‘ಭಾರತೀಯ ಮುಸ್ಲಿಮರು ಸ್ಥಿತಿವಂತರು’; ನಿರ್ಮಲಾ ಹೇಳಿಕೆಗೆ ವಾಸ್ತವ ಚಿತ್ರಣ ತೆರೆದಿಟ್ಟ ಪತ್ರಕರ್ತರು

Date:

Advertisements
ಭಾರತದಲ್ಲಿ ಮುಸ್ಲಿಂ ಸಮುದಾಯದ ತಪ್ಪು ಚಿತ್ರಣವನ್ನು ಪಾಶ್ಚಾತ್ಯ ಮಾಧ್ಯಮಗಳು ಹರಡುತ್ತಿದ್ದು, ಭಾರತೀಯ ಮುಸ್ಲಿಮರು ಸಮೃದ್ಧವಾಗಿ ಬೆಳೆದಿದ್ದಾರೆ ಎನ್ನುವ ನಿರ್ಮಲಾ ಸೀತಾರಾಮನ್‌ ಹೇಳಿಕೆಗೆ ಪತ್ರಕರ್ತರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆ ವ್ಯಾಪಕವಾಗಿ ವರದಿಯಾಗಿ, ಬಲಪಂಥೀಯರಿಂದ ಪ್ರಶಂಸೆ ಗಳಿಸುತ್ತಿದೆ. ಆದರೆ, ಭಾರತೀಯ ಮುಸ್ಲಿಮರು ಸಮೃದ್ಧರಾಗಿದ್ದಾರೆಂದು ತೋರಿಸಲು ನಿರ್ಮಲಾ ಸೀತಾರಾಮನ್ ಮುಂದಿಟ್ಟಿರುವ ಮಾನದಂಡ ಇದೀಗ ಟೀಕೆಗೆ ಗುರಿಯಾಗಿದೆ. ಅವರ ವಾದ ಸುಳ್ಳೆಂದು ಭಾರತೀಯ ರಾಜಕಾರಣಿಗಳು ಮತ್ತು ಪತ್ರಕರ್ತರೇ ಟ್ವಿಟರ್ ಮೂಲಕ ಉತ್ತರ ನೀಡುತ್ತಿದ್ದಾರೆ.

ನಿರ್ಮಲಾ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಜೊತೆಗೆ ಹೋಲಿಸಿ ಮಾತನಾಡಿದ್ದು, “ಭಾರತದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ 1947ರಿಂದೀಚೆಗೆ ಏರುತ್ತಲೇ ಇದೆ. ಆದರೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಅಲ್ಲಿ ಅಲ್ಪಸಂಖ್ಯಾತರಿಗೆ ಕ್ಷುಲ್ಲಕ ಕಾರಣಗಳಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಧರ್ಮನಿಂದನೆ ಆರೋಪದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದರು.

ವಿಶ್ವಗುರು ಮತ್ತು ಪಾಕಿಸ್ತಾನದ ಹೋಲಿಕೆ ಪ್ರಶ್ನೆ

Advertisements

ನಿರ್ಮಲಾ ಸೀತಾರಾಮನ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪಾಕಿಸ್ತಾನದ ಜೊತೆಗೆ ದೇಶವನ್ನು ಹೋಲಿಸಿರುವುದನ್ನು ಪ್ರಶ್ನಿಸಿದ ಅಸಾದುದ್ದೀನ್ ಒವೈಸಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿ, “ವಿಶ್ವಗುರು ಭಾರತದ ಹಣಕಾಸು ಸಚಿವರ ಮಾನದಂಡ ಪಾಕಿಸ್ತಾನ! ಭಾರತದ ಮುಸ್ಲಿಮರು ಸಂಘ ಪರಿವಾರದ ಸಂವಿಧಾನ ವಿರೋಧಿ ಸಿದ್ಧಾಂತಗಳ ಹೊರತಾಗಿಯೂ ಸ್ವಯಂ ಶ್ರಮದಿಂದ ಅಭಿವೃದ್ಧಿ ಹೊಂದಿದ್ದಾರೆ; ಸಂಘ ಪರಿವಾರದಿಂದಾಗಿ ಅಲ್ಲ” ಎಂದು ಹೇಳಿದ್ದಾರೆ. ಅಲ್ಲದೆ ಸರಣಿ ಟ್ವೀಟ್‌ಗಳಲ್ಲಿ ನಿರ್ಮಲಾ ಅವರ ಹೇಳಿಕೆಯ ವಾಸ್ತವವನ್ನು ಪ್ರಶ್ನಿಸಿದ್ದಾರೆ. 

ನಿರ್ಮಲಾ ಸೀತಾರಾಮನ್ ಅವರು, “ಭಾರತದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಪಾಶ್ಚಾತ್ಯ ಕಲ್ಪನೆ ನಕಾರಾತ್ಮಕವಾಗಿರುವುದು ವಿದೇಶಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹೂಡಿಕೆದಾರರು ಇತರರ ಗ್ರಹಿಕೆ ಮತ್ತು ಅಭಿಪ್ರಾಯಗಳನ್ನು ಕೇಳುವ ಬದಲಾಗಿ, ಸ್ವತಃ ದೇಶಕ್ಕೆ ಭೇಟಿ ನೀಡಿ ಮುಸ್ಲಿಮರು ಎಷ್ಟು ಸಮೃದ್ಧವಾಗಿ ನೆಲೆಸಿದ್ದಾರೆ ಎನ್ನುವುದನ್ನು ಗಮನಿಸಬೇಕು. ಭಾರತಕ್ಕೆ ಭೇಟಿ ಕೊಡದವರೂ ಇಲ್ಲಿನ ಮುಸ್ಲಿಂ ಸಮುದಾಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ” ಎಂದು ಹೇಳಿದ್ದರು.

ಅವರ ಮಾತಿಗೆ ಪ್ರತಿಕ್ರಿಯೆಯಾಗಿ ಪತ್ರಕರ್ತೆ ರಾಣಾ ಅಯ್ಯೂಬ್, “ಭಾರತದ ಆಡಳಿತ ಸರ್ಕಾರದಲ್ಲಿ ಸ್ವಾತಂತ್ರ್ಯಾನಂತರ ಮೊತ್ತ ಮೊದಲ ಬಾರಿಗೆ ಮುಸ್ಲಿಂ ಸಂಸದರಿಲ್ಲ” ಎನ್ನುವ ವಿವರವಿರುವ ದಿನಪತ್ರಿಕೆಯ ಸುದ್ದಿಯ ಸ್ಕ್ರೀನ್ ಶಾಟ್ ಲಗತ್ತಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರಿಗೆ ವಾಸ್ತವ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಪಾಶ್ಚಾತ್ಯ ಪತ್ರಿಕೆಯೆಂದು ನಿರ್ಮಲಾ ಉಲ್ಲೇಖಿಸಿರುವ ಪತ್ರಿಕೆಗಳಲ್ಲಿ ಒಂದಾಗಿರುವ ‘ಗಾರ್ಡಿಯನ್’ ಪತ್ರಿಕೆಯ ಬರಹಗಾರ ಕೌಶಿಕ್ ರಾಜ್ ಪ್ರತಿಕ್ರಿಯಿಸಿ, ಅಮಾನತು ಹೊಂದಿರುವ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಮಾಡಿರುವ ಕೋಮುವಾದಿ ಭಾಷಣದ ತುಣುಕನ್ನು ನಿರ್ಮಲಾ ಸೀತಾರಾಮನ್‌ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. “ಭಾರತದ ಮುಸ್ಲಿಮರು ಅತ್ಯುತ್ತಮ ಅವಧಿಯನ್ನು ಕಳೆಯುತ್ತಿದ್ದಾರೆ ಎಂದು ತೋರಿಸಲು ನಿರ್ಮಲಾ ಅವರು ಇಂತಹ ಭಾಷಣದ ತುಣುಕುಗಳನ್ನು ವಿಶ್ವಮಟ್ಟದ ವೇದಿಕೆಗಳಲ್ಲಿ ಹಂಚಬೇಕು” ಎಂದು ಅವರು ತಮ್ಮ ಟ್ವೀಟ್ ಜೊತೆಗೆ ಬರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸುದ್ದಿವಿವರ | ‘ಡಿಜಿಟಲ್ ಕೊಲೆ’ಗೆ ಹಕ್ಕು ನೀಡುವ ಏಕಪಕ್ಷೀಯ ಫ್ಯಾಕ್ಟ್‌ಚೆಕ್ ವಿಭಾಗ

ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರಿಗೆ ಭದ್ರತೆ

ವಾಷಿಂಗ್ಟನ್ ಡಿಸಿಯಲ್ಲಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಪೀಟರ್ಸನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮಾತನಾಡಿದ ನಿರ್ಮಲಾ, “ಪಾಕಿಸ್ತಾನದ ವಿಷಯಕ್ಕೇ ಬಂದರೆ, ಅದು ಭಾರತದ ಜೊತೆಗೇ ಹುಟ್ಟಿಕೊಂಡರೂ ಇಸ್ಲಾಮಿಕ್ ದೇಶವಾಯಿತು. ಅಲ್ಪಸಂಖ್ಯಾತರನ್ನು ರಕ್ಷಿಸುತ್ತೇವೆ ಎಂದು ಹೇಳಿದ ಮಾತು ಸುಳ್ಳಾಯಿತು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಇಳಿಮುಖವಾಗುತ್ತಲೇ ಹೋಗಿದೆ. ಕೆಲವೊಂದು ಮುಸ್ಲಿಂ ವರ್ಗವನ್ನೂ ದಮನಿಸಲಾಗಿದೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ” ಎಂದು ನಿರ್ಮಲಾ ಹೇಳಿದ್ದರು.

ಮುಂದುವರಿದು, “ಪಾಕಿಸ್ತಾನದಲ್ಲಿ ಮುಜಾಹಿರರು ಮತ್ತು ಶಿಯಾ ಮತ್ತು ಮುಖ್ಯವಾಹಿನಿಯಲ್ಲಿ ಒಪ್ಪಿಕೊಳ್ಳಲಾಗದ ಪ್ರತೀ ಎರಡನೇ ವ್ಯಕ್ತಿಯ ಮೇಲೆ ಹಿಂಸೆಯಾಗುತ್ತಿದೆ. ಆದರೆ ಭಾರತದಲ್ಲಿ ಮುಸ್ಲಿಂ ಸಮುದಾಯದ ಪ್ರತೀ ಎಳೆಯೂ ಉದ್ಯಮ ಮಾಡುತ್ತಿದೆ. ಅವರ ಮಕ್ಕಳು ಶಿಕ್ಷಿತರಾಗಿದ್ದಾರೆ. ಸರ್ಕಾರ ಅವರಿಗೆ ಫೆಲೋಶಿಪ್ ಕೊಡುತ್ತಿದೆ. ಹೀಗಾಗಿ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹಿಂಸೆಯಾಗುತ್ತಿದೆ ಎನ್ನುವುದು ಸುಳ್ಳು ನಿರೂಪಣೆ. ಸರ್ಕಾರದ ಮೇಲಿನ ಆರೋಪ ನಿಜವಾದರೆ, 2014ರ ನಂತರ ಮುಸ್ಲಿಂ ಸಮುದಾಯದ ಸಂಖ್ಯೆ ಕಡಿಮೆಯಾಗಿದೆಯೆ? ಒಂದು ಸಮುದಾಯದಲ್ಲಿ ಮರಣ ಅತಿಯಾಗಿರುವ ಉದಾಹರಣೆ ಇದೆಯೆ? ಭಾರತದ ಬಗ್ಗೆ ವರದಿ ಬರೆಯುವವರಿಗೆ ನಾನೇ ಆತಿಥ್ಯ ನೀಡುತ್ತೇನೆ. ಭಾರತಕ್ಕೆ ಬಂದು ನನ್ನ ಮಾತು ಸುಳ್ಳೆಂದು ಸಾಬೀತುಮಾಡಲಿ” ಎಂದು ನಿರ್ಮಲಾ ವಾದಿಸಿದ್ದರು.

ಭಾರತೀಯ ಮುಸ್ಲಿಮರ ಸಂಖ್ಯೆ ಕುಸಿತ

ನಿರ್ಮಲಾ ಸೀತಾರಾಮನ್ ಅವರ ಭಾರತೀಯ ಮುಸ್ಲಿಮರ ಸಂಖ್ಯೆ ಹೆಚ್ಚಳ ವಾದಕ್ಕೆ ಪ್ರತಿಕ್ರಿಯೆಯಾಗಿ ‘ದಿ ವೈರ್‌’ ವೆಬ್‌ತಾಣ ಪ್ರಕಟಿಸಿದ ವಿಶ್ಲೇಷಣಾತ್ಮಕ ಲೇಖನದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ವಿಪರೀತ ಹೆಚ್ಚಾಗಿಲ್ಲ ಎನ್ನುವ ವಿವರ ನೀಡಲಾಗಿದೆ. “2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಶೇ 96.62 ಕೋಟಿ ಜನಸಂಖ್ಯೆಯಲ್ಲಿ ಹಿಂದುಗಳ ಪ್ರಮಾಣ ಶೇ. 79.80ರಷ್ಟಿದ್ದರೆ, ಮುಸ್ಲಿಮರ ಪ್ರಮಾಣ ಶೇ. 14.23ರಷ್ಟು ಎನ್ನುವುದು ತಿಳಿದುಬಂದಿದೆ. ಮುಂದಿನ ಜನಗಣತಿಯ ಹೊತ್ತಿಗೆ ಮುಸ್ಲಿಂ ಜನಸಂಖ್ಯೆ ಇಳಿಮುಖವಾಗಲಿದೆ ಎಂದು ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮದ ಮಾಜಿ ಅಧ್ಯಕ್ಷ ದೇವೇಂದ್ರ ಕೊಠಾರಿ ಹೇಳಿದ್ದರು” ಎಂದು ವೆಬ್‌ತಾಣ ವಿವರ ನೀಡಿದೆ.

“ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮುಂದಿನ ಜನಗಣತಿಯಲ್ಲಿ ಹಿಂದೂಗಳ ಸಂಖ್ಯೆ ಶೇ. 80.3ಕ್ಕೆ ಏರಬಹುದು ಮತ್ತು ಮುಸ್ಲಿಂ ಸಮುದಾಯದ ಪ್ರಮಾಣ ಇಳಿಯಲಿದೆ. 1952ರಲ್ಲಿ ಶೇ 9.8ರಷ್ಟಿದ್ದ ಮುಸ್ಲಿಮರ ಪ್ರಮಾಣ 2011ರಲ್ಲಿ ಶೇ 14.21ಕ್ಕೆ ಏರಿದೆ. ಅಂದರೆ ಕಳೆದ 60 ವರ್ಷಗಳಲ್ಲಿ ಅವರ ಪ್ರಮಾಣ ಶೇ 4.4ರಷ್ಟು ಮಾತ್ರವೇ ಏರಿಕೆಯಾಗಿದೆ” ಎಂದು ಕೊಠಾರಿ ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X