ಒಂದು ವರ್ಷ ಕಳೆದರೂ ಮಣಿಪುರದಲ್ಲಿ ಶಾಂತಿ ನೆಲೆಸಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯಕ್ಕೆ ಆದ್ಯತೆ ನೀಡಬೇಕು” ಎಂದು ಹೇಳಿದ್ದಾರೆ.
ಇಲ್ಲಿನ ರೇಶಿಂಬಾಗ್ನ ಡಾ.ಹೆಡಗೇವಾರ್ ಸ್ಮೃತಿ ಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತ ವಿಕಾಸ ವರ್ಗ-ದ್ವಿತೀಯದ ಸಮಾರೋಪ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪ್ರಶಿಕ್ಷಣಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಂಘರ್ಷ ಒಳ್ಳೆಯದಲ್ಲ ಎಂದಿದ್ದಾರೆ.
“ದೇಶದ ಎಲ್ಲಾ ಸಮುದಾಯಗಳ ನಡುವೆ ಏಕತೆ ಇರಬೇಕು. ಸಮಾಜ ವೈವಿಧ್ಯಮಯವಾಗಿದ್ದರೂ ಜನರು ನಾವೆಲ್ಲ ಒಂದೇ ಮತ್ತು ಪ್ರತ್ಯೇಕವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಚುನಾವಣೆಯ ವಾಕ್ಚಾತುರ್ಯದಿಂದ ಹೊರಬಂದು ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಹರಿಸುವ ಅಗತ್ಯವಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ| ಪೊಲೀಸ್ ಠಾಣೆ, ಅರಣ್ಯ ಕಚೇರಿಗೆ ಬೆಂಕಿ; ಸುಟ್ಟು ಕರಕಲು
“ಕಳೆದ ಒಂದು ವರ್ಷದಿಂದ ಮಣಿಪುರ ಶಾಂತಿಗಾಗಿ ಕಾಯುತ್ತಿದೆ. ಮಣಿಪುರದಲ್ಲಿ 10 ವರ್ಷಗಳ ಹಿಂದೆ ಶಾಂತಿ ನೆಲೆಸಿತ್ತು. ಅಲ್ಲಿಗೆ ಬಂದೂಕು ಸಂಸ್ಕೃತಿ ಮುಗಿದಂತೆ ಭಾಸವಾಯಿತು. ಆದರೆ ರಾಜ್ಯವು ಇದ್ದಕ್ಕಿದ್ದಂತೆ ಹಿಂಸಾಚಾರವನ್ನು ಕಂಡಿದೆ” ಎಂದರು.
“ಮಣಿಪುರದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು. ಚುನಾವಣಾ ವಾಕ್ಚಾತುರ್ಯದಿಂದ ಹೊರಬಂದು ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ” ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮಕಾಡೆ ಮಲಗಿದ ಬಿಜೆಪಿ
ಕಳೆದ ವರ್ಷ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರ ಆರಂಭವಾಗಿದೆ. ಅಂದಿನಿಂದ, ಸುಮಾರು 200ಕ್ಕೂ ಅಧಿಕ ಜನರ ಕೊಲೆಯಾಗಿದೆ. ಸಾವಿರಾರು ಕಟ್ಟಡಗಳನ್ನು ಸುಡಲಾಗಿದೆ, ನೆಲಸಮ ಮಾಡಲಾಗಿದೆ.
ಜನರು ಸ್ಥಳಾಂತರಗೊಂಡು ನಿರಾಶ್ರಿತ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಜಿರಿಬಾಮ್ನಿಂದ ಹೊಸ ಹಿಂಸಾಚಾರ ವರದಿಯಾಗಿದೆ. ಆದರೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡದೆ ಟೀಕೆಗೆ ಒಳಗಾಗಿದ್ದಾರೆ.