ನಮ್ಮ ಸಚಿವರು | ಮೌಢ್ಯವನ್ನು ಮೆಟ್ಟಿ ಗೆಲ್ಲುತ್ತಿರುವ ಸತೀಶ್ ಜಾರಕಿಹೊಳಿ

Date:

Advertisements

32 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹಾಗೂ ನಾಲ್ಕು ಬಾರಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಪ್ರಭಾವಿ ರಾಜಕೀಯ ಮುಖಂಡ. ಸಕ್ಕರೆ ಉದ್ಯಮದಲ್ಲಿ ಹಾಗೂ ರಾಜಕೀಯದಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಮೂಢನಂಬಿಕೆಗಳ ವಿರುದ್ಧ ಮುಕ್ತವಾಗಿ ಮಾತನಾಡುವ ಸ್ವಭಾವ ಮತ್ತು ಮೌಢ್ಯ ವಿರೋಧಿ ಕ್ರಿಯೆಗಳಿಗೆ ಹೆಸರಾದವರು.

‘ಮಾನವ ಬಂಧುತ್ವ ವೇದಿಕೆ’ ಎಂಬ ಸಂಘಟನೆ ಕಟ್ಟಿರುವ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಮೌಢ್ಯದ ವಿರುದ್ಧ ನಾನಾ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದೆಲ್ಲದರ ಭಾಗವಾಗಿ, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ರಾಹುಕಾಲದಲ್ಲಿ ಅವರು ನಾಮಪತ್ರ ಸಲ್ಲಿಸಿದ್ದರು. ನಂತರ ಚುನಾವಣೆಯಲ್ಲಿ ಗೆದ್ದ ಅವರು ಈಗ ಮಂತ್ರಿಯೂ ಆಗಿದ್ದಾರೆ. ಯಾವುದೇ ಗಳಿಗೆ-ಕಾಲ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಕುಟುಂಬದಲ್ಲಿ ಹುಟ್ಟಿದ ಸತೀಶ್‌ ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಅವರು ಮಾತ್ರವಲ್ಲದೆ, ಅವರ ನಾಲ್ವರು ಸಹೋದರರೂ ಕೂಡ ರಾಜಕೀಯದಲ್ಲಿದ್ದಾರೆ. ಅವರ ಅಣ್ಣ ರಮೇಶ್‌ ಜಾರಕಿಹೊಳಿ ಆಪರೇಷನ್‌ ಕಮಲಕ್ಕೆ ಬಲಿಯಾಗಿ, ಬಿಜೆಪಿ ಸೇರಿದ್ದಾರೆ. ಅವರು ಗೋಕಾಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

Advertisements

ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಸತೀಶ್ ಜಾರಕಿಹೊಳಿ 1999ರಲ್ಲಿ ಜನತಾ ದಳದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು. 1998 ರಿಂದ 2008ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದರು. ಆಗ ರಚನೆಯಾದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಧರಂಸಿಂಗ್‌ ನೇತೃತ್ವದ ಸಚಿವ ಸಂಪುಟದಲ್ಲಿ ಜವಳಿ ಖಾತೆ ಪಡೆದು, ಮೊದಲ ಬಾರಿಗೆ ಮಂತ್ರಿಯಾದರು.

ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ 2006ರಲ್ಲಿ ಕಾಂಗ್ರೆಸ್‌ ಸಖ್ಯ ತೊರೆದ ಎಚ್‌.ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಿದ್ದರಾಮಯ್ಯ ವಿರೋಧಿಸಿದರು. ಅವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಯಿತು. ಆ ವೇಳೆ, ಸಿದ್ದರಾಮಯ್ಯ ಜೊತೆ ಜೆಡಿಎಸ್‌ ತೊರೆದ ಸತೀಶ್‌ ಜಾರಕಿಹೊಳಿ, ತಮ್ಮ ತತ್ವ ಮತ್ತು ಸಿದ್ದಾಂತಗಳಿಗೆ ತಾವು ನಿಷ್ಠೆಯಿಂದ ಇದ್ದೇವೆಂಬುದನ್ನು ಸಾಬೀತುಪಡಿಸಿದರು. ನಂತರ, 2007ರಲ್ಲಿ ಕಾಂಗ್ರೆಸ್‌ ಸೇರಿದರು.

2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, 46,132 ಮತಗಳನ್ನು ಪಡೆದು ಯಮಕನಮರಡಿ ಎಸ್‌ಸಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಬಳಿಕ 2013ರಲ್ಲಿ ಬಿಜೆಪಿ ಅಭ್ಯರ್ಥಿ ಮಾರುತಿ ಮಲ್ಲಪ್ಪ ವಿರುದ್ಧ 24,350 ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾದರು. 2013ರಿಂದ 2015ರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿಯೂ, 2015 ರಿಂದ 2018ರವರೆಗೆ ಸಣ್ಣ ಕೈಗಾರಿಕಾ ಸಚಿವರೂ ಆಗಿದ್ದರು.

2018ರ ಚುನಾವಣೆಯಲ್ಲಿ 73,512 ಮತಗಳನ್ನು ಪಡೆದು ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಡಿಸೆಂಬರ್ 2018 ರಿಂದ ಜುಲೈ 2019ರವರೆಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅರಣ್ಯ, ಪರಿಸರ ಖಾತೆಯನ್ನು ನಿಭಾಯಿಸಿದ್ದರು. 2021ರ ಜನವರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ ನೇಮಕಗೊಂಡರು.

ಇದೀಗ, 2023ರಲ್ಲಿ ಬರೋಬ್ಬರಿ 57,211 ಮತಗಳ ಅಂತರದಿಂದ ಗೆಲುವು ಸಾಧಿಸಿ ಐದನೇ ಬಾರಿಗೆ ಗೆದ್ದು, ನಾಲ್ಕನೇ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಲೋಕೋಪಯೋಗಿ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ.

ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ವಿರುದ್ಧ ಸತೀಶ್‌ ಜಾರಕಿಹೊಳಿ ಸ್ಪರ್ಧಿಸಿದ್ದರು. 5,240 ಮತಗಳಿಂದ ಮೊದಲ ಸೋಲು ಅನುಭವಿಸಿದ್ದರು.

ಮೌಢ್ಯಕ್ಕೆ ವಿರೋಧ, ಅಂತರ್ಜಾತಿ ಮದುವೆಗೆ ಬೆಂಬಲ

ರಾಜ್ಯ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ ಅವರು ಮೌಢ್ಯವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಮಶಾನದಲ್ಲಿ ನಾನಾ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವುದು, ಸ್ಮಶಾನದಿಂದ ಪ್ರಚಾರ ಆರಂಭಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ನಮ್ಮ ಸಚಿವರು | ಕರ್ನಾಟಕ – ಕೇರಳಕ್ಕೂ ಇದೆ ಹಲವು ರಾಜಕೀಯ ನಂಟು; ಅದು ಕೆ ಜೆ ಜಾರ್ಜ್‌ಗೂ ಉಂಟು

ತಮ್ಮ ರಾಜಕೀಯ ಜೀವನದುದ್ದಕ್ಕೂ ಸತೀಶ್ ಜಾರಕಿಹೊಳಿ ತಮ್ಮ ಕ್ಷೇತ್ರ ಮತ್ತು ಸುತ್ತಮುತ್ತಲಿನ ಜನರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಮೂಢನಂಬಿಕೆಗಳ ವಿರುದ್ಧ ಹೋರಾಡುವ ಅವರ ಪ್ರಯತ್ನದಲ್ಲಿ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದಂದು ಸ್ಮಶಾನದಲ್ಲಿ ರಾತ್ರಿಗಳನ್ನು ಕಳೆದಿದ್ದಾರೆ. ಹಾಗೆಯೇ ತಮ್ಮ ಮಾನವ ಬಂಧುತ್ವ ವೇದಿಕೆ ಮೂಲಕ ಅನೇಕ ಅಂತರ್ಜಾತಿ ಮದುವೆಗಳನ್ನು ಮಾಡಿಸಿರುವ ಶ್ರೇಯಸ್ಸು ಕೂಡ ಅವರಿಗೆ ಸಲ್ಲುತ್ತದೆ.

ಶ್ರೀಮಂತ ಸಚಿವರಲ್ಲಿ ಒಬ್ಬರು

ಚುನಾವಣೆ ಸ್ಪರ್ಧೆ ವೇಳೆ ತಮ್ಮ ಬಳಿ ಒಟ್ಟು ₹175 ಕೋಟಿ ಆಸ್ತಿ ಇರುವುದಾಗಿ ಸಚಿವರು ಹೇಳಿಕೊಂಡಿದ್ದರು. ಇವರು ಕೂಡ ಸಂಪುಟದಲ್ಲಿರುವ ಶ್ರೀಮಂತ ಸಚಿವರಲ್ಲಿ ಒಬ್ಬರಾಗಿದ್ದಾರೆ. ಬೆಳಗಾವಿ ಅತಿ ಹೆಚ್ಚು ಕಬ್ಬು ಬೆಳೆಯುವ ಹಾಗೂ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ಪ್ರದೇಶ. ಅದೇ ಪ್ರದೇಶ ಪ್ರತಿನಿಧಿಸುವ, ಸ್ವತಃ ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವ ಸತೀಶ್ ಜಾರಕಿಹೊಳಿ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆನ್ನುವ ಅಸಮಾಧಾನ ರೈತರಲ್ಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X