ಕಾರ್ಯಕರ್ತರಿಗೆ ದೀರ್ಘ ಪತ್ರ ಬರೆದ ನಿಖಿಲ್‌ ಕುಮಾರಸ್ವಾಮಿ, ಯೋಗೇಶ್ವರ್ ವಿರುದ್ಧ ಗರಂ

Date:

Advertisements

“ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಕಂಡ ಕಾಂಗ್ರೆಸ್ ಪಕ್ಷ ಆ ಗೆಲುವಿನಲ್ಲಿಯೂ ವಿಕೃತಿ ಮೆರೆಯುತ್ತಿದೆ” ಎಂದು ಪರಾಭವಗೊಂಡ ಅಭ್ಯರ್ಥಿ ಮತ್ತು ಜನತಾದಳ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಹೊರಬಿದ್ದ ಮೇಲೆ ಕಾರ್ಯಕರ್ತರಿಗೆ ದೀರ್ಘ ಪತ್ರ ಬರೆದಿರುವ ಅವರು; ಜೆಡಿಎಸ್ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ಕಾಂಗ್ರೆಸ್ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ನಿಖಿಲ್ ಅವರು; ‘ನಿಖಿಲ್‌ ಬಚ್ಚಾ.. ಪಾಪ ನಿಖಿಲ್‌..’ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಕುಟುಕಿದ್ದಾರೆ.

Advertisements

“ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುವುದಿಲ್ಲ” ಎಂದು ಯೋಗೇಶ್ವರ್ ಮೇಲೆ ಚಾಟಿ ಬೀಸಿದ್ದಾರೆ.

ನಿಖಿಲ್ ಅವರ ಪೂರ್ಣ ಪತ್ರ ಇಲ್ಲಿದೆ…

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ನನ್ನ ಸೋಲು ಅನಿರೀಕ್ಷಿತ. ಸೋಲು ಯಾಕಾಯಿತೆಂದು ಈಗಾಗಲೇ ಕಾರಣ ಕೊಟ್ಟಿದ್ದೇನೆ. ಹಾಗೆಂದು, ಸೋಲಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ, ನಮ್ಮ ಪಕ್ಷದ್ದೂ ಅಲ್ಲ. ಇಂಥ ಅನೇಕ ಸೋಲುಗಳನ್ನು ಪಕ್ಷ ಜೀರ್ಣಿಸಿಕೊಂಡಿದೆ. ಸತತ ಹೋರಾಟಗಳ ಮೂಲಕ ಪಕ್ಷವು ಫೀನಿಕ್ಸ್‌ನಂತೆ ಎದ್ದು ಬಂದಿದೆ. ಪಕ್ಷದ ಇಂತಹ ಅನೇಕ ಏಳುಬೀಳಿನ ದಾರಿಯಲ್ಲಿ ನಾನೊಬ್ಬ ಸಣ್ಣ ಪಯಣಿಗ. ಅಷ್ಟಾಗಿಯೂ ಅನೇಕ ನಾಯಕರನ್ನು ಪಕ್ಷವು ರಾಜ್ಯಕ್ಕೆ ಧಾರೆಯೆರೆದು ಕೊಟ್ಟಿದೆ, ಅದು ಮಣ್ಣಿನಮಗ ಪೂಜ್ಯ ದೇವೇಗೌಡರ ಗರಡಿಯ ಫಲ.

ನಿಖಿಲ್‌ ಬಚ್ಚಾ.. ಪಾಪ ನಿಖಿಲ್‌, ಮಾತಿಗೆ ಕಿಡಿ

ಈ ಸೋಲು ನನಗೆ ನೋವುಂಟು ಮಾಡಿದೆ, ನಿಜ. ಇಲ್ಲ ಎಂದು ಹೇಳಿ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಹಾಗಂತ, ಸೋಲುತ್ತೇನೆ ಎಂದು ನಾನು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಗೆಲ್ಲಲು ಪ್ರಾಮಾಣಿಕವಾಗಿ ಹೋರಾಡಿದ್ದೇವೆ. ಕೆಲ ಅಂಶಗಳಿಂದ ಹಿನ್ನಡೆಯಾಗಿದೆಯಾದರೂ, ಮತ್ತೆ ಪುಟಿದೆದ್ದು ಬರುವ ಛಲ ನನಗಿದೆ. ನೋವು ಭರಿಸುವ ಶಕ್ತಿ ಹೇಗೆ ನನ್ನಲ್ಲಿ ತುಂಬಿದೆಯೋ.. ಹಾಗೆಯೇ ಛಲದಿಂದ ಎದ್ದು ಬರುವ ಕೆಚ್ಚನ್ನೂ ರಕ್ತಗತವಾಗಿ ರೂಢಿಸಿಕೊಂದಿದ್ದೇನೆ. ‘ನಿಖಿಲ್‌ ಬಚ್ಚಾ.. ಪಾಪ ನಿಖಿಲ್‌..’ ಎಂಬ ಅನುಕಂಪಕ್ಕೆ ತುತ್ತಾಗಿ ಕೈ ಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು. ಹಿಂದಿನ ಎರಡು ಸೋಲುಗಳು ನನಗೆ ಅಸಹಾಯಕತೆಯನ್ನು ಮೆಟ್ಟಿನಿಂತು ಅಪಮಾನ ಧಿಕ್ಕರಿಸಿ ಸೆಣಸುವ ಆತ್ಮಬಲ ಕೊಟ್ಟಿವೆ. ಚನ್ನಪಟ್ಟಣದಲ್ಲಿಯೂ ಆದೇ ಛಲ, ಆತ್ಮಬಲದಿಂದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು, ಮುಖಂಡರ ಜತೆಗೂಡಿ ದಿಟ್ಟ ಹೋರಾಟ ನಡೆಸಿದ್ದೇನೆ.

ಜನತಾ ಜನಾರ್ದನನ ನಿರ್ಣಯವನ್ನು ಶಿರಬಾಗಿ ಸ್ವೀಕರಿಸಿದ್ದೇನೆ

ನನ್ನ ಸೋಲು ನನ್ನ ಕಾರ್ಯಕರ್ತರಿಗೆ ಅತೀವ ನೋವುಂಟು ಮಾಡಿದೆ, ಅದನ್ನು ನಾನು ಬಲ್ಲೆ. ಇಡೀ ರಾಜ್ಯದ ಕಾರ್ಯಕರ್ತರೆಲ್ಲರೂ ವೀರಯೋಧರಂತೆ ಚನ್ನಪಟ್ಟಣದಲ್ಲಿ ಹಗಲಿರುಳೂ ದುಡಿದರು. ಮನೆಮನೆಯನ್ನೂ ತಲುಪಿ ನನ್ನ ಗೆಲುವಿಗಾಗಿ ಶ್ರಮಿಸಿದರು. ಅಂತಿಮವಾಗಿ ಸೋಲಾಯಿತು, ಅದು ಜನತಾ ಜನಾರ್ದನನ ನಿರ್ಣಯ. ಅದನ್ನು ನಾನು ಶಿರಬಾಗಿ ಸ್ವೀಕರಿಸಿದ್ದೇನೆ. ವಿಪರ್ಯಾಸವೆಂದರೆ, ಗೆದ್ದವರಿಗೆ ನೆಮ್ಮದಿ ಇಲ್ಲ, ಕನಿಷ್ಠ ಗೆಲುವನ್ನು ಅರ್ಥಪೂರ್ಣವಾಗಿಸಿಕೊಳ್ಳುವ ಮನಃಸ್ಥಿತಿಯೂ ಇಲ್ಲ. ಆ ಮುಖಗಳಲ್ಲಿ ನಗುವೇ ಇಲ್ಲ. ಅವರ ಸಂಭ್ರಮ, ವಿಜೃಂಭಣೆಯಲ್ಲಿ ಪ್ರಾಮಾಣಿಕತೆಯೂ ಇಲ್ಲ. ಸೋತ ಅಭ್ಯರ್ಥಿಯನ್ನು ಹೀಗಳೆಯುವ, ಎದುರಾಳಿ ಪಕ್ಷ ಮತ್ತು ಅದರ ನಾಯಕರನ್ನು ನಿಂದಿಸುವುದರಲ್ಲಿ ಮಗ್ನರಾಗಿದ್ದಾರೆ. ಅವರ ನಿಂದನೆಯ ವೈಖರಿ ನೋಡಿದರೆ ಅವರೆಷ್ಟು ಅನ್ಯನಿಂದನಾ ವೇದನೆಯಲ್ಲಿ ಮುಳುಗಿದ್ದಾರೆಂದು ಅರ್ಥವಾಗುತ್ತದೆ. ಅವರದ್ದು ಸತ್ಯದ ಜಯವಲ್ಲ. ಆ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆ.

ಜೆಡಿಎಸ್ ಖಾಲಿ ಮಾಡುತ್ತೇನೆ ಎಂದ ವ್ಯಕ್ತಿಗೆ ತರಾಟೆ

‘ಪಕ್ಷ ನನಗೆ ಟಾಸ್ಕ್‌ ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್‌ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ’ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ. ಜನಾದೇಶವನ್ನು ದೈವ ನಿರ್ಣಯವೆಂದು ಭಾವಿಸಿ, ಕ್ಷೇತ್ರದ ಜನತೆಯ ಪದತಲಕ್ಕೆ ಅರ್ಪಣೆಯಾಗಬೇಕಿದ್ದ ಗೆಲುವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವ, ಎದುರಾಳಿಯ ಸೋಲನ್ನು ಅವಹೇಳನ ಮಾಡುವ, ವಿರೋಧಿ ನಾಯಕರನ್ನು ಕೀಳಾಗಿ ನಿಂದಿಸುವ ವಿಕಾರಿ ಅವಸ್ಥೆಗೆ ಹೋಗಬಾರದಿತ್ತು. ಯಾಕೆಂದರೆ, ಆ ಗೆಲುವಿಗೆ ನಾನು ಶುಭ ಹಾರೈಸಿದ್ದೆ ಹಾಗೂ ಅದರಿಂದ ಚನ್ನಪಟ್ಟಣಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದ್ದೆ. ಸೋಲಿನ ಹತಾಶೆಯಲ್ಲಿ ಗೆದ್ದವರ ಮೇಲೆ ನಾನು ವಿಷ ಕಾರಿಕೊಳ್ಳಲಿಲ್ಲ. ಅಂಥ ವಿಕೃತಿ ನನ್ನ ನೆರಳಿಗೂ ಸುಳಿಯಲು ಬಿಡುವುದಿಲ್ಲ.

ರಾಜಕಾರಣ ಎಂದರೆ ವ್ಯಾಪಾರ ಅಲ್ಲ

ನಾನು ಅವರನ್ನು ಕೇಳ ಬಯಸುತ್ತೇನೆ. ಜೆಡಿಎಸ್‌ ಪಕ್ಷದಿಂದ ಶಾಸಕರನ್ನು ಖಾಲಿ ಮಾಡಿಸುತ್ತೇನೆ ಎಂದರೆ ನಮ್ಮ ಶಾಸಕರೇನು ಮಾರುಕಟ್ಟೆಯಲ್ಲಿ ಸಿಗುವ ಮಾರಾಟದ ವಸ್ತುಗಳೇ? ಅಥವಾ ಸಂತೆಯಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುವ ಕುರಿಗಳೇ? ಅಥವಾ ಹರಾಜಿಗಿಟ್ಟ ಸರಕೇ? ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಇವರ ಪಾಲಿಗೆ ಬೀದಿಯಲ್ಲಿ ಬಿಕರಿ ಮಾಡುವ ಪದಾರ್ಥಗಳೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನೊಬ್ಬ, ಇನ್ನೂ ವಿಧಾನಸಭಾಧ್ಯಕ್ಷರಿಂದ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಸಂವಿಧಾನಬಾಹಿರ, ಜನತಂತ್ರ ವಿರೋಧಿ ಕೃತ್ಯಕ್ಕೆ ಇಳಿದು ಒಬ್ಬ ಕ್ರಿಮಿನಲ್ ರೀತಿ ಮಾತನಾಡುತ್ತಾನೆ ಎಂದರೆ, ಅದು ಎಂತಹ ಸ್ಥಿತಿಯಲ್ಲಿದೆ ಕರ್ನಾಟಕ? ಅವರ ಪಕ್ಷದ ಸಂಸದರು ಲೋಕಸಭೆಯಲ್ಲಿ ಸಂವಿಧಾನದ ಪ್ರತಿ ಕೈಯ್ಯಲ್ಲಿಡಿದು ಪ್ರಮಾಣ ಸ್ವೀಕರಿಸುತ್ತಾರೆ, ನಿತ್ಯವೂ ಸಂವಿಧಾನ ಪೀಠಿಕೆ ಪಠಣ ಮಾಡುತ್ತಾರೆ!! ಯಾವ ಪುರುಷಾರ್ಥಕ್ಕೆ ಅದೆಲ್ಲಾ? ಅನ್ಯಪಕ್ಷಗಳ ಶಾಸಕರನ್ನು ಖರೀದಿ ಮಾಡುತ್ತೇವೆ ಅಥವಾ ಎಗರಿಸಿಕೊಂಡೇ ಹೋಗುತ್ತೇವೆ ಎಂದರೆ, ಇವರು ಡಾ.ಬಿ.ಆರ್.‌ಅಂಬೇಡ್ಕರ್‌ ಅವರ ಸಂವಿಧಾನವನ್ನು ರಕ್ಷಣೆ ಮಾಡುತ್ತಾರೆಯೇ? ಗೆಲುವಿನ ಅಮಲು, ಅಧಿಕಾರದ ಅಹಂಕಾರ ನಾಲಿಗೆಯ ಗುಣವನ್ನು ನಿಕೃಷ್ಟಗೊಳಿಸಿದೆ. ಇದಕ್ಕೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿಲ್ಲ ಎಂದು ಅವರು ಭಾವಿಸಿದ್ದರೆ ಅದು ಮೂರ್ಖತನವಷ್ಟೇ. ರಾಜಕಾರಣ ಎಂದರೆ ಖರೀದಿ ಅಥವಾ ಮಾರಾಟವಲ್ಲ. ವ್ಯಾಪಾರ ಅಲ್ಲವೇ ಅಲ್ಲ.

ನಮ್ಮ ಶಾಸಕರು ಕೇವಲ ಶಾಸಕರಾಗಿ ಅಥವಾ ರಾಜಕೀಯ ಉದ್ದೇಶಕ್ಕಾಗಿ ನಮ್ಮೊಂದಿಗಿಲ್ಲ. ಪಕ್ಷ ಮತ್ತು ಶಾಸಕರ ನಡುವೆ ರಕ್ತ ಸಂಬಂಧಕ್ಕಿಂತ ಮಿಗಿಲಾದ ಗಾಢ ಬಾಂಧವ್ಯವಿದೆ. ನಾಯಕರು- ಶಾಸಕರ ನಡುವೆ ಬಿಡಿಸಲಾಗದ ಭಾವನಾತ್ಮಕ ಬೆಸುಗೆ ಇದೆ. ಕೇವಲ ಸ್ವಾರ್ಥಕ್ಕಾಗಿ, ಅಧಿಕಾರದ ಹಪಾಹಪಿಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ, ಎಲ್ಲಿ ಹೆಚ್ಚು ಪ್ಯಾಕೇಜ್‌ ಸಿಕ್ಕಿದರೆ ಅಲ್ಲಿಗೆ ಹಾರಿ ಜೇಬು ಭರ್ತಿ ಮಾಡಿಕೊಳ್ಳುವ ರಾಜಕೀಯ ವ್ಯಾಪಾರಿಗಳಲ್ಲ ನಮ್ಮ ಶಾಸಕರು. ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುತ್ತೇವೆಯೇ? ಆ ಪ್ರಶ್ನೆಯೇ ಇಲ್ಲ.

ಮತದಾನಕ್ಕೆ ಮುನ್ನ ಗೃಹಲಕ್ಷ್ಮಿ ಹಣ ಹಾಕಿದ್ದು ಸರಿಯೇ

ಚುನಾವಣೆಯಲ್ಲಿ ಅವರು ಗೆಲುವು ಕಂಡಿದ್ದಾರೆ. ಸಂಭ್ರಮಿಸಲಿ, ವಿಜೃಂಭಣೆ ಮಾಡಿಕೊಳ್ಳಲಿ. ಅದನ್ನು ಕಂಡು ಕಣ್ಣುರಿ ಮಾಡಿಕೊಳ್ಳುವ ವ್ಯಕ್ತಿಯಲ್ಲ ನಾನು. ಆದರೆ, ಹೇಗೆ ಗೆದ್ದೆವು? ಎಷ್ಟರಮಟ್ಟಿಗೆ ಅಧಿಕಾರ ದುರ್ಬಳಕೆ ಮಾಡಿಕೊಂಡೆವು ಎನ್ನುವ ಸಣ್ಣ ಆತ್ಮವಿಮರ್ಶೆಯಾದರೂ ಬೇಡವೇ? ಮತದಾನಕ್ಕೆ ಕೆಲ ಗಂಟೆಗಳಷ್ಟೇ ಉಳಿದಿರುವಾಗ ಚನ್ನಪಟ್ಟಣದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಎರಡು ತಿಂಗಳ ₹4,000 ಹಣವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡುತ್ತೀರಿ. ಆಯಾ ತಿಂಗಳಿಗೆ ಸಕಾಲಕ್ಕೆ ಹೋಗಬೇಕಾದ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುವ ದುರುದ್ದೇಶಕ್ಕೆ ಏನೆನ್ನಬೇಕು? ನಿಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿಯೆಬ್ಬಿಸಿದ್ದೀರಿ. ಹಾದಿಬೀದಿಯಲ್ಲಿ ರಾಜ್ಯದ ಮಾನ ಹರಾಜು ಹಾಕುತ್ತಿರುವ ನಿಮಗೆ ಎಳ್ಳಷ್ಟಾದರೂ ಪಾಪಪ್ರಜ್ಞೆ ಬೇಡವೇ? ಈ ಹಣ ಜನರ ತೆರಿಗೆಯ ರಕ್ತದ ಹಣ, ಅದನ್ನು ಮತ್ತೆ ಜನರಿಗೇ ಕೊಡುವಾಗ ಕನಿಷ್ಠ ನೈತಿಕತೆಯಾದರೂ ಬೇಡವೇ? ವೋಟಿಗಾಗಿ ಗ್ಯಾರಂಟಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಹೀನ ರಾಜಕೀಯ ಪ್ರವೃತ್ತಿಯನ್ನು ಮಹಾರಾಷ್ಟ್ರದ ಜನತೆ ಈಗಾಗಲೇ ಧಿಕ್ಕರಿಸಿದ್ದಾರೆ, ನೆನಪಿರಲಿ.

ಶಕುನಿ ರಾಜನೀತಿಗೆ ಹೆದರಿ ಪಲಾಯನ ನನ್ನ ನಡೆಯಲ್ಲ

ನನ್ನ ಕಾರ್ಯಕರ್ತ ಬಂಧುಗಳಿಗೆ ನಾನು ಹೇಳುವುದಿಷ್ಟೇ.., ರಣರಂಗದಲ್ಲಿ ಸೋಲು ಗೆಲುವು ಸಹಜ. ಶಕುನಿ ರಾಜನೀತಿಗೆ ಹೆದರಿ ಪಲಾಯನ ನನ್ನ ನಡೆಯಲ್ಲ. ಹಾಗೆಂದು, ಯಾರಿಗೂ ಸವಾಲು ಹಾಕುವ ಅಗತ್ಯವೂ ಇಲ್ಲ. ನಮ್ಮ ಪಕ್ಷವೇನು? ನಾಯಕತ್ವದ ಬಲವೇನು? ಛಲದಂಕಮಲ್ಲರಾದ ನಿಮ್ಮಗಳ ಶಕ್ತಿಯೇನು? ಎಂಬುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸೋಣ. ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೊರಾಡೋಣ.

ಸತ್ಯಮೇವ ಜಯತೆ ನಮಗೆ ಜಾಹೀರಾತಿನ ಸ್ಲೋಗನ್ ಅಲ್ಲ

ನಾವು ಸತ್ಯದ ಪರವಾಗಿದ್ದೇವೆ. ಸತ್ಯಮೇವ ಜಯತೆ ಎನ್ನುವುದು ನಮ್ಮ ಪಾಲಿಗೆ ಬರೀ ಜಾಹೀರಾತಿನ ಸ್ಲೋಗನ್ ಅಲ್ಲ, ರಾಷ್ಟ್ರಪಿತ ಬಾಪೂಜಿ ಹೇಳಿದ ಸತ್ಯ ಮಾರ್ಗದಲ್ಲಿಯೇ ನಡೆಯೋಣ. ಆ ಮರ್ಯಾದಾ ಪುರುಷೋತ್ತಮ ರಾಮನ ದಾರಿ ನಮ್ಮ ಆದರ್ಶ. ಶ್ರೀಕೃಷ್ಣ ಪರಮಾತ್ಮನ ಸತ್ಯನೀತಿ ನಮ್ಮ ಮುಂಬೆಳಕು. ನಾವು ಯಾರೂ ಧೃತಿಗೆಡಬೇಕಿಲ್ಲ, ನಿಮ್ಮೊಂದಿಗೆ ನಾನಿದ್ದೇನೆ. ಇಡೀ ಪಕ್ಷವೇ ಇದೆ.

ಹೆಗಲಿಗೆ ಹೆಗಲಾಗಿ
ಭೂ ತಾಯಿಗೆ ನೊಗವಾಗಿ
ಜನತಾ ಜನಾರ್ದನನಿಗೆ ಆಳಾಗಿ
ದುಡಿಯೋಣ, ದಣಿವಿಲ್ಲದೆ
ಕಲಿಗಳಾಗಿ ಸಿಡಿಲುಮರಿಗಳಾಗಿ…. ಎಂದು ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಹುರುಪು ತುಂಬಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X