ಇರುವ ಭೂಮಿ ಎಷ್ಟಿದೆ ಅಂತಾ ಅಂದಾಜು ಮಾಡಿದಾಗ ವ್ಯಾಲ್ಯೂ ಜಾಸ್ತಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾವಾಗಲೂ ಬಡವರ ಪರ ಎಂದು ಹೇಳುತ್ತಾರೆ. ಯೋಜನೆ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಅಫಿಡವಿಟ್ ಹಾಕಿದ್ದಾರೆ. ಅದರಲ್ಲಿ, ಹೆಚ್ಚುವರಿ ಜಮೀನು ತೆಗೆದುಕೊಂಡಿದ್ದಾರೆ, ಅವರಿಗೆ ಹೆಚ್ಚು ಜಮೀನು ಕೊಡಲು ಸಾದ್ಯವಿಲ್ಲ ಎಂದು ಉಲ್ಲೇಖಿಸಲಾಗಿದೆ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ಟರೆ ಅವರಿಗೆ ಆಭಾರಿಯಾಗಿರುತ್ತೇನೆ” ಎಂದು ಹೇಳಿದರು.