ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್ವೈ, “ತಾಯಿ ಮಗಳು ತೊಂದರೆಯಲ್ಲಿದ್ದೇವೆ ಎಂದು ಹೇಳುತ್ತಾ ಕಣ್ಣೀರು ಹಾಕಿಕೊಂಡು ಬಂದಿದ್ದರು. ಅವರಿಗೆ ಸಹಾಯ ಮಾಡಿದೀನಿ. ಆದರೆ, ಈಗ ಈ ರೀತಿ ದೂರು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ಮನೆಯ ಬಳಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ, “ನನ್ನ ಮೇಲೆ ಯಾರೋ ಒಬ್ಬ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಯಾರೋ ತಾಯಿ ಮಗಳು ಒಂದು ತಿಂಗಳ ಹಿಂದೆ ನನ್ನ ಹತ್ತಿರ ಬಂದಿದ್ದರು. ಅವರು ಅವತ್ತು ನನಗೆ ಅನ್ಯಾಯ ಆಗಿದೆ ಅಂತ ಹೇಳಿದ್ದರು. ಹಲವೊಮ್ಮೆ ಬಂದು ಮನೆ ಬಳಿ ಕಾಯುತ್ತಿದ್ದರು. ಒಮ್ಮೆ ಕಣ್ಣೀರು ಹಾಕುತ್ತಿದ್ದುದನ್ನು ನೋಡಿ, ಮನೆಯೊಳಗೆ ಕರೆದೊಯ್ದೆ. ಏನು ಸಮಸ್ಯೆ ಎಂದು ಆಲಿಸಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಫೋನ್ ಮಾಡಿ ಇವರ ಸಮಸ್ಯೆ ಬಗೆಹರಿಸಲು ಹೇಳಿದ್ದೆ. ಅಲ್ಲೇ, ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದ್ದರು” ಎಂದು ಹೇಳಿದರು.
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ | ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?#BSYediyurappa #pocsoact #pocsocase @BJP4Karnataka @BSYBJP @INCKarnataka @JanataDal_S @CPBlr pic.twitter.com/AyHeX1ZIOC
— eedina.com (@eedinanews) March 15, 2024
“ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದಾಗ ಏನೋ ಆರೋಗ್ಯ ಸಮಸ್ಯೆ ಇದೆ ಅಂತ ಅನಿಸ್ತು. ಹೆಚ್ಚು ಮಾತಾಡಿದರೆ ಆಗಲ್ಲ ಎಂದು ಪೊಲೀಸರ ಬಳಿಗೆ ಕಳಿಸಿಕೊಟ್ಟೆ. ಇದನ್ನು ಈಗ ಬೇರೆ ರೀತಿಯಲ್ಲಿ ತಿರುಗಿಸಿದ್ದಾರೆ. ತೊಂದರೆ ಇದೆ ಅಂದಿದ್ದಕ್ಕೆ ಹಣವನ್ನೂ ಕೊಟ್ಟು ಕಳಿಸಿದ್ದೆ. ಒಬ್ಬರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಹೀಗಾಗಿದೆ” ಎಂದು ತಮ್ಮ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ | ಯಡಿಯೂರಪ್ಪ ವಿರುದ್ಧ ಎಫ್ಐಆರ್
ಈ ದೂರಿನ ಹಿಂದೆ ರಾಜಕೀಯ ಪ್ರೇರಿತವೇ ಎಂದು ಕೇಳಿದಾಗ, “ಪ್ರಕರಣ ದಾಖಲಾಗಿದೆ. ರಾಜಕಾರಣ ಯಾರೂ ಮಾಡ್ತಿಲ್ಲ. ಇದನ್ನು ಹೇಗೆ ಎದುರಿಸಬೇಕೋ ಹಾಗೆಯೇ ಎದುರಿಸುವೆ. ಆದರೆ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ” ಎಂದು ತಿಳಿಸಿದರು.
