- ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಮಹಾ ನಿರ್ಧಾರ ಸಮಾವೇಶ ಉದ್ಘಾಟಿಸಿದ ಸಿಎಂ
- ‘ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕು’
ಭಾರತದ ದೀನದಲಿತರ, ಬಡವರ ಏಳಿಗೆಗಾಗಿ, ಭ್ರಷ್ಟಾಚಾರ ನಿಗ್ರಹಕ್ಕಾಗಿ ಹಾಗೂ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುವ ಸಲುವಾಗಿ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಬರಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮಹಾ ನಿರ್ಧಾರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, “ಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದಂತೆ, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಹೋರಾಡಬೇಕು. ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕು” ಎಂದರು.
ಅಚ್ಛೇ ದಿನ್ ಆಯೆಂಗೆ ಮಾತು ಸುಳ್ಳಾಯಿತು
“40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ವಿದೇಶದಲ್ಲಿ ಕಪ್ಪುಹಣವನ್ನು ತಂದು, ದೇಶದ ಪ್ರತಿಯೊಬ್ಬರಿಗೂ 15 ಲಕ್ಷ ನೀಡುತ್ತೇವೆಂಬ ಅವರ ಮಾತು ಸುಳ್ಳಾಯಿತು. 9 ವರ್ಷದಲ್ಲಿ 18 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಹೊಸ ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ. ಅವರ ಅಚ್ಛೇ ದಿನ್ ಆಯೆಂಗೆ ಎಂಬ ಮಾತು ಹೇಳಿದ್ದರು. ಇಂದು ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಕಬ್ಬಿಣ, ಸಿಮೆಂಟು, ಆಹಾರ ಪದಾರ್ಥಗಳೂ ಸೇರಿದಂತೆ ಎಲ್ಲದರ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿಯವರು ನ ಖಾವೋಂಗ, ನ ಖಾನೆದೂಂಗ ಎಂದರು. ಆದರೆ ಕರ್ನಾಟಕದಲ್ಲಿ 40% ಭ್ರಷ್ಟಾಚಾರ ರಾರಾಜಿಸಿತು. ಆ ಮಾತು ಏನಾಯಿತು” ಎಂದು ಪಶ್ನಿಸಿದರು.
ಸಂವಿಧಾನ ರಕ್ಷಣೆಯ ಹೋರಾಟಕ್ಕೆ ಸಿದ್ಧರಾಗಬೇಕು
“ಸಾಂಗ್ಲಿ ಜಿಲ್ಲೆ ಕಾಂಗ್ರೆಸ್ನ ಭದ್ರ ಕೋಟೆಯಾಗಿದ್ದು, ಪ್ರಮುಖ ರಾಷ್ಟ್ರನಾಯಕರನ್ನು ದೇಶಕ್ಕೆ ನೀಡಿದೆ. ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರ್ತೃ. ಈ ಸಂವಿಧಾನವಿರದಿದ್ದರೆ ಸಮಾಜದ ಶೋಷಿತರು, ದೀನದಲಿತರು, ಅಲ್ಪಸಂಖ್ಯಾತರೂ ದೇಶದ ರಾಜಕಾರಣದಲ್ಲಿ, ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರಿಗೂ ಸಮಾನತೆಯನ್ನು ಬೋಧಿಸುವ ಸಂವಿಧಾನ ಸಮಸಮಾಜದ ನಿರ್ಮಾಣಕ್ಕೆ ಒತ್ತು ನೀಡುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು ನಮ್ಮ ಸಂವಿಧಾನ ಒದಗಿಸಿಕೊಟ್ಟಿದೆ. ಕಾಂಗ್ರೆಸ್ಸಿಗರು ಸಂವಿಧಾನವನ್ನು ಬದಲಾಯಿಸಲು ಬಿಡಬಾರದು ಎಂಬ ಶಪಥ ಮಾಡಬೇಕು. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು. ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ನನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಬಡವರು ಹಸಿವಿನಿಂದ ಸಾಯಲಿ ಎಂದು ಕೇಂದ್ರ ಅಕ್ಕಿ ಕೊಡುತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ
ಭಾಜಪ ಎಂದಿಗೂ ಬಡವರಪರ ಕೆಲಸವನ್ನು ಮಾಡಿಲ್ಲ
“ಕೋಮುವಾದಿ ಭಾರತೀಯ ಜನತಾ ಪಕ್ಷ ಸಂವಿಧಾನವನ್ನು ವಿರೋಧಿಸುತ್ತದೆ. ಸಾವರ್ಕರ್, ಗೋಲ್ವಾಳ್ಕರ್ ಅವರು ಸಂವಿಧಾನವನ್ನು ಅಂದೇ ವಿರೋಧಿಸಿದ್ದರು. ಧರ್ಮಗಳ ನಡುವೆ ಸಂಘರ್ಷಗಳಿಂದ ರೈತರು, ದೀನದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವಂತಾಗಿದೆ. ಸಂಘ ಪರಿವಾರದವರು ಈ ಕೆಲಸವನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತದಲ್ಲಿದ್ದು, ಅವರನ್ನು ಕಿತ್ತೊಗೆಯಬೇಕಾದ ಜವಾಬ್ದಾರಿ ಕಾಂಗ್ರೆಸ್ನ ಮೇಲಿದೆ. ಪ್ರಜಾತಂತ್ರದ ರಕ್ಷಣೆಗಾಗಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಾವೆಲ್ಲರೂ ಸಿದ್ದಗೊಳ್ಳಬೇಕಿದೆ. ಆಪರೇಷನ್ ಕಮಲದ ಮೂಲಕ 2008 ಹಾಗೂ 2018 ರಲ್ಲಿ ಅಧಿಕಾರಕ್ಕೆ ಬಂದಿತು. ಭಾಜಪ ಎಂದರೆ ಭ್ರಷ್ಟಾಚಾರ. ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘ 40% ಭ್ರಷ್ಟಾಚಾರದ ಸರ್ಕಾರ ಎಂದು ಕರೆಯಿತು. ಭಾಜಪ ಎಂದಿಗೂ ಬಡವ ಪರ ಕೆಲಸ ಮಾಡಿಲ್ಲ” ಎಂದರು.
ಮೋದಿಯವರ ಜನಪ್ರಿಯತೆ ಮಸುಕಾಗುತ್ತಿದೆ
“ಕರ್ನಾಟಕದಲ್ಲಿರುವ ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3 ಸಾವಿರ ರೂ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರೂ.ಗಳನ್ನು 24 ತಿಂಗಳವರೆಗೆ ನೀಡುವ ಯುವಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಲು ಪ್ರಧಾನಿ ಮೋದಿಯವರು ಹಾಗೂ ಕೇಂದ್ರ ಮಂತ್ರಿಮಂಡಲದ ಅನೇಕರು ರಾಜ್ಯಕ್ಕೆ ಭೇಟಿ ನೀಡಿದರು. ಆದರೂ ಕರ್ನಾಟಕದಲ್ಲಿ ಭಾಜಪ ಸೋತಿರುವುದು ನರೇಂದ್ರ ಮೋದಿಯವರ ಜನಪ್ರಿಯತೆ ಮಸುಕಾಗುತ್ತಿದೆ ಎಂಬುದನ್ನು ಸಂಕೇತಿಸುತ್ತಿದೆ. ರಾಜ್ಯದ ಭಾಜಪ ಭ್ರಷ್ಟಾಚಾರದಲ್ಲಿ ಮುಳುಗಿ, ಜನವಿರೋಧಿಯಾಗಿತ್ತು. ಕೇವಲ ಪ್ರಧಾನಿ ಮೋದಿಯವರನ್ನು ನಂಬಿ ಚುನಾವಣೆ ಗೆಲ್ಲಬಹುದೆಂಬ ಭಾಜಪದ ನಂಬಿಕೆ ಹುಸಿಯಾಯಿತು” ಎಂದರು.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಾಸಕಾಂಗ ಪಕ್ಷದ ನಾಯಕ ಬಾಳಾ ಸಾಹೇಬ್ ತೋರತ್, ಕೇಂದ್ರದ ಮಾಜಿ ಸಚಿವ ಪೃಥ್ವಿರಾಜ್ ಚೌಹಾಣ್, ಶಾಸಕರಾದ ವಿಕ್ರಂ ಸಾವಂತ್, ವಿಶ್ವಜಿತ್ ಕದಂ ಇತರರು ಹಾಜರಿದ್ದರು.