- ‘ಬಿಜೆಪಿಯಲ್ಲಿ ಅಸಮಾಧಾನ ಇರುವುದರಿಂದ ಪ್ರತಿಪಕ್ಷದ ನಾಯಕರ ಆಯ್ಕೆ ಆಗಿಲ್ಲ’
- ಹುಬ್ಬಳ್ಳಿಯಲ್ಲಿ ಡಿಕೆಶಿ ಸ್ವಾಗತಿಸಲು ಧಾರವಾಡ ಜಿಲ್ಲೆಯ ಒಬ್ಬ ಶಾಸಕ ಮಾತ್ರ ಆಗಮನ
ಕಾಂಗ್ರೆಸ್ಸಿನಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಆದರೆ, ಬಿಜೆಪಿಯಲ್ಲಿ ಅಸಮಾಧಾನ ಇರುವುದರಿಂದಲೇ ಈವರೆಗೂ ವಿರೋಧ ಪಕ್ಷದ ನಾಯಕರ ಆಯ್ಕೆ ಆಗಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿಯಲ್ಲಿ ಮತ್ತು ಅವರ ನಾಯಕರಲ್ಲಿ ಅಸಮಾಧಾನವಿದೆ. ದೇಶದ, ರಾಜ್ಯದ ಇತಿಹಾಸದಲ್ಲಿ ಸರ್ಕಾರ ರಚನೆ ಆಗಿ ಐದು ತಿಂಗಳು ಕಳೆದರೂ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವ ಸಾಮರ್ಥ್ಯ ಇಲ್ಲ” ಎಂದು ಟೀಕಿಸಿದರು.
“ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ. ಈಗಾಗಲೇ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅವರೆಲ್ಲ ಶೇ.75 ಕ್ಷೇತ್ರಕ್ಕೆ ಹೋಗಿ ಸ್ಥಳೀಯ ಶಾಸಕರನ್ನು, ಕಾರ್ಯಕರ್ತರುಗಳನ್ನು ಭೇಟಿಯಾಗಿ ಬಂದಿದ್ದಾರೆ. ಅವರೆಲ್ಲರೂ ಈಗಾಗಲೇ ವರದಿ ಸಲ್ಲಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ” ಎಂದರು.
“ನಮ್ಮ ಹೈಕಮಾಂಡ್ ಕೂಡ ಕೆಲವು ಸಲಹೆ ನೀಡಿದೆ. ಹೊಸ ಮುಖ, ವಾಕ್ಚಾತುರ್ಯ, ಯುವಕರು ಸೇರಿ ಹಲವು ಮಾನದಂಡಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ವರದಿ ಸಿದ್ಧವಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ತಲೆಯೆತ್ತಿದೆ ಫೋನ್ ಬೇಹುಗಾರಿಕೆ ಭೂತ!
ಡಿಕೆಶಿ ಸ್ವಾಗತಕ್ಕೆ ಶಾಸಕರ ಗೈರು
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಧಾರವಾಡ ಜಿಲ್ಲೆಯ ಕೇವಲ ಒಬ್ಬ ಶಾಸಕ ಮಾತ್ರ ಬಂದಿದ್ದರು. ಉಳಿದ ಶಾಸಕರು ಕಾಣಲಿಲ್ಲ. ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕಲಘಟಗಿ ಶಾಸಕ ಸಂತೋಷ ಲಾಡ್, ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಗೈರಾಗಿದ್ದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತ್ರ ಆಗಮಿಸಿದ್ದರು. ಧಾರವಾಡ ಶಾಸಕ ವಿನಯ ಕುಲಕರ್ಣಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯೊಳಗೆ ಪ್ರವೇಶಿಸುವಂತಿಲ್ಲ.